ವಿಶ್ವತುಳು ಪರ್ಬಕ್ಕೆ 50 ಲಕ್ಷ ಅನುದಾನ
ಮಂಗಳೂರು, ನ.25 : ಕರ್ನಾಟಕ ಸರ್ಕಾರ 'ವಿಶ್ವತುಳು ಪರ್ಬ 2014'ಕ್ಕೆ 50 ಲಕ್ಷ ಅನುದಾನ ಘೋಷಣೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಡಿಸೆಂಬರ್ನಲ್ಲಿ ತುಳುಪರ್ಬ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಅಖಿಲ ಭಾರತ ತುಳು ಒಕ್ಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಡಿಸೆಂಬರ್ 12ರಿಂದ 14ರ ವರೆಗೆ ಮಂಗಳೂರಿನ ಅಡ್ಯಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ 'ವಿಶ್ವತುಳು ಪರ್ಬ 2014' ಸಮ್ಮೇಳನ ನಡೆಯಲಿದೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮ್ಮೇಳನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ರಮಾನಾಥ ರೈ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸರ್ಕಾರ 50 ಲಕ್ಷ ರೂ.ಗಳ ಅನುದಾನವನ್ನು ಘೋಷಿಸಿದೆ ಎಂದರು. [3ನೇ ಭಾಷೆಯಾಗಿ ತುಳು: ವಿದ್ಯಾರ್ಥಿಗಳ ಮೊದಲ ಪ್ರಯತ್ನ]
ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿಶ್ವತುಳು ಪರ್ಬ 2014ಅನ್ನು ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ದಾನಿಗಳು ಹಣ ಸಹಾಯ ಮಾಡಲು 100 ರೂ.ಗಳ ಕೂಪನ್ಗಳನ್ನು ಮುದ್ರಿಸಲಾಗಿದೆ ಎಂದು ಪರ್ಬ ಆಯೋಜನಾ ಸಮಿತಿಯ ಸದಸ್ಯರು ಹೇಳಿದರು. [ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ]
ಸಭೆಯಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು, ವಾರ್ತಾ ಇಲಾಖೆಯಿಂದ ವಿಶ್ವತುಳು ಪರ್ಬ 2014ಕ್ಕೆ ಜನರನ್ನು ಆಹ್ವಾನಿಸಲು ನಗರದಲ್ಲಿ 10 ಬೃಹತ್ ಜಾಹೀರಾತುಗಳನ್ನು ಹಾಕಲಾಗುತ್ತದೆ. ತುಳುನಾಡಿನ ಪ್ರತಿಯೊಬ್ಬರಿಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ದೊರೆಯುವಂತೆ ಪ್ರಚಾರ ನಡೆಸಲಾಗುತ್ತದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸಮ್ಮೇಳನಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಸಚಿವರು. ಎಲ್ಲಾ ಇಲಾಖೆಗಳು ಸಮ್ಮೇಳನದ ಯಶಸ್ಸಿಗೆ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ತುಳಸಿ, ಕರ್ನಾಟಕ ತುಳೂ ಸಾಹಿತ್ಯ ಅಕಾಡಮೆ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications