ಚೈತ್ರಾ ಕುಂದಾಪುರಗೆ ಷರತ್ತು ಬದ್ಧ ಜಾಮೀನು ಮಂಜೂರು
ಮಂಗಳೂರು, ನವೆಂಬರ್. 6: ಕುಕ್ಕೆ ಸುಬ್ರಹ್ಮಣ್ಯದ ಬೀದಿ ಕಾಳಗ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಅವರಿಗೆ ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಹಿಂದೂ ಜಾಗರಣೆ ವೇದಿಕೆ ಮುಖಂಡ ಗುರು ಪ್ರಸಾದ್ ಪಂಜ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಅವರಿಗೆ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದ ಬೀದಿ ಜಗಳವಾಗಿ ಪರಿಣಮಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ವೈರತ್ವ ಬೀದಿ ಕಾಳಗವಾಗಿ ಮಾರ್ಪಟ್ಟಿತ್ತು. ಅಕ್ಟೋಬರ್.24ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಚೈತ್ರಾ ಕುಂದಾಪುರ ಮತ್ತವರ ತಂಡ ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಅವರ ಮೇಲೆ ಹಲ್ಲೆ ನಡೆಸಿತ್ತು.

ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳಿಂದ ಸುಬ್ರಹಣ್ಯ ಸ್ಟೇಷ್ ನಲ್ಲಿ ದೂರು ದಾಖಲಿಸಲಾಗಿತ್ತು. ಹಲ್ಲೆಯಲ್ಲಿ ಗುರು ಪ್ರಸಾದ್ ಪಂಜ ಗಂಭೀರವಾಗಿ ಗಾಯಗೊಂಡಿದ್ದರು. ಚೈತ್ರಾ ಕುಂದಾಪುರ ಸಹಿತ ಅವರ ತಂಡದ 7 ಮಂದಿಯನ್ನು ಪೊಲೀಸರು ಅಕ್ಟೋಬರ್ 24 ರಂದೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸುಳ್ಯ ನ್ಯಾಯಾಲಯ ಚೈತ್ರಾ ಮತ್ತವರ ತಂಡಕ್ಕೆ ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು . ಆದರೆ ಅಕ್ಟೋಬರ್ 3 ರಂದು ಅನಾರೋಗ್ಯದ ನೆಪವೊಡ್ಡಿ ನ್ಯಾಯಾಲಯಕ್ಕೆ ಹಾಜರಾಗದ ಚೈತ್ರಾ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸುಳ್ಯ ನ್ಯಾಯಾಲಯದ ನ್ಯಾಯಾಧೀಶರು ನವೆಂಬರ್ 5 ರಂದು ಹಾಜರಿರುವಂತೆ ಸೂಚಿಸಿದರು.
ನವೆಂಬರ್ 5 ರಂದು ನ್ಯಾಯಾಲಯದ ವಿಚಾರಣೆಗೆ ಹಾಜರಾದ ಚೈತ್ರಾ ಕುಂದಾಪುರ ಹಾಗೂ ಅವರ ತಂಡದ ಸದಸ್ಯರಿಗೆ 14 ದಿನಗಳ ಬಂಧನವನ್ನು ಸುಳ್ಯ ನ್ಯಾಯಾಲಯ ವಿಧಿಸಿತ್ತು.
ಆದರೆ ಇತ್ತ ಪುತ್ತೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಚೈತ್ರಾ ಜಮೀನು ಅರ್ಜಿಯ ವಿಚಾರಣೆ ನಡೆದಿತ್ತು. ವಿಚಾರಣೆ ನಡೆದ ಬಳಿಕ ನ್ಯಾಯಾಧೀಶರು ಚೈತ್ರಾ ಕುಂದಾಪುರ ಹಾಗೂ ಅವರ ತಂಡದ ಸದಸ್ಯರಿಗೆ ಶರತ್ತು ಬದ್ದ ಜಾಮೀನು ನೀಡಿದೆ. 11 ದಿನಗಳ ಬಂಧನದ ಬಳಿಕ ಚೈತ್ರಾ ಕುಂದಾಪುರ ಅವರಿಗೆ ಜಾಮೀನು ದೊರೆತಿದೆ.











Click it and Unblock the Notifications