ತಂದೆಯನ್ನು ಕೊಂದು ಪರಾರಿಯಾಗಿದ್ದ ಮಗನ ಬಂಧನ
ಮಂಗಳೂರು, ಜನವರಿ. 18 : ಆಸ್ತಿ ವಿಚಾರಕ್ಕೆ ತಂದೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು(ಮಗ) ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಉಪ್ಪಿನಂಗಡಿ ಪೊಲೀಸರ ತಂಡ ಮಂಗಳವಾರ ರಾತ್ರಿ ಬಂಟ್ವಾಳ ತಾಲೂಕಿನ ಗಡಿಯಾರ ಎಂಬಲ್ಲಿ ಬಂಧಿಸಿದ್ದಾರೆ.
ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಅಬೂಬಕರ್ ಯಾನೆ ಮೋನು(35) ಆರೋಪಿ ತನ್ನ ತಂದೆ ಆದಂ (55)ನ್ನು ಆಸ್ತಿ ವಿವಾದಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡುದ್ದ.[ಉಪ್ಪಿನಂಗಡಿ : ಆಸ್ತಿ ವಿವಾದದಲ್ಲಿ ತಂದೆಯನ್ನೇ ಕೊಂದ ಮಗ]
ಕಳೆದ ಶನಿವಾರ ಉಪ್ಪಿನಂಗಡಿಯ ಹಳೆ ಬಸ್ನಿಲ್ದಾಣದ ಸಮೀಪವಿರುವ ತನ್ನ ತರಕಾರಿ ಅಂಗಡಿಯಲ್ಲಿ ಆಸ್ತಿ ವಿಚಾರವಾಗಿ ತಂದೆ ಆದಂರೊಂದಿಗೆ ಜಗಳವಾಡಿ, ತಂದೆಗೆ ರಾಡ್ ನಿಂದ ಹಲ್ಲೆ ನಡೆಸಿದ್ದ.

ಬಳಿಕ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ತನಕ ಅಲ್ಲಿಯೇ ಇದ್ದ ಆತ ತಂದೆಗೆ ಪ್ರಜ್ಞೆ ಬಾರದಿರುವುದನ್ನು ಗಮನಿಸಿ ಅಲ್ಲಿಂದ ತಲೆಮರೆಸಿಕೊಂಡಿದ್ದ.
ಸೋಮವಾರ ಬೆಳಗ್ಗೆ ಆದಂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ಅಬೂಬಕರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ನಡೆಸಿದ್ದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ನಿರ್ದೇಶನದಂತೆ ಆರೋಪಿ ಪತ್ತೆಗಾಗಿ ಪುತ್ತೂರು ಗ್ರಾಮಾಂತರ ಇನ್ಸ್ಪೆಕ್ಟರ್ ಅನಿಲ್ ಕುಲಕರ್ಣಿ, ಅಪರಾಧ ಪತ್ತೆ ದಳದ ಅಮಾನುಲ್ಲಾ ನೇತೃತ್ವದ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ಮಂಗಳವಾರ ಬೆಳಗ್ಗೆ ಆರೋಪಿ ಬೆಂಗಳೂರಿಗೆ ಪರಾರಿಯಾಗುವ ವೇಳೆ ಗಡಿಯಾರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಆತನನ್ನು ಬಂಧಿಸಿದ್ದಾರೆ.
ಬಳಿಕ ಹಲ್ಲೆ ನಡೆದ ತರಕಾರಿ ಅಂಗಡಿಗೆ ಆರೋಪಿಯನ್ನು ಕರೆ ತಂದ ಪೊಲೀಸ್ ತಂಡ ಸ್ಥಳ ಮಹಜರು ನಡೆಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.












Click it and Unblock the Notifications