ಮಂಗಳೂರು: ಕಳ್ಳತನದ ಆರೋಪಿ ಲಾಕ್ಅಪ್ ಡೆತ್; ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆಗೆ ಒತ್ತಾಯ
ಮಂಗಳೂರು, ಫೆಬ್ರವರಿ 19: ಕಳ್ಳತನದ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿ ಲಾಕ್ಅಪ್ನಲ್ಲೇ ಸಾವಿಗೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಂದರು ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದ್ದು, ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿಯ ನಿವಾಸಿ ರಾಜೇಶ್ ಕುಮಾರ್ ಮೃತ ಆರೋಪಿಯಾಗಿದ್ದಾನೆ.
ಶುಕ್ರವಾರ ಮುಂಜಾನೆ ವೇಳೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗೆಂದು ರಸ್ತೆ ಬದಿಯಲ್ಲಿ ತಂದಿಡಲಾಗಿದ್ದ ಕಬ್ಬಿಣದ ಸರಳುಗಳನ್ನು ಕದಿಯುತ್ತಿದ್ದ ವೇಳೆ ಆರೋಪಿ ರಾಜೇಶ್, ಬೀಟ್ನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಮಧ್ಯಾಹ್ನದ ವೇಳೆಗೆ ರಾಜೇಶ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಪೊಲೀಸರು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ರಾಜೇಶ್ ಮೃತಪಟ್ಟಿರುವುದು ಗೊತ್ತಾಗಿದೆ.
ಮೃತ ರಾಜೇಶ್ ಕುಮಾರ್ಗೆ 32 ವರ್ಷ ಪ್ರಾಯವಾಗಿದ್ದು, ಉರ್ವಾ ಮಾರ್ಕೆಟ್ ಹತ್ತಿರದ ಮಾರಿಯಮ್ಮ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದಾರೆ. ರಾಜೇಶ್ ತನ್ನ ಸ್ನೇಹಿತ ಸುರತ್ಕಲ್ನ ಸತೀಶ್ ಎಂಬಾತನ ಜೊತೆ ಕಬ್ಬಿಣದ ಸರಳು ಕದಿಯುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಇವರಿಬ್ಬರು ಕುಡಿತಕ್ಕೆ ದಾಸರಾಗಿದ್ದು, ಕುಡಿತದ ಚಟ ಹೆಚ್ಚಾದಂತೆ ಮದ್ಯ ಖರೀದಿಗಾಗಿ ಕಳ್ಳತನಕ್ಕಿಳಿದಿದ್ದರು. ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಗೆ ತಂದಿಟ್ಟ ಕಬ್ಬಿಣದ ಸರಳನ್ನು ಕದ್ದೊಯ್ಯುವ ಸಮಯದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಶುಕ್ರವಾರ ಬೆಳಗಿನ ಜಾವ 3.30ರ ಸಮಯದಲ್ಲಿ ರಾಜೇಶ್ ಮತ್ತು ಸತೀಶ್ ಮಂಗಳೂರು ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗೆ ತಂದಿಟ್ಟಿದ್ದ ಕಬ್ಬಿಣದ ಸರಳುಗಳನ್ನು ಕದ್ದೊಯ್ಯುವ ಯತ್ನ ನಡೆಸಿದ್ದರು. ಇದನ್ನು ಗಮನಿಸಿದ್ದ ಬೀಟ್ ಗಸ್ತಿನಲ್ಲಿದ್ದ ಪೊಲೀಸರು ಈ ಇಬ್ಬರು ಕಳ್ಳರನ್ನು ಹಿಡಿದು ಬಂದರು ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಕುಡಿತದ ಚಟಕ್ಕಾಗಿ ಈ ಕಳ್ಳತನ ಕೃತ್ಯ ಮಾಡಿರುವುದಾಗಿ ಹೇಳಿಕೊಂಡಿದ್ದರು.
ಸೆಲ್ನಲ್ಲಿದ್ದ ಈ ಇಬ್ಬರು ಆರೋಪಿಗಳಲ್ಲಿ ರಾಜೇಶ್ ಸಂಜೆಯಾಗುತ್ತಲೇ ಎದೆನೋವು ಎಂದು ಹೇಳಿಕೊಂಡಿದ್ದಾನೆ. ತಕ್ಷಣ ಪೊಲೀಸ್ ಜೀಪ್ನಲ್ಲಿ ಆತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ತಪಾಸಣೆ ನಡೆಸಿದ ವೈದ್ಯರು, ರಾಜೇಶ್ ಮೃತರಾಗಿರುವುದಾಗಿ ಹೇಳಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿದ್ದರು. ಆಸ್ಪತ್ರೆ ವೈದ್ಯರು, ರಾಜೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. ಮೃತ ರಾಜೇಶ್ ಹದಿನೆಂಟನೇ ವಯಸ್ಸಿನಿಂದಲೇ ಕುಡಿತದ ಚಟ ಹೊಂದ್ದಿದ್ದು, ಸ್ನೇಹಿತರ ಜೊತೆ ರಾತ್ರಿಹೊತ್ತು ಸುತ್ತಾಟ ನಡೆಸುತ್ತಿದ್ದ ಎಂಬುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ನಡುವೆ ಕಳ್ಳತನ ಪ್ರಕರಣದಲ್ಲಿ ಪೊಲೀಸ್ ಕಷ್ಟಡಿಯಲ್ಲಿದ್ದಾಗ ಸಾವು ಸಂಭವಿಸಿರುವುದರಿಂದ ಯಾಕಾಗಿ ಸಾವು ಸಂಭವಿಸಿತು ಎಂದು ಕುಟುಂಬಸ್ಥರು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಠಾಣೆಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಎಲ್ಲಾ ದಾಖಲೆಗಳು ಲಭ್ಯವಿರುತ್ತವೆ. ಸೆಲ್ ಮುಂಭಾಗದಲ್ಲೂ ಸಿಸಿ ಕ್ಯಾಮರಾ ಇದೆ. ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದೇನೆ ಎಂದು ಕಮೀಷನರ್ ಹೇಳಿದ್ದಾರೆ.
ರಾಜೇಶ್ ಬೆಳಗಿನ ಜಾವ ಮನೆಯ ಪರಿಸರದಲ್ಲಿದ್ದು, ರಾತ್ರಿ ವೇಳೆ ತಿರುಗಾಡುವ ಚಟವನ್ನು ಹೊಂದಿದ್ದ. ದಿನ ಪೂರ್ತಿ ಕುಡಿತದ ನಶೆಯಲ್ಲಿರುವುದೇ ರಾಜೇಶ್ಗೆ ಹವ್ಯಾಸ ವಾಗಿಬಿಟ್ಟಿತ್ತು. ಕೆಲಸ ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕುಡಿಯುವುದಕ್ಕೆ ಯಾರನ್ನಾದರೂ ಕಾಡಿ, ಬೇಡಿ ಅಥವಾ ಸಣ್ಣ- ಪುಟ್ಟ ವಸ್ತುಗಳನ್ನು ಕದ್ದು ಹಣ ಹೊಂದಿಸುತ್ತಿದ್ದರು ಎಂದು ತಿಳಿದುಬಂದಿದೆ.
ತನಿಖೆಯ ಬಳಿಕ ಸಿಐಡಿಯಿಂದಲು ಪ್ರಕರಣದ ಕುರಿತು ತನಿಖೆ ನಡೆಸಲು ಅವಕಾಶವಿದೆ. ಪೋಸ್ಟ್ ಮಾರ್ಟಂ ವರದಿಯನ್ನು ಸಹ ವಿಡಿಯೋ ರೆಕಾರ್ಡ್ ಮಾಡಿಯೇ ತಯಾರಿಸಲಾಗುತ್ತದೆ. ಸದ್ಯ ಪೋಸ್ಟ್ ಮಾರ್ಟಂ ರಿಪೋರ್ಟ್ ಪೊಲೀಸರ ಕೈ ಸೇರಬೇಕಿದೆ.
ಒಟ್ಟಿನಲ್ಲಿ ರಾಜೇಶ್ ಸಾವು ಯಾಕಾಯ್ತು ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಾಗಿದೆ. ರಾಜೇಶ್ ಕುಟುಂಬಸ್ಥರು ಇದೊಂದು ಸಂಶಯಾಸ್ಪದ ಸಾವು ಅಂತಾ ಹೇಳಿದ್ದು, ತನಿಖೆಯ ಬಳಿಕವಷ್ಟೇ ಈ ಎಲ್ಲಾ ಸಂಶಯಗಳಿಗೆ ಉತ್ತರ ದೊರಕಲಿದೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications