ಅಷ್ಟಮಂಗಲ ಪ್ರಶ್ನೆ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಕ್ಕೆ ದೇವಾಲಯದಲ್ಲಿ ಪೂಜಾ ಗೊಂದಲ
ಮಂಗಳೂರು, ಮಾರ್ಚ್ 10: ನಾಡಿನ ಸುಪ್ರಸಿದ್ದ ನಾಗಾರಾಧನೆಯ ಕ್ಷೇತ್ರ, ಮುಜರಾಯಿ ವ್ಯಾಪ್ತಿಯ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಮಹಾಶಿವರಾತ್ರಿಯಂದು ನಡೆಯುವ ಪೂಜೆಗೆ ಅಪಸ್ವರವೊಂದು ಎದ್ದು, ಕೋರ್ಟ್ ಆದೇಶದ ನಂತರ ತಿಳಿಯಾಗಿದೆ.
ಸುಮಾರು ಏಳು ನೂರು ವರ್ಷಗಳಿಂದ ಕುಕ್ಕೆ ದೇವಾಲಯದಲ್ಲಿ ವೈಷ್ಣವ ಸಂಪ್ರದಾಯದಂತೆ ಪೂಜೆ ನಡೆದುಕೊಂಡು ಬರುತ್ತಿದೆ. ಆದರೆ, ಇತ್ತೀಚೆಗೆ ಕೆಲವು ಸ್ಥಳೀಯ ಭಕ್ತರು ಮತ್ತು ಹಿತರಕ್ಷಣಾ ವೇದಿಕೆಯ ಸದಸ್ಯರು, ಶೈವಾಗಮದ ರೀತಿಯಲ್ಲಿ ಪೂಜೆ ನಡೆಯಬೇಕು ಎಂದು ಧ್ವನಿ ಎತ್ತಲಾರಂಭಿಸಿದ್ದರು.
ಈ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಆರಂಭವಾದ ನಂತರ ದಕ್ಷಿಣಕನ್ನಡ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿಯವರು, ಮುಜರಾಯಿ ಇಲಾಖೆಯ ಅಧಿಕಾರಿಗಳು, ಸುಬ್ರಮಣ್ಯ ಮಠದ ಶ್ರೀಗಳು, ಉಡುಪಿ ಮಠದ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದರು.
ಹದಿನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಹೊರಬಿದ್ದ ಅಂಶವನ್ನು ಮುಂದಿಟ್ಟುಕೊಂಡು, ಈಗ ಪೂಜಾ ಪದ್ದತಿಯಲ್ಲಿ ಬದಲಾವಣೆ ತರಬೇಕು ಎನ್ನುವುದು ಒತ್ತಾಯವಾಗಿತ್ತು. ಕೊನೆಗೆ, ಈ ವಿವಾದ ಕೋರ್ಟ್ ಮೆಟ್ಟಲೇರಿ, ಅಲ್ಲಿಂದ ತೀರ್ಪು ಹೊರಬಿದ್ದಿದೆ. ಏನಿದು ವಿವಾದ?

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ಹಾಕುವ ಪದ್ದತಿ
ಪುರಾತನ ದೇವಾಲಯಗಳ ಜೀರ್ಣೋದ್ದಾರ ಅಥವಾ ಪ್ರಮುಖ ಧಾರ್ಮಿಕ ಕಾರ್ಯಕ್ರಮಕ್ಕೆ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ಹಾಕುವ ಪದ್ದತಿಯಿದೆ. ಅದರಂತೇ, 2007ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಕುಕ್ಕೆ ಕ್ಷೇತ್ರದಲ್ಲಿ ಹಾಕಲಾಗಿತ್ತು. ಆ ವೇಳೆ ದೇವಾಲಯದಲ್ಲಿ ಶೈವ ಪದ್ದತಿಯಂತೆ ಪೂಜೆ ನಡೆಯಬೇಕು ಎನ್ನುವ ಅಂಶ ಹೊರಬಿದ್ದಿತ್ತು. ಈ ದೇವಾಲಯ ಶಿವ-ಪಾರ್ವತಿ ಸುತನದ್ದು, ಹಾಗಾಗಿ, ವೈಷ್ಣವ ಸಂಪ್ರದಾಯದಂತೆ ಪೂಜೆ ನಡೆದರೆ, ಅದು ಸುಬ್ರಮಣ್ಯ ದೇವರಿಗೆ ಸಲ್ಲುವುದಿಲ್ಲ ಎನ್ನುವುದು ಪ್ರಶ್ನೆಯಲ್ಲಿ ಬಂದ ಅಂಶವಾಗಿತ್ತು ಎಂದು ಹೇಳಲಾಗುತ್ತಿದೆ.

ಮಹಾಶಿವರಾತ್ರಿ ಕಾರ್ಯಕ್ರಮ
ಹದಿನಾಲ್ಕು ವರ್ಷಗಳ ಹಿಂದೆ ಈ ಅಂಶ ಹೊರಬಿದ್ದಿದ್ದರೂ, ಕ್ಷೇತ್ರದಲ್ಲಿ ವೈಷ್ಣವ ಸಂಪ್ರದಾಯದಂತೆಯೇ ಪೂಜೆ ನಡೆಯುತ್ತಿತ್ತು. ಆದರೆ, ಮಾರ್ಚ್ ಮೊದಲ ವಾರದಲ್ಲಿ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮ ಶೈವ ಪದ್ದತಿಯಂತೆ ನಡೆಯಬೇಕು ಎನ್ನುವ ಕೂಗು ಇದ್ದಕ್ಕಿದ್ದಂತೆ ಆರಂಭವಾಯಿತು. ಇದಕ್ಕೆ ಕೆಲವು ಸ್ಥಳೀಯರ, ಹಿತರಕ್ಷಣಾ ವೇದಿಕೆ ಮತ್ತು ಮುಜರಾಯಿ ವ್ಯಾಪ್ತಿಯ ಕೆಲವು ಅಧಿಕಾರಿಗಳ ಬೆಂಬಲವೂ ಇತ್ತು.

ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರಿಂದ ತೀವ್ರ ವಿರೋಧ
ಏಳು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪೂಜಾ ಪದ್ದತಿ ಬದಲಾವಣೆಗೆ ಉಡುಪಿ ಅಷ್ಟಮಠದ ಶ್ರೀಗಳು ಮತ್ತು ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರಿಂದ ತೀವ್ರ ವಿರೋಧ ವ್ಯಕ್ತವಾಗಲಾರಾಂಭಿಸಿತು. "ನಾವು ಹಿಂದೂಗಳಲ್ಲವೇ, ಮಾಧ್ವ ಸಂಪ್ರದಾಯದ ಪ್ರಕಾರ ವರ್ಷಾನುವರ್ಷದಿಂದ ಪೂಜೆ ನಡೆದುಕೊಂಡು ಬರುತ್ತಿಲ್ಲವೇ. ಪೂಜಾ ಪದ್ದತಿಯ ಸರಿಯಿರದಿದ್ದಲ್ಲಿ ಮುನ್ಸೂಚನೆ ಸಿಗುತ್ತಿರಲಿಲ್ಲವೇ"ಎಂದು ವಿದ್ಯಾಪ್ರಸನ್ನ ತೀರ್ಥರು ಬೇಸರ ವ್ಯಕ್ತ ಪಡಿಸಿದ್ದರು.

ಮುಜರಾಯಿ ಇಲಾಖೆ
ಈ ವಿಚಾರ ತೀವ್ರಗೊಂಡ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ನ ಈರ್ವರು ಸದಸ್ಯರು ಮುಜರಾಯಿ ಆಯುಕ್ತರಿಗೆ ವರದಿ ಮಾಡಿದ್ದರು. ಆಯುಕ್ತರು ದಿನಾಂಕ 3 .3.2021 ಹಾಗೂ 4.3.2021 ರಂದು ಒಂದೇ ನಮೂನೆಯ ಎರಡು ಆದೇಶಗಳನ್ನು ಹೊರಡಿಸಿದ್ದರಿಂದ ಇದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಇದನ್ನು ಪ್ರಶ್ನಿಸಿ ಇಬ್ಬರು ಹೈಕೋರ್ಟ್ ಮೆಟ್ಟಲೇರಿದ್ದರು. ಅರ್ಜಿಯ ವಿಚಾರಣೆ ಮಂಗಳವಾರ (ಮಾ 9) ನಡೆದು, ಕೋರ್ಟ್ ತನ್ನ ತೀರ್ಪನ್ನು ನೀಡಿದೆ.

ಶಿವರಾತ್ರಿ ಪೂಜೆ ಎಂದಿನಂತೆ ವೈಷ್ಣವ ಸಂಪ್ರದಾಯದಂತೆ, ಕೋರ್ಟ್
ದೇವಳದಲ್ಲಿ ಉಮಾಮಹೇಶ್ವರ ಗುಡಿಯಲ್ಲಿ ಈ ಹಿಂದಿನಂತೆ ಅನೂಚಾನವಾಗಿ ಬಂದಿರುವ ಪದ್ಧತಿಯಂತೆ ಡಿಟ್ಟಂ ಪ್ರಕಾರ ಪೂಜೆ ಅಭಿಷೇಕ ಉತ್ಸವಾದಿಗಳನ್ನು ನೆರವೇರಿಸುವುದು.ಇದನ್ನು ಹೊರತು ಪಡಿಸಿ ಇತರ ಎಲ್ಲಾ ಅಂಶಗಳಿಗೂ ಅನ್ವಯವಾಗುವಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಈ ವರ್ಷ ಶಿವರಾತ್ರಿ ಪೂಜೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶ ನೀಡಿದೆ. ಆ ಮೂಲಕ, ಈ ಬಾರಿಯ ಶಿವರಾತ್ರಿ ಪೂಜೆ ಎಂದಿನಂತೆ ವೈಷ್ಣವ ಸಂಪ್ರದಾಯದಂತೆ ನಡೆಯಲಿದೆ.












Click it and Unblock the Notifications