ಮಂಡ್ಯ ರಾಜಕಾರಣ : ವಿಧಾನಸಭೆ ಚುನಾವಣೆ ಬಗ್ಗೆ ರಮ್ಯಾ ಸ್ಪಷ್ಟನೆ
Recommended Video

ಮಂಡ್ಯ, ನವೆಂಬರ್ 17 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾಜಿ ಸಂಸದೆ ರಮ್ಯಾ ಸ್ಪರ್ಧಿಸುವ ಕುರಿತು ಸ್ಪಷ್ಟನೆ ಸಿಕ್ಕಿದೆ. ಮಂಡ್ಯ, ಮೇಲುಕೋಟೆ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹರಿದಾಡುತ್ತಿದ್ದವು.
ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಆಪ್ತರ ಬಳಿ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಮಂಡ್ಯ ರಾಜಕಾರಣದಲ್ಲಿ ಪುನಃ ಸಕ್ರಿಯರಾಗುವ ಕುರಿತು ಚರ್ಚೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ರಮ್ಯಾ ಮತ್ತು ಅಂಬರೀಶ್ ಮಂಡ್ಯ ರಾಜಕಾರಣದಲ್ಲಿ ಸಕ್ರಿಯರಾಗುವ ಕುರಿತು ಚರ್ಚೆಗಳು ನಡೆಯುತ್ತಿದ್ದವು. ರಮ್ಯಾ ಅವರು ಆಪ್ತರ ಬಳಿ ಮಾತನಾಡುವಾಗ ಪಕ್ಷದ ನಾಯಕರು ನೀಡಿರುವ ಸೂಚನೆಯನ್ನು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ರಮ್ಯಾ ಮತ್ತು ಅಂಬರೀಶ್ ನಡುವೆ ಶೀತಲ ಸಮರ ನಡೆಯಲಿದೆ. ಇಬ್ಬರೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ಈಗಾಗಲೇ ಜೆಡಿಎಸ್ ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯವಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರು 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ತಂತ್ರ ರೂಪಸಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಒಳಜಗಳವೇ ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು.

ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ
ರಮ್ಯಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ರಾಜಕಾರಣವನ್ನು ಮುಂದುವರೆಸುವುದಾದರೆ ಅದು ಸಂಸದೆಯಾಗಿ ಮಾತ್ರ ಎಂದು ರಮ್ಯಾ ಆಪ್ತರು ಮತ್ತು ಅಭಿಮಾನಿಗಳ ಜೊತೆ ಮಾತನಾಡುವಾಗ ಹೇಳಿದ್ದಾರೆ.

ಹೈಕಮಾಂಡ್ ಸೂಚನೆ
ಪಕ್ಷದ ಹೈಕಮಾಂಡ್ ಸಹ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮಾತ್ರ ಸೂಚನೆ ನೀಡಿದೆ. ಆದ್ದರಿಂದ, ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ರಮ್ಯಾ ಆಪ್ತರ ಬಳಿ ಹೇಳಿದ್ದಾರೆ.

ರಾಜ್ಯದ ರಾಜಕಾರಣವಿಲ್ಲ
ಈಗಾಗಲೇ ರಮ್ಯಾ ಅವರು ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆದ್ದರಿಂದ, ಅಲ್ಲೇ ಮುಂದುವರೆಯಲಿದ್ದಾರೆ. ರಾಜ್ಯ ರಾಜಕಾರಣಕ್ಕೆ ವಾಪಸ್ ಬರುವುದಿಲ್ಲ.

ಮಂಡ್ಯದಲ್ಲಿ ಮನೆ ಮಾಡಿದ್ದಾರೆ
ರಮ್ಯಾ ಮಂಡ್ಯದಲ್ಲಿ ಮನೆ ಮಾಡಿದ್ದಾರೆ, ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯರಾಗಲಿದ್ದಾರೆ. ಮಂಡ್ಯ ಅಥವ ಮೇಲುಕೋಟೆಯಿಂದ 2018ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳಿಗೆ ಈ ಮೂಲಕ ಸ್ಪಷ್ಟನೆ ಸಿಕ್ಕಿದೆ.

ರಮ್ಯಾ ಅವರಿಗೆ ಮನೆ ಮಾರಾಟ ಮಾಡಿಲ್ಲ
ರಮ್ಯಾ ಅವರು ಮಂಡ್ಯದಲ್ಲಿ ಮನೆ ಖರೀದಿ ಮಾಡಿದ್ದಾರೆ ಎಂಬ ಸುದ್ದಿಗಳಿಗೆ ಎರಡು ದಿನಗಳ ಹಿಂದೆ ಸ್ಪಷ್ಟನೆ ಸಿಕ್ಕಿತ್ತು. ಮನೆಯ ಮಾಲೀಕ ಸಾದತ್ ಅಲಿಖಾನ್ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದರು. 'ರಮ್ಯಾ ಕೆ.ಆರ್.ರೋಡ್ನ ವಿದ್ಯಾನಗರದಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ, ಬಾಡಿಗೆಗೆ ಇದ್ದ ಮನೆಯನ್ನು ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು. 'ಅದು ನನ್ನ ತಂದೆಯವರು ಇದ್ದ ಮನೆ. ರಮ್ಯಾ ಅವರಿಗೆ ಬಾಡಿಗೆ ನೀಡಿದ್ದೇನೆ ಹೊರತು ಅದನ್ನು ಮಾರಿಲ್ಲ. ಆ ಮನೆ ಮೇಲೆ ಭಾವನಾತ್ಮಕ ಸಂಬಂಧವಿದೆ. ಅದನ್ನು ಮಾರುವ ಚಿಂತನೆಯೂ ನಮ್ಮ ಮುಂದಿಲ್ಲ' ಎಂದು ಹೇಳಿದ್ದರು.

ಜೆಡಿಎಸ್ ಪಕ್ಷ ಸೇರ್ತಾರಾ?
ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಮಂಡ್ಯದಿಂದ ಬೆಂಗಳೂರು ತನಕ ತಲುಪಿದೆ. ಆದರೆ, ಜಿಲ್ಲಾ ಜೆಡಿಎಸ್ ನಾಯಕರು ಈ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.












Click it and Unblock the Notifications