ಕುಕ್ಕೆ ದೇಗುಲದ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ: ಕೊಳಚೆ ನೀರು ಕುಮಾರಧಾರಾ ನದಿಗೆ, ತನಿಖೆಗೆ ಆದೇಶ
ಮಂಗಳೂರು, ಜೂನ್ 14: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ನಂಬರ್ ಒನ್ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಮಣ್ಯ ದೇವಾಲಯದ ಅಭಿವೃದ್ದಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭಾರೀ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ.
Recommended Video
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಚಿವ ಪೂಜಾರಿ, "ಅಭಿವೃದ್ದಿ ಕಾಮಗಾರಿಯಲ್ಲಿ ಹಲವಾರು ಲೋಪದೋಷಗಳು, ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆಯದೇ ಇರುವುದು ಕಂಡು ಬಂದಿದೆ. ಹಾಗಾಗಿ ಸಮಗ್ರ ತನಿಖೆ ನಡೆಸಲು ಸರಕಾರ ನಿರ್ಧರಿಸಿದೆ"ಎಂದು ಹೇಳಿದರು.
ರಾಜ್ಯಕ್ಕೆ ಭರ್ಜರಿ ಆದಾಯ ತಂದುಕೊಡುವ ಕುಕ್ಕೆ ದೇವಾಲಯದ ಅಭಿವೃದ್ದಿಗೆ, 180 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ಯೋಜನೆ ಹಾಕಲಾಗಿತ್ತು. ಇದರಲ್ಲಿ, ಒಳಚರಂಡಿ ಮತ್ತು ವಸತಿ ಸಮುಚ್ಛಯ ಕಾಮಗಾರಿಯೂ ಸೇರಿದೆ.

ಈ ಯೋಜನೆಯಡಿ ಎಪ್ಪತ್ತು ಕೋಟಿ ರೂಪಾಯಿಯ ಒಳಚರಂಡಿ ನೀರಿನ ಶುದ್ದೀಕರಣ ಘಟಕ ಸರಿಯಾಗಿ ನಿರ್ವಹಣೆಯಿಲ್ಲದೇ, ಕೊಳಚೆ ನೀರು ಕುಮಾರಧಾರಾ ನದಿಗೆ ಸೇರುತ್ತಿದೆ. ಇದೇ ನೀರನ್ನು ಭಕ್ತರು ತೀರ್ಥ ಸ್ನಾನಕ್ಕೆ ಬಳಸುತ್ತಾರೆ. ಜೊತೆಗೆ, ಈ ನೀರು ಕುಡಿಯುವ ನೀರಿನ ಡ್ಯಾಂಗೂ ಹರಿಯುತ್ತಿದೆ.
ಆದಿ ಸುಬ್ರಮಣ್ಯದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯವೂ ನಿರ್ಮಾಣವಾಗಿ ನಾಲ್ಕೈದು ವರ್ಷವಾದರೂ, ಭಕ್ತರ ಉಪಯೋಗಕ್ಕೆ ಬಂದಿಲ್ಲ. 180 ಕೊಠಡಿಯ ಸಮುಚ್ಚಯ ಇದಾಗಿದೆ.
"ಒಳಚರಂಡಿ ಕಾಮಗಾರಿಯ ಸಮಗ್ರ ಮಾಹಿತಿಯನ್ನು ಒಂದು ವಾರದ ಒಳಗೆ ನೀಡಲು ಸೂಚಿಸಲಾಗಿದೆ. ಮಾಸ್ಟರ್ ಪ್ಲಾನ್ ಯೋಜನೆಗೆ ಅಡೆತಡೆಯಾಗಿರುವ ಸಂಪುಟ ನರಸಿಂಹ ಮಠದ ವ್ಯಾಜ್ಯವನ್ನೂ ಬಗೆಹರಿಸುವ ತೀರ್ಮಾನಕ್ಕೂ ಬರಲಾಗಿದೆ"ಎಂದು ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.












Click it and Unblock the Notifications