ಮಂಗಳೂರು ದಕ್ಷಿಣ: ಬಿಜೆಪಿ ಟಿಕೆಟ್ ಜಗಳ, ಕಾಂಗ್ರೆಸ್ಗೆ ಲಾಭ?
ಮಂಗಳೂರು, ಏಪ್ರಿಲ್ 05: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಟಿಕೆಟ್ಗಾಗಿ ನಡೆಯುತ್ತಿರುವ ಪೈಪೋಟಿ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ಪಾಳಯದಲ್ಲಿ ಭಾರೀ ಲಾಬಿ ನಡೆಯುತ್ತಿದೆ. ಈ ಕ್ಷೇತ್ರದಿಂದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮುದಾಯಕ್ಕೆ ಸೇರಿದ ಬಿಜೆಪಿ ಮುಖಂಡರಾದ ವೇದವ್ಯಾಸ್ ಕಾಮತ್ ಹಾಗೂ ಬದ್ರಿನಾಥ್ ಕಾಮತ್ ಟಿಕೆಟ್ ಗಾಗಿ ಜಿದ್ದಾಜಿದ್ದಿನ ಸ್ಪರ್ದೆ ನಡೆಸಿದ್ದಾರೆ. ಈ ನಡೆವೆ ಬಿಜೆಪಿಯಿಂದ ಉಚ್ಚಾಟಿತ ಜಿ.ಎಸ್.ಬಿ ಸಮುದಾಯದ ಇನ್ನೋರ್ವ ಮುಖಂಡ ಶ್ರೀಕರ್ ಪ್ರಭು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ.
ಮಂಗಳೂರು ದಕ್ಷಿಣದಲ್ಲಿ ಬಿಜೆಪಿ ಗೆಲುವಿಗೆ ಉಚ್ಛಾಟಿತ ಶ್ರೀಕರ್ ಪ್ರಭು ಅಡ್ಡಗಾಲು
ಕಮಲ ಪಾಳಯದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ಗೆ ವರದಾನವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಜಿದ್ದಾಜಿದ್ದಿ ಕಾಂಗ್ರೆಸ್ ಗೆ 'ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದೂ ಹಾಕು ಅನ್ನ'ದಂತಹ ಪರಿಸ್ಥಿತಿಯನ್ನು ಬಿಜೆಪಿಯೇ ತಂದೊಡ್ಡಿದೆ.
ಬಿಜೆಪಿಯ ಈ ಆತಂತರಿಕ ಪೈಪೋಟಿ ಮುಂಬರುವ ಚುನಾವಣೆಯಲ್ಲಿ ಹಿಂದುತ್ವದ ಮತಗಳು ವಿಭಜನೆಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸ್ತುತ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಜೆ.ಆರ್.ಲೋಬೊ ಶಾಸಕರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎರಡನೇ ಬಾರಿಗೆ ಲೋಬೊ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಬಿಜೆಪಿಯ ಭದ್ರ ಕೋಟೆಯಾಗಿದ್ದ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಬಿಜೆಪಿ ಕಳೆದ ಬಾರಿಯ ಚುನಾವಣೆಯಲ್ಲಿ ಕಳೆದು ಕೊಂಡಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದ ಆಡಳಿತ ವಿರೋಧಿ ಅಲೆ ಲೋಬೊ ಅವರನ್ನು ಗೆಲುವಿನ ದಡ ಸೇರಿಸಿತ್ತು.
ಕ್ಷೇತ್ರ ಪರಿಚಯ: ಮಂಗಳೂರು ನಗರ ದಕ್ಷಿಣ ಮತ್ತೆ ಬಿಜೆಪಿ ತೆಕ್ಕೆಗೆ?
ಆದರೆ ಈ ಬಾರಿಯೂ ಅಂತಹದೇ ಪರಿಸ್ಥಿಯತಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಸೃಷ್ಠಿಯಾಗಿದೆ. 1989 ರಲ್ಲಿ ಕಾಂಗ್ರೆಸ್ನ ಬ್ಲೇಸಿಯಸ್ ಡಿಸೋಜಾ ಗೆದ್ದ ಬಳಿಕ ಈ ಕ್ಷೇತ್ರದಲ್ಲಿ ಸತತವಾಗಿ 4 ಬಾರಿ ಬಿಜೆಪಿಯ ಯೋಗಿಶ್ ಭಟ್ ಗೆದ್ದು ಶಾಸಕರಾಗಿದ್ದರು. ಆದರೆ ಕಳೆದ ಬಾರಿ ಜೆ.ಆರ್.ಲೋಬೊ ಎದುರು ಪರಾಭವಗೊಂಡರು.
ಈ ಕ್ಷೇತ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರಾಭಲ್ಯವಿದೆ. ಬಿಜೆಪಿಯ ಈ ಆಂತರಿಕ ಕಲಹದಿಂದ ಈ ಸಮುದಾಯದ ಮತಗಳು ವಿಭಾಜನೆಗೊಂಡರೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಕನಸಿನ ಮಾತು ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬಿಜೆಪಿ ವೇದವ್ಯಾಸ್ ಕಾಮತ್ ಗೆ ಟಿಕೆಟ್ ನೀಡಿದರೆ ಬದ್ರಿನಾಥ್ ಕಾಮತ್ ಬೆಂಬಲಿಗರು ವೇದವ್ಯಾಸ್ ಕಾಮತ್ ವಿರುದ್ದವಾಗಿ ಕೆಲಸ ಮಾಡಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಆದರೆ ಬದ್ರಿನಾಥ್ ಕಾಮತ್ ಗೆ ಟಿಕೆಟ್ ದೊರಕಿದ್ದೇ ಆದಲ್ಲಿ ವೇದವ್ಯಾಸ್ ಕಾಮತ್ ಬೆಂಬಲಿಗರ ಪಡೆ ಬದ್ರಿನಾಥ್ ಕಾಮತ್ ವಿರುದ್ದ ಫೀಲ್ಡ್ಗೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಶ್ರೀಕರ್ ಪ್ರಭು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿಯ ಮತ ವಿಭಜನೆ ಗೊಳ್ಳಲಿದೆ.
ಈ ಎಲ್ಲಾ ಅಡೆತಡೆ, ಭಿನ್ನಾಭಿಪ್ರಾಯ, ಆಂತರಿಕ ಜಿದ್ದಾಜಿದ್ದಿಯ ಪರಿಸ್ಥಿತಿಯನ್ನು ಅವಲೋಕಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾರಿಗೆ ಆಭ್ಯರ್ಥಿಯಾಗುವ ಅವಕಾಶ ಕಲ್ಪಿಸಲಿದ್ದಾರೆ ಹಾಗೂ ಈ ಆಂತರಿಕ ಕಚ್ಚಾಟವನ್ನು ಹೇಗೆ ಶಮನಗೊಳಿಸುತ್ತಾರೆ ಎಂಬುದೇ ಕುತೂಹಲವಾಗಿದೆ.