ಇತಿಹಾಸದ ಪುಟ ಸೇರಲಿದೆಯೆ ಮಂಗಳೂರು ಕಂಬಳ?
ಮಂಗಳೂರು, ನ 25: ನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಮಂಗಳೂರು ಕದ್ರಿ ಮಂಜುನಾಥ ಸ್ವಾಮಿ ದೇವರ 'ಕಂಬಳ' ಇತಿಹಾಸದ ಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ. ಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಇಲ್ಲಿ ಕಂಬಳ ನಡೆಯುವ ಸಾಧ್ಯತೆ ಕ್ಷೀಣಿಸಿದೆ.
ಕಂಬಳ ನಡೆಯುವ ಎರಡು ಎಕರೆ ಗದ್ದೆಯಲ್ಲಿ ಈಗ ಒಂದುವರೆ ಎಕರೆ ಜಮೀನು ಮಾತ್ರ ಕಂಬಳದ ಸಂಘಟಕರಿಗೆ ಉಳಿದಿದೆ. ಕಂಬಳ ಸ್ಪರ್ಧೆಗೆ ವಿಶಾಲವಾದ ಗದ್ದೆ ಬೇಕಾಗಿರುವುದರಿಂದ ಈಗ ಉಳಿದಿರುವ ಒಂದುವರೆ ಎಕರೆ ಗದ್ದೆಯಲ್ಲಿ ಕಂಬಳ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಕಂಬಳ ನಡೆಯುವ ಈ ಗದ್ದೆಯ ಮೂಲ ಮಾಲೀಕರಾದ ಕೊಡಿಯಾಲ ಗುತ್ತಿನವರು ಸರಕಾರದಿಂದ ಡಿಕ್ಲರೇಶನ್ ನೋಟಿಸ್ ಬರಲಿಲ್ಲ ಎನ್ನುವ ಕಾರಣಕ್ಕಾಗಿ ಹೈಕೋರ್ಟ್ ಮೆಟ್ಟಲೇರಿದ್ದರು. ಇಪ್ಪತ್ತು ವರ್ಷಗಳ ನಂತರ ಕಂಬಳ ನಡೆಯುವ ಎರಡು ಎಕರೆ ಗದ್ದೆಯಲ್ಲಿ ಐವತ್ತು ಸೆಂಟ್ಸ್ ಭಾಗವನ್ನು ಕೊಡಿಯಾಲ ಗುತ್ತಿನವರಿಗೆ ನೀಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು.
ತಮ್ಮ ಪಾಲಿಗೆ ಬಂದ ಐವತ್ತು ಗದ್ದೆಯ ಭಾಗವನ್ನು ಗುತ್ತಿನವರು ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಮಾರಿದ್ದರು. ಈ ಸಂಸ್ಥೆ ತಾವು ಖರೀದಿಸಿದ ಗದ್ದೆಯ ಭಾಗದಲ್ಲಿ ಮಣ್ಣನ್ನು ಹಾಕಿ, ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಹಾಗಾಗಿ ಉಳಿದ ಒಂದುವರೆ ಎಕರೆ ಗದ್ದೆಯಲ್ಲಿ ಕಂಬಳ ನಡೆಸಲು ಅಸಾಧ್ಯವಾಗಿದೆ.
ಏನಿದು ಕಂಬಳ: ಕರಾವಳಿ ಕರ್ನಾಟಕದ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ. ಕೋಣವನ್ನು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಈ ಕಂಬಳವನ್ನು ರೈತಾಪಿ ವರ್ಗದವರು ಭತ್ತದ ಕೊಯಿಲಿನ ನಂತರ ಮನೋರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಕ್ರೀಡೆ.
ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಆರಂಭವಾಗುವ ಈ ಜಾನಪದ ಕ್ರೀಡೆಯನ್ನು, ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ. ಈ ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗೆದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ.
ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ. ಗದ್ದೆಯ ಮಣ್ಣಿಗೆ ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಲಾಗುತ್ತದೆ. ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ.
ಈ ಭಾಗದ ಕೆಲವು ಜನಪ್ರಿಯ ಕಂಬಳ ಸ್ಪರ್ಧೆಗಳೆಂದರೆ, ಮೂಡಬಿದರೆ ಮತ್ತು ಪುತ್ತೂರಿನಲ್ಲಿ ನಡೆಯುವ ಕೋಟಿ-ಚೆನ್ನಯ, ವೇಣೂರು, ಶಿರ್ವದಲ್ಲಿ ನಡೆಯುವ ಸೂರ್ಯ-ಚಂದ್ರ, ಮಿಯಾರಿನಲ್ಲಿ ನಡೆಯುವ ಲವ-ಕುಶ, ಉಪ್ಪಿನಂಗಡಿ ಭಾಗದಲ್ಲಿ ನಡೆಯುವ ವಿಜಯ-ವಿಕ್ರಮ, ಐಕಳದಲ್ಲಿ ನಡೆಯುವ ಕಾಂತಬಾರೆ-ಬೂದವಾರೆ ಕಂಬಳ ಸ್ಪರ್ಧೆಗಳು.