ರಾಮನಗರ ರಾಜಕೀಯ ಬೆಳವಣಿಗೆ ಬಗ್ಗೆ ಅಂಬಿ ಸರಿಯಾಗಿ ಹೇಳಿದ್ದಾರೆ
ರಾಮನಗರ, ನವೆಂಬರ್ 03: ಅಂಬರೀಶ್ ಇರೋದೆ ಹೀಗೆ ಕನ್ವರ್ಲಾಲ್ ಥರಾ, ಮನಸಲ್ಲಿ ಬಂದಿದ್ದೇ ಬಾಯಿಗೆ ಬರೋದು. ಇಮೇಜು, ಡ್ಯಾಮೇಜು ಎಲ್ಲ ಯೋಚಿಸುವರಲ್ಲ.
ಇಂತಹಾ ಅಂಬರೀಶ್ ಇಂದು ಕೆಲ ಕಾಲ ರಾಜಕೀಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ, ಅದರಲ್ಲೂ ರಾಮನಗರ ರಾಜಕೀಯದ ಬಗ್ಗೆ ತಮ್ಮ ನಿಲವು ಹೇಳಿದ್ದಾರೆ. ಬಿಜೆಪಿಯ ಅಭ್ಯರ್ಥಿ ಚುನಾವಣೆ ಎರಡು ದಿನ ಇದ್ದಾಗ ಕಾಂಗ್ರೆಸ್ಗೆ ಸೇರಿರುವುದು ಅವರಿಗೆ ಸರಿ ಬಂದಿಲ್ಲ.
ರಾಮನಗರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಒಳ್ಳೆಯದಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಕಾಂಗ್ರೆಸ್ ಪಕ್ಷದವರಾದರೂ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ಗೆ ಬಂದಿರುವುದು ಅಥವಾ ಸೆಳೆದುಕೊಂಡಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ರಾಮನಗರದ ಬೆಳವಣಿಗೆ ಸರಿ ಇಲ್ಲ
ಯಾರೇ ಆಗಲಿ ಹೀಗೆ ಮಾಡುವುದು ಸರಿ ಅಲ್ಲ, ಬಿಜೆಪಿ ಅವರು ಕೂಡ ಕ್ಷೇತ್ರಕ್ಕೆ ಬರದೆ ಆಗುವುದು ಕೂಡ ಸರಿ ಅಲ್ಲ. ಇನ್ನೂ ಅಲ್ಲಿ ಏನೇನು ವ್ಯವಹಾರಗಳಾಗಿವೆಯೋ ನನಗೆ ಸರಿಯಾಗಿ ಗೊತ್ತಿಲ್ಲ ಎಂದ ಅವರು ಮಾರ್ಮಿಕವಾಗಿ ಹಣದ ವ್ಯವಹಾರ ಆಗಿರಬಹುದು ಎಂಬುದನ್ನೂ ಸೂಚಿಸಿದ್ದಾರೆ.

ಲೋಕಸಭೆ ಉಪಚುನಾವಣೆ ಬೇಕಿರಲಿಲ್ಲ
ಮೂರು ತಿಂಗಳಿಗೋಸ್ಕರ ಎಲ್ಲಾ ಚುನಾವಣೆ ನಡೆಸುತ್ತಿರುವುದು ಸರಿ ಇಲ್ಲ ಎಂದು ಲೋಕಸಭೆ ಉಪಚುನಾವಣೆ ನಡೆಸುತ್ತಿರುವ ಬಗ್ಗೆ ಆಕ್ಷೇಪಣೆಯನ್ನೂ ವ್ಯಕ್ತಪಡಿಸಿದ ಅವರು, ಜನರಿಗೆ ಈ ಚುನಾವಣೆಗೆ ಮತ ಹಾಕಲು ಸಹ ಹುಮ್ಮಸ್ಸಿಲ್ಲದಾಗಿದೆ. ನಮಗೂ ಮತ ಹಾಕಲು ಹುಮ್ಮಸ್ಸಿಲ್ಲ ಎಂದು ಲೋಕಾಭಿರಾಮವಾಗಿ ಅಂಬಿ ಹೇಳಿದರು.

ಫಲಿತಾಂಶದ ಬಗ್ಗೆ ಹಾಸ್ಯ ಚಟಾಕಿ
ಚುನಾವಣಾ ಫಲಿತಾಂಶ ಏನಾಬಹುದು? ಎಂಬ ಪ್ರಶ್ನೆಗೆ ಹಾಸ್ಯ ಚಟಾಕಿ ಹಾರಿಸಿದ ಅಂಬರೀಶ್, ನವೆಂಬರ್ 7 ಕ್ಕೆ ಬಂದು ಬಿಡು, (ಫಲಿತಾಂಶದ ಮಾರನೇ ದಿನ) ವಿವರವಾಗಿ ಹೇಳುತ್ತೇನೆ ಎಂದರು ನಗುವಿನ ಅಲೆ ಎಬ್ಬಿಸಿದರು.

ಪ್ರಚಾರ ಮಾಡಲಿಲ್ಲ ಅಂಬರೀಶ್
ಅಂಬರೀಶ್ ಅವರು ಈ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಮೈತ್ರಿಯ ಅಭ್ಯರ್ಥಿ ಜೆಡಿಎಸ್ನ ಶಿವರಾಮೇಗೌಡ ಅವರು ಅಂಬರೀಶ್ ಅವರು ಪ್ರಚಾರಕ್ಕೆ ಬರಬೇಕೆಂದು ಕೇಳಲು ಹೋಗಿದ್ದರಾದರೂ ಅವರನ್ನು ಬರಿಗೈಲಿ ಅಂಬರೀಶ್ ವಾಪಸ್ ಕಳುಹಿಸಿದ್ದರು.












Click it and Unblock the Notifications