ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ವಿಫಲ: ಪ್ರವಾಸಿಗರಿಗೆ ಹೊರಡಿಸಿದ್ದ ನಿರ್ಬಂಧ ವಾಪಸ್
ಮಂಡ್ಯ, ನವೆಂಬರ್, 30: ಕಳೆದೊಂದು ತಿಂಗಳ ಹಿಂದೆ ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ವಿಫಲವಾಗಿದೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆ ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಪರಿಣಾಮ 25 ದಿನಗಳಿಂದ ಸುಮಾರು 70 ಲಕ್ಷ ರೂಪಾಯಿ ನಷ್ಟ ಉಂಟಾಗಿದ್ದು, ಈ ನಷ್ಟದಿಂದ ತಪ್ಪಿಸಿಕೊಳ್ಳಲು ಇದೀಗ ಬೃಂದಾವನ ಪ್ರವೇಶವನ್ನು ಸಾರ್ವಜನಿಕರಿಗೆ ಬುಧವಾರದಿಂದ ಮುಕ್ತಗೊಳಿಸಲಾಗಿದೆ.
ಚಿರತೆ ಸೆರೆ ಕಾರ್ಯಾಚರಣೆ ವಿಫಲ
ಬೃಂದಾವನದೊಳಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಗಳೆಲ್ಲವೂ ವಿಫಲವಾಗಿದೆ. ಅಕ್ಟೋಬರ್ 22 ಹಾಗೂ ಅಕ್ಟೋಬರ್ 28ರಂದು ಎರಡು ಬಾರಿ ಚಿರತೆ ಕಾಣಿಸಿಕೊಂಡಿತ್ತು. ಆಗಿನಿಂದ ಚಿರತೆ ಸೆರೆಗೆ ಬೃಂದಾವನದ ಎಂಟು ಕಡೆ ಬೋನ್ ಇಟ್ಟು ಹಲವೆಡೆ ನಾಯಿಯನ್ನು ಕಟ್ಟಿಹಾಕಲಾಗಿತ್ತು. ಆದರೂ ಕೂಡ ಚಿರತೆ ಬರಲೇ ಇಲ್ಲ, ಬೋನಿಗೆ ಬೀಳಲೂ ಇಲ್ಲ. ಬೃಂದಾವನದ ಹೊರಗೆ ಬೆಳೆದಿದ್ದ ಪೊದೆಗಳನ್ನು ತೆರವುಗೊಳಿಸಿದರೂ ಕೂಡ ಚಿರತೆ ಕಾಣಸಿಗಲಿಲ್ಲ. ಅರಣ್ಯ ಇಲಾಖೆಯ 50 ಸಿಬ್ಬಂದಿ ಜೊತೆಗೂಡಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರೂ ಕೂಡ ಫಲ ಸಿಗದಂತಾಗಿದೆ. ಹೀಗೆ ಚಿರತೆ ಅರಣ್ಯ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ನಿದ್ದೆಗೆಡುವಂತೆ ಮಾಡಿತ್ತು.
ಕೊನೆಗೂ ಸೆರೆಯಾಗದ ಚಿರತೆ
ಕೊನೆಗೆ ವನ್ಯಜೀವಿ ವಲಯದ ಅಧಿಕಾರಿಗಳಿಂದ ಡ್ರೋನ್ ಕಾರ್ಯಾಚರಣೆ ನಡೆಸಿ ಚಿರತೆ ಇರುವ ಜಾಗವನ್ನು ಪತ್ತೆಹಚ್ಚುವ ಮತ್ತು ಸೆರೆಹಿಡಿಯುವ ನಿರ್ಧಾರವನ್ನು ಮಾಡಿದ್ದರು. ಇತ್ತ ತಿಂಗಳಿಂದ ಚಿರತೆಯೂ ಕೆಆರ್ಎಸ್ ಸುತ್ತಮುತ್ತ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕಳೆದ 25 ದಿನಗಳಿಂದ ಚಿರತೆ ಎಲ್ಲೂ ಕಾಣಿಸಿಕೊಳ್ಳದಿದ್ದರಿಂದ ಧೈರ್ಯಗೊಂಡ ಅರಣ್ಯ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ ಅಕಾರಿಗಳು ಬೃಂದಾವನ ಪ್ರವೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ. ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಬೃಂದಾವನದಲ್ಲಿ ಬುಧವಾರದಿಂದ ಮತ್ತೆ ಪ್ರವಾಸಿಗರಿಂದ ಕಲರವ ಶುರುವಾಗಿದೆ. ಸಾರ್ವಜನಿಕರು ಕೂಡ ಚಿರತೆಯ ಆತಂಕ, ಭಯವಿಲ್ಲದೆ ಬೃಂದಾವನ ಪ್ರವೇಶಿಸಿ ಸಂತಸದಿಂದ ಕಾಲ ಕಳೆಯುತ್ತಿದ್ದ ದೃಶ್ಯಗಳು ಕಂಡುಬಂದವು.

ಕೆಆರ್ಎಸ್ ಬೃಂದಾವನಕ್ಕೆ ಒಟ್ಟು ನಷ್ಟ?
25 ದಿನಗಳಿಂದ ಸಾರ್ವನಿಕರಿಗೆ ಬೃಂದಾವನ ಪ್ರವೇಶ ನಿಷೇಧಿಸಿದ್ದರಿಂದ ಸುಮಾರು 70 ಲಕ್ಷ ರೂಪಾಯಿವರೆಗೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೃಂದಾವನ ಪ್ರವೇಶ ಶುಲ್ಕ ಹಾಗೂ ವಾಹನ ಪಾರ್ಕಿಂಗ್ನಿಂದ ಬರುತ್ತಿದ್ದ ನಿತ್ಯ ಲಕ್ಷಾಂತರ ರೂಪಾಯಿ ಕಾವೇರಿ ನೀರಾವರಿ ನಿಗಮದ ಖಜಾನೆಗೆ ಹೋಗುತ್ತಿತ್ತು. ಚಿರತೆ ಕಾಣಿಸಿಕೊಂಡು ಸೃಷ್ಟಿಸಿದ ಆತಂಕದಿಂದ ಕೆಆರ್ಎಸ್ ಬೃಂದಾವನವನ್ನು 25 ದಿನ ಮುನ್ನೆಚ್ಚರಿಕೆಯಾಗಿ ಬಂದ್ ಮಾಡಲಾಗಿತ್ತು.

ಕಳೆದ ತಿಂಗಳು ವಾರದೊಳಗೆ ಎರಡು ಬಾರಿ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಚಿರತೆ 20 ದಿನಗಳಿಂದ ಬೃಂದಾವನದ ಸುತ್ತ ಮುತ್ತ ಸುಳಿದಾಡಲೂ ಇಲ್ಲ. ಅಕ್ಕ-ಪಕ್ಕದ ಗ್ರಾಮಗಳಲ್ಲಿ ಕಾಣಿಸಿಕೊಂಡ ಕುರುಹೂ ಸಿಗಲಿಲ್ಲ. ಇದರಿಂದ ಚಿರತೆ ಮೂಲ ಸ್ಥಾನಕ್ಕೆ ತೆರಳಿರಬಹುದು ಎಂಬ ದೃಢ ವಿಶ್ವಾಸದೊಂದಿಗೆ ಬೃಂದಾವನಕ್ಕೆ ಪ್ರವೇಶ ಕಲ್ಪಿಸಲಾಗಿದೆ.












Click it and Unblock the Notifications