ಕೆಆರ್ ಪೇಟೆ : ಜಮೀನಿಗೆ ತೆರಳಿದ ಗೃಹಿಣಿಯ ನಿಗೂಢ ಸಾವು
ಮಂಡ್ಯ, ಆಗಸ್ಟ್ 26: ತನ್ನ ಜಮೀನಿಗೆ ತೆರಳಿದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಪಾಂಡವಪುರ ತಾಲೂಕಿನ ಸಣಬ ಗ್ರಾಮದಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಸಣಬ ಗ್ರಾಮದ ರವೀಂದ್ರ ಅವರ ಪತ್ನಿ ಗೀತಾ (28) ಮೃತಪಟ್ಟ ಗೃಹಿಣಿ. ಈಕೆ ಕೆ.ಆರ್.ಪೇಟೆ ತಾಲೂಕಿನ ಹಲಗಹೊಸಳ್ಳಿ ಗ್ರಾಮದ ನಿವಾಸಿಯಾಗಿದ್ದು, 13 ವರ್ಷದ ಹಿಂದೆ ರವೀಂದ್ರ ಎಂಬುವರೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ 10 ವರ್ಷದ ಸುಕನ್ಯಾ ಹಾಗೂ 8 ವರ್ಷ ಸುಗಾರ್ ಎಂಬಿಬ್ಬರು ಮಕ್ಕಳಿದ್ದಾರೆ.[ದರೋಡೆಕೋರರಿಂದ 6 ಲಕ್ಷ, 21 ಚಿನ್ನದ ಬಿಸ್ಕೆಟ್, ಎರಡು ಕಾರು ವಶ]
ಕಳೆದೊಂದು ವರ್ಷದಿಂದ ರವೀಂದ್ರ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಗೀತಾ ತಮ್ಮ ಗ್ರಾಮದಲ್ಲಿದ್ದುಕೊಂಡು ಜಮೀನನ್ನು ನೋಡಿಕೊಳ್ಳುತ್ತಿದ್ದರು. ಬುಧವಾರ ರಾತ್ರಿ ತಮ್ಮ ಜಮೀನಿಗೆ ಹೋದ ಗೀತಾ ಹಿಂತಿರುಗಿ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಅವರ ಶವ ಜಮೀನಿನ ಬಳಿ ಪತ್ತೆಯಾಗಿತ್ತು.['ಪತ್ರ ಬರೆದು ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ']
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಸರ್ಕಲ್ ಇನ್ ಸ್ಪೆಕ್ಟರ್ ದೀಪಕ್ ಅವರು ಪರಿಶೀಲನೆ ನಡೆಸಿದರು. ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ, ವಾರಸುದಾರರಿಗೆ ನೀಡಲಾಯಿತು. ಮೃತ ಗೀತಾ ಅವರ ಸೋದರಿ ಧನಲಕ್ಷ್ಮಿ ಅವರು ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸರು ಕಾಲಂ 280 ಪ್ರಕರಣದಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.