Rain: ಕರಾವಳಿ ಭಾಗದಲ್ಲಿ ವರುಣಾರ್ಭಟ: ಹೆಚ್ಚಾಗುತ್ತಿದೆ ಕಡಲ್ಕೊರೆತ.. ಆತಂಕದಲ್ಲಿ ಕಡಲ ಮಕ್ಕಳು
ಮಂಗಳೂರು, ಜೂನ್ 25: ರಾಜ್ಯದ ಅನೇಕ ಭಾಗಗಳಲ್ಲಿ ಬಿಸಿಲು ಹೆಚ್ಚಾಗುತ್ತಿದ್ದರೂ ಸಹ ಕರಾವಳಿಯಲ್ಲಿ ವರುಣಾರ್ಭಟ ಜೋರಾಗಿದೆ. ಇನ್ನೆರಡು ಮೂರು ದಿನ ಧಾರಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮಳೆಯ ಆರ್ಭಟದ ಕಾರಣಕ್ಕೆ ಮಂಗಳೂರು ಸೇರಿದಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ. ಈ ಹೊತ್ತಲ್ಲೇ ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ನೋಡಲು ಚಂದ ಅನಿಸಿದರೂ ಸಮುದ್ರ ತೀರದ ನಿವಾಸಿಗಳು ರಕ್ಕಸ ಗಾತ್ರದ ಅಲೆಗಳ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಈ ಬಾರಿಯೂ ಕಡಲ್ಕೊರೆತ ಹೆಚ್ಚಾಗುವ ಭೀತಿ ಎದುರಾಗಿದೆ.

ಮಂಗಳೂರಿನ ಸುರತ್ಕಲ್ ಮೀನಕಲಿಯ, ಉಳ್ಳಾಲ ಸೋಮೇಶ್ವರ, ಬೆಟ್ಟಪಾಡಿ, ಸಸಿಹಿತ್ಲು ಸಮುದ್ರ ತೀರಗಳಲ್ಲಿ ಈ ಬಾರಿಯೂ ಕಡಲಕೊರತ ದಿನದಿಂದ ದಿನಕ್ಕೆ ಜೋರಾಗಿದೆ. ಬೃಹತ್ ಅಲೆಗಳು ಸಮುದ್ರ ಗಡಿ ದಾಟಿ ಜನರ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಸಮುದ್ರ ತೀರದ ನಿವಾಸಿಗಳು ಕಂಗಾಲಾಗಿದ್ದಾರೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಈ ಹಿಂದೆಯೂ ಸುರತ್ಕಲ್ ಮೀನ ಕಲಿಯ ವ್ಯಾಪ್ತಿಯಲ್ಲಿ ಕಡಲ್ಕೋರೆತದಿಂದ ಅಪಾರ ಹಾನಿಯಾಗಿತ್ತು. ರಸ್ತೆ, ಸೇರಿದಂತೆ ಅನೇಕ ಮನೆಗಳು ಸಮುದ್ರ ಪಾಲಾಗಿತ್ತು. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳುವ ಹೊತ್ತಲ್ಲೇ ಸಮುದ್ರದ ಅಲೆಗಳು ಅದೆಷ್ಟೋ ಮನೆಗಳ ಬಾಗಿಲು ಬಡಿದಿದೆ. ರಾತ್ರಿ ಹಗಲು ನಿದ್ದೆ ಬಿಟ್ಟು. ಕಾಯುವ ಪರಿಸ್ಥಿತಿ ಈ ಸಮುದ್ರ ತೀರದ ನಿವಾಸಿಗಳಿಗೆ ಒದಗಿ ಬಂದಿದೆ.

ಪ್ರತಿ ಬಾರಿ ಸಮಸ್ಯೆ ಉಲ್ಬಣವಾದ ಮೇಲೆ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು ಈ ಬಾರಿಯೂ ಗಾಯಕ್ಕೆ ಮುಲಾಮ್ ಹಚ್ಚುವ ರೀತಿಯಲ್ಲಿ. ಕಡಲ ಕೊರೆತ ತಡೆಯಲು ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದ್ದಾರೆ. ಕೆಲವು ಸಮುದ್ರ ತೀರದ ಪ್ರದೇಶದಲ್ಲಿ ಬೃಹದಾಕಾರದ ಕಲ್ಲುಗಳನ್ನು ಹಾಸಿದ್ದರೆ, ಇನ್ನೂ ಕೆಲವೊಂದಿಷ್ಟು ಪ್ರದೇಶದಲ್ಲಿ ಬೃಹತ್ ಸ್ಯಾಂಡ್ ಬ್ಯಾಗ್ ಅಳವಡಿಸಲಾಗುತ್ತಿದೆ. ಆದರೆ ಇದರಿಂದ ಏನು ಪ್ರಯೋಜನವಿಲ್ಲವೆಂದು ಸುರತ್ಕಲ್ ಮೀನಕಲಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ಬಾರಿಯೂ ಮಳೆಗಾಲ ಬಂದು ಸಮುದ್ರ ಕೊರೆತ ಉಲ್ಬಣವಾದ ಮೇಲೆ ಜಿಲ್ಲಾಡಳಿತ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಆತುರ ಆತುರದಲ್ಲಿ ತಾತ್ಕಾಲಿಕ ಅವೈಜ್ಞಾನಿಕ ಯೋಜನೆಗಳ ಮೊರೆ ಹೋಗೋ ಬದಲು ಕೇರಳ ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯದ ಕಡಲ ಪ್ರದೇಶದಲ್ಲಿ ಅನುಸರಿಸೋ ಯೋಜನೆ ಜಾರಿ ಗೊಳಿಸೋದಕ್ಕೆ ಮುಂದಾಗಬೇಕು. ಕಡಲ ಕೊರೆತ ತಡೆಗಟ್ಟಲು ಶಾಶ್ವತ ಯೋಜನೆಗಳತ್ತ ಗಮನ ಹರಿಸಬೇಕು ಎಂದು ಸಮುದ್ರ ತೀರದ ನಿವಾಸಿಗಳು ಅಗ್ರಹಿಸಿದ್ದಾರೆ.












Click it and Unblock the Notifications