ಬಂಟ್ವಾಳದಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ರಮಾನಾಥ್ ರೈ ಸಂದರ್ಶನ

ಮಂಗಳೂರು, ಮೇ 09 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆಬೀಳಲು ಇನ್ನೆರಡು ದಿನ ಬಾಕಿ ಉಳಿದಿದೆ. ಈ ಸೀಮಿತ ಕಾಲಾವಕಾಶದಲ್ಲಿ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ತಾರಾ ಪ್ರಚಾರಕರ ಅಬ್ಬರ ಹುಣ್ಣಿಮೆಗೆ ಸಿಕ್ಕ ಕಡಲ ಅಲೆಯಂತಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಡುವೆಯೇ ಜಿದ್ದಾಜಿದ್ದಿಯ ನೇರ ಸ್ಪರ್ಧೆಗೆ ಅಖಾಡ ಸಿದ್ದಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಮೂಡಿಸಿರುವ ಕ್ಷೇತ್ರ ಬಂಟ್ವಾಳ ವಿಧಾನಸಭಾ ಕ್ಷೇತ್ರ. ಬಿಜೆಪಿಯ ರಾಜೇಶ್ ನಾಯ್ಕ್ ಹಾಗು ಕಾಂಗ್ರೆಸ್ ನ ರಮಾನಾಥ್ ರೈ ವಿರುದ್ಧ ಹೈ ವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಹಲವಾರು ವಿವಾದ, ಆರೋಪಗಳಿಗೆ ಗುರಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಚಿವ ರಮಾನಾಥ್ ರೈ ಕ್ಷೇತ್ರದಲ್ಲೆಲ್ಲಾ ಕಾಲಿಗೆ ಚಕ್ರ ಕಟ್ಟಿ ಸುತ್ತುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಒನ್ಇಂಡಿಯಾ ಕನ್ನಡದೊಂದಿಗೆ ರಮಾನಾಥ್ ರೈ ಮಾತನಾಡಿ ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರ : ಚುನಾವಣೆಗೆ ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಉಳಿದುಕೊಂಡಿವೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪ್ರಚಾರಕಾರ್ಯ ಹೇಗೆ ನಡೆಯುತ್ತಿದೆ?

ರಮಾನಾಥ್ ರೈ : ನಿಜ ಹೇಳಬೇಕೆಂದರೆ ನಾನು ಚುನಾವಣೆಯ ಪ್ರಚಾರದ ಬಗ್ಗೆ ಅಷ್ಟೊಂದು ತಲೆ ಕಡಿಸಿಕೊಂಡಿಲ್ಲ. ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ತಿರುಗಾಡಿದ್ದೇನೆ. ಸಾಮಾಜಿಕ ಬದುಕು, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜನರ ಆಶೋತ್ತರಗಳನ್ನು ಈಡೇರಿಸಿದ್ದೇನೆ. ಕ್ಷೇತ್ರದ ಮೂಲೆ ಮೂಲೆಯ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ .ಈ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದಲೂ ನನ್ನ ಪ್ರಚಾರ ಕಾರ್ಯ ನಡೆದೇ ಇದೆ. ಆದರೂ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಕಾರ್ಯಕರ್ತರು ಪರಿಶ್ರಮ ಪಡುತ್ತಿದ್ದಾರೆ.

Bantwal assembly Elections : Congress candidate Ramanath Rai interview

ಪ್ರ : ಈ ಚುನಾವಣೆಯಲ್ಲಿ ಯಾವ ವಿಚಾರಗಳನ್ನು ಮುಂದಿಟ್ಟು ಜನರ ಮುಂದೆ ಹೋಗುತ್ತಿದ್ದೀರಿ?

ರಮಾನಾಥ್ ರೈ : ಪ್ರತಿ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರವನ್ನೇ ಜನರ ಮುಂದಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿದವನು ನಾನು. ಕ್ಷೇತ್ರದ ಯಾವ ಹಳ್ಳಿಗೆ ಹೋದರೂ ಅಲ್ಲಿ ಶೇಕಡಾ 99ರಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಜನರು ಅವುಗಳನ್ನು ಗೌರವದಿಂದ ನೆನೆಯುತ್ತಾರೆ. ಸಣ್ಣಪುಟ್ಟ ಕೆಲ ಕೆಲಸಗಳು ಬಾಕಿ ಉಳಿದುಕೊಂಡಿವೆ ಅವುಗಳನ್ನು ಪೂರೈಸಬೇಕಿದೆ. ಕ್ಷೇತ್ರದಲ್ಲಿ ಎಲ್ಲೇ ಹೋಗಿ ಅಲ್ಲಿಯ ಜನರು ರಮಾನಾಥ್ ರೈ ಕೆಲಸ ಮಾಡಿದ್ದಾರೆ ಎಂದೇ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದೆ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ವಿಚಾರವನ್ನು ಜನರ ಮುಂದೆ ಇಡುತ್ತಿದ್ದೇನೆ.

ಪ್ರ : ದಕ್ಷಿಣ ಕನ್ನಡ ಜಿಲ್ಲೆಯ ಹಾಗು ನಿಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ನಿಮ್ಮ ದೃಷ್ಠಿಕೋನ?

ರಮಾನಾಥ್ ರೈ : ಜಿಲ್ಲೆಯ ಸಮಗ್ರ ಅಭಿವೃದ್ದಿಯಾಗಬೇಕು ಎನ್ನುವುದು ನನ್ನ ಕನಸು, ಈ ಹಿಂದೆ ಕಾಂಗ್ರೆಸ್ ನ ಹಿರಿಯ ನಾಯಕರು ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಶ್ರೀನಿವಾಸ ಮಲ್ಯರ ಕಾಲದಲ್ಲಿ ಹಲವಾರು ಕ್ರಾಂತಿಕಾರಿ ಅಭಿವೃದ್ದಿ ಕಾರ್ಯಗಳು ನಡೆದಿದೆ. ಈಗ ಪಶ್ಚಿಮ ವಾಹಿನಿ ಯೋಜನೆ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಜಿಲ್ಲೆಯ ಅಂತರ್ಜಲ ಮಟ್ಟವನ್ನ ಹೆಚ್ಚಿಸಲು ಈ ಯೋಜನೆ ಅತ್ಯಂತ ಪ್ರಮುಖವಾದುದು. ಇದಕ್ಕಾಗಿ ಈಗಾಗಲೇ 300 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ಕಾಮಗಾರಿ ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ಕೂಡ ಪಶ್ಚಿಮವಾಹಿನಿ ಯೋಜನೆಗೆ ಹಣ ನೀಡುವ ಭರವಸೆ ನೀಡಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಅದರಲ್ಲೂ ಗ್ರಾಮೀಣ ಭಾಗದ ರಸ್ತೆಗಳ ಶಾಶ್ವತ ಕಾಮಗಾರಿಗಳ ಬಗ್ಗೆ ಚಿಂತನೆ ಇದೆ. ಮಂಗಳೂರಿನ ಜಿಲ್ಲಾಧಿಕಾರಿಗಳ ನೂತನ ಕಚೇರಿ ಹಾಗೂ ಅಂಬೇಡ್ಕರ್ ಭವನಗಳ ನಿರ್ಮಾಣ, ಮಂಗಳೂರು ಏರ್ಪೋರ್ಟ್ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ, ಜಿಲ್ಲೆಯಲ್ಲಿ ಪಶು ವೈದ್ಯಕೀಯ ಕಾಲೇಜು ಕಾಮಗಾರಿ ಆರಂಭವಾಗಬೇಕಿದೆ. ಜಿಲ್ಲೆಯಾದ್ಯಂತ ಬಹುಗ್ರಾಮ ಕುಡಿಯುವ ಯೋಜನೆ ಜಾರಿಗೆ ತರಬೇಕೆಂಬ ದೃಷ್ಟಿಕೋನ ಹೊಂದಿದ್ದೇನೆ.

ಪ್ರ : ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ದ ನಡೆಯುತ್ತಿರುವ ಪೋಸ್ಟರ್ ವಾರ್ ಕುರಿತು ನಿಮ್ಮ ಅನಿಸಿಕೆ ಏನು?

ರಮಾನಾಥ್ ರೈ : ಇದೆಲ್ಲಾ ಬಿಜೆಪಿಯವರು ಮಾಡುತ್ತಿರುವುದು. ಬಿಜೆಪಿಯವರ ಕಾರ್ಯಕರ್ತರು ತಮ್ಮ ಮನೆಗಳ ಮುಂದೆ ಕಾಂಗ್ರೆಸ್ ಬಹಿಷ್ಕಾರದ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಅಷ್ಟೆ. ಬಿಜೆಪಿ ವಿರುದ್ದವೂ ಈಗ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಇದಕ್ಕೆಲ್ಲಾ ಅಷ್ಟು ಮಹತ್ವ ನೀಡುವ ಅಗತ್ಯ ಇಲ್ಲ. ಬಿಜೆಪಿಯವರು, ಜನರಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅದೇ ಅವರ ಬಂಡವಾಳ.

Bantwal assembly Elections : Congress candidate Ramanath Rai interview

ಪ್ರ : ಬಂಟ್ವಾಳದಲ್ಲಿ ನಡೆಯಲಿರುವ ಚುನಾವಣೆ ರಾಮ ಮತ್ತು ಅಲ್ಲಾಹುವಿನ ನಡುವೆ ನಡೆಯುವ ಚುನಾವಣೆಯೇ?

ರಮಾನಾಥ್ ರೈ : ಇದು ಸರಿಯಲ್ಲ. ಈ ಹೇಳಿಕೆ ನೀಡಿದ ಸುನಿಲ್ ಕುಮಾರ್ ಗೆ ತಿಳಿವಳಿಕೆ ಇಲ್ಲ. ಇಂತಹ ಸಣ್ಣ ಮಾತುಗಳನ್ನು ಹೇಳಬಾರದು. ರಾಜಕೀಯ ದೃಷ್ಟಿಕೋನದಿಂದ ಈ ರೀತಿಯ ಹೇಳಿಕೆಗಳನ್ನು ಬಿಜೆಪಿ ಮುಖಂಡ ಸುನಿಲ್ ಕುಮಾರ್ ನೀಡುತ್ತಿದ್ದಾರೆ. ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ.

ಪ್ರ : ಎಸ್ ಡಿ ಪಿ ಐ ಒಂದು ಕೋಮುವಾದಿ ಶಕ್ತಿ ಎಂದು ಕಿಡಿಕಾರುತ್ತಿದ್ದ ರಮಾನಾಥ ರೈ, ಚುನಾವಣೆ ಸಂದರ್ಭದಲ್ಲಿ ಅದೇ ಎಸ್ ಡಿಪಿಐ ಬೆಂಬಲ ಬಯಸಿದ್ದಾದರೂ ಯಾಕೆ?

ರಮಾನಾಥ್ ರೈ : ಎಸ್ ಡಿಪಿಐ ಅವರಲ್ಲಿ ನಾವು ಬೆಂಬಲ ಕೇಳಿಲ್ಲ. ಅದರ ಅವಶ್ಯಕತೆಯೇ ನಮಗೆ ಇಲ್ಲ. ಅವರು ಕಾಂಗ್ರೆಸ್ ನ್ನು ಬೆಂಬಲಿಸುತ್ತಾರೆ ಎಂದಾದರೆ ಅದು ಅವರಿಗೆ ಬಿಟ್ಟ ವಿಚಾರ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅವರು ಯಾರನ್ನು ಚುನಾವಣೆಗೆ ನಿಲ್ಲಿಸುತ್ತಾರೆ, ಯಾರನ್ನ ಹಿಂದೆ ಪಡೆಯುತ್ತಾರೆ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಇಂದಿಗೂ ನಾನು ಮತೀಯವಾದಿ ವಿಚಾರಧಾರೆಯನ್ನು ವಿರೋಧಿಸುತ್ತೇನೆ. ಹಿಂದೂ ಕೋಮುವಾದ ಇರಬಹುದು, ಅಥವಾ ಮುಸ್ಲಿಂ ಕೋಮುವಾದ ಇರಬಹುದು, ಎರಡನ್ನೂ ವಿರೋಧಿಸುತ್ತೇನೆ, ಹಾಗಾಗಿ ನಾನೋಬ್ಬ ಜಾತ್ಯಾತೀತವಾದಿ.

ಪ್ರ : ಬಂಟ್ವಾಳ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪ್ರಚಾರ ಮತಗಳಾಗಿ ಪರಿವರ್ತನೆ ಆಗುವುದೇ?

ರಮಾನಾಥ್ ರೈ : ಖಂಡಿತವಾಗಿಯೂ ಮತಗಳಾಗಿ ಪರಿವರ್ತನೆಯಾಗುತ್ತದೆ. ಬಂಟ್ವಾಳದಲ್ಲಿ ಬಹಿರಂಗ ಸಭೆ ನಡೆದದ್ದು, ಶುಕ್ರವಾರದ ಮಧ್ಯಾಹ್ನ 12 ಗಂಟೆಗೆ, ಆ ಸಮಯಕ್ಕೆ ಅಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿದ್ದು, ಬಂಟ್ವಾಳ ಚರಿತ್ರೆಯಲ್ಲಿಯೇ ಪ್ರಥಮ. ಇನ್ನು ಕ್ಷೇತ್ರದಲ್ಲಿ ನಾನು ನಿರಂತರ ಅಭಿವೃದ್ಗಿ ಕೆಲಸ ಮಾಡಿದ್ದೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+