ಮಂಡ್ಯದಲ್ಲಿ ಗ್ರಾಪಂ ಚುನಾವಣೆಗೆ ಪುಟ್ಟಣ್ಣಯ್ಯ ಮಕ್ಕಳ ತಯಾರಿ
ಮಂಡ್ಯ, ಅಕ್ಟೋಬರ್ 29: ಮತ್ತೆ ಮಂಡ್ಯದಲ್ಲಿ ರೈತರನ್ನು ಬೇರು ಮಟ್ಟದಿಂದ ಸಂಘಟಿಸುವ ಮೂಲಕ ರಾಜಕೀಯವಾಗಿಯೂ ಸಂಘವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ರೈತ ಮುಖಂಡ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಮಕ್ಕಳು ಮುಂದಾಗಿದ್ದು, ರೈತರೊಂದಿಗೆ ತಾವಿರುವುದಾಗಿ ವಾಗ್ದಾನ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷದ ಹೆಸರಿನಲ್ಲಿ ಸಂಘಟನೆ ಮಾಡದೆ ರೈತ ಸಂಘದ ಹೆಸರಿನಲ್ಲಿಯೇ ಸಂಘಟನೆ ಮುಂದುವರೆಸಲು ಚಿಂತನೆ ಮಾಡಲಾಗಿದ್ದು, ಇದೀಗ ಕೆ.ಎಸ್.ಪುಟ್ಟಣ್ಣಯ್ಯರವರ ಪುತ್ರಿ ಸ್ಮಿತಾ ಪುಟ್ಟಣ್ಣಯ್ಯ ಅವರು ಗ್ರಾಮಗಳಿಗೆ ತೆರಳಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಗ್ರಾಮಗಳಲ್ಲಿ ರೈತರನ್ನು ಸಂಘಟಿಸಿ ಗ್ರಾಮ ಘಟಕವನ್ನು ಮಾಡಿದ್ದು, ಮುಂದೆ ತಾಲೂಕು ಜಿಲ್ಲಾ ಮಟ್ಟದಲ್ಲಿ ಮಾಡುವ ಮೂಲಕ ಸಂಘಟನೆಯನ್ನು ಬಲಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮುಂದೆ ಓದಿ...
ಪ್ರಭಾವಿ ರೈತ ನಾಯಕರಾಗಿದ್ದ ದಿ.ಕೆ.ಎಸ್.ಪುಟ್ಟಣ್ಣಯ್ಯ
ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ಪ್ರಭಾವಿ ರೈತ ನಾಯಕರಾಗಿದ್ದರು. ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದ ಶ್ರೀಕಂಠೇಗೌಡ-ಶಾರದಮ್ಮ ದಂಪತಿ ಪುತ್ರರಾಗಿದ್ದ ಇವರು ವಿದ್ಯಾವಂತರಾಗಿದ್ದರಲ್ಲದೆ, 1983ರಿಂದಲೂ ರಾಜ್ಯ ರೈತಸಂಘದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡು ಹೋರಾಟಗಳನ್ನು ಮಾಡುತ್ತಾ ಬಂದಿದ್ದರು. 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2013ರಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ರೈತರ ಹಿತಾಸಕ್ತಿ ಕಾಪಾಡಲು, ಕಾವೇರಿ ನದಿ ನೀರು ವಿಚಾರ ಸೇರಿದಂತೆ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ರೈತ ಸಂಘಟನೆಯಲ್ಲಿ ಒಡಕು ಮೂಡಿದ್ದರಿಂದ ಹಲವು ನಾಯಕರು ವಿಭಜನೆಗೊಂಡಿದ್ದರು. ಇವತ್ತಿಗೂ ರೈತ ಸಂಘಟನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಂತು ಸತ್ಯ.
ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು
ತಂದೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡ ಪುತ್ರ
ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಪುಟ್ಟಣ್ಣಯ್ಯ ಅವರು 2018ರಲ್ಲಿ ನಿಧನರಾದರು. ಆ ನಂತರ ನಡೆದ ವಿಧಾನ ಸಭೆಗೆ ಚುನಾವಣೆ ನಡೆದಾಗ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ ಅವರಿಗೆ ಬೆಂಬಲ ನೀಡುವ ಮೂಲಕ ತಮ್ಮದೇ ಪಕ್ಷದ ಅಭ್ಯರ್ಥಿ ಎಂಬಂತೆ ಬಿಂಬಿಸಿತು. ಕಾಂಗ್ರೆಸ್ ಬಾವುಟ, ಶಾಲು ಹಾಕಿ ಪ್ರಚಾರ ಮಾಡಿ, ಮತ ಕೇಳಿದರು. ಆದರೆ ಆ ವೇಳೆಗೆ ಸಂಸದರಾಗಿದ್ದ ಪುಟ್ಟರಾಜು ಅವರು ಎದುರಾಳಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಪಡೆದರು. ಅವತ್ತು ರಾಜಕೀಯ ಮತ್ತು ಚುನಾವಣೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಹೊಸದಾಗಿತ್ತು. ಸೋಲಿನಿಂದ ವಿಚಲಿತರಾಗದ ಅವರು ರಾಜಕೀಯದತ್ತ ಒಲವು ಮೂಡಿಸಿಕೊಂಡರು. ಮತ್ತು ಅದು ಅವರಿಗೊಂದು ಅನುಭವ ನೀಡಿತ್ತು.
ಅಮೆರಿಕಾದಲ್ಲಿ ನೆಲೆಯೂರಿರುವ ದರ್ಶನ್ ಪುಟ್ಟಣ್ಣಯ್ಯ
ದರ್ಶನ್ ಪುಟ್ಟಣ್ಣಯ್ಯ ಅವರು ಅಮೆರಿಕಾದಲ್ಲಿ ನೆಲೆಸಿ ಬಹಳ ವರ್ಷವೇ ಆಗಿತ್ತು. ಅಲ್ಲೊಂದು ಸ್ವಂತ ಕಂಪನಿಯೊಂದನ್ನು ನಡೆಸುತ್ತಿರುವ ಅವರು ಅದರ ಸಿಇಓ ಆಗಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಗೆ ಆಗಮಿಸಿದ್ದ ಅವರು ಸೋಲಿನ ಬಳಿಕ ಮತ್ತೆ ಅಮೆರಿಕಾಕ್ಕೆ ತೆರಳಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುವುದರೊಂದಿಗೆ ಅವರ ಗೆಲುವಿಗೆ ಸಹಕರಿಸಿದ್ದರು. ಸದ್ಯ ಈಗ ಅಮೆರಿಕಾದಲ್ಲಿದ್ದಾರೆ. ಆದರೂ ಅಲ್ಲಿಂದಲೇ ರಾಜಕೀಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ರೈತ ಸಂಘವನ್ನು ಬಲಪಡಿಸುವ ಕಾರ್ಯಕ್ಕೆ ಕೈ ಹಾಕಿರುವ ಅವರು ಗ್ರಾಮಮಟ್ಟದಿಂದಲೇ ಸಂಘವನ್ನು ಬಲಪಡಿಸಲು ಮುಂದಾಗಿದ್ದಾರೆ.
ವಿಡಿಯೋ : ಪುಟ್ಟಣ್ಣಯ್ಯ ಸಮಾಧಿ ಬಳಿ ಶಪಥಗೈದ ದರ್ಶನ್
ಸಹೋದರನ ಬಗ್ಗೆ ಸ್ಮಿತಾ ಪುಟ್ಟಣ್ಣಯ್ಯ ಹೇಳಿದ್ದೇನು?
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಖ್ಯ ವೇದಿಕೆಯಾಗಿ ತೆಗೆದುಕೊಂಡಿದ್ದು, ಈಗಾಗಲೇ ಗ್ರಾಮಗಳಲ್ಲಿ ಪ್ರವಾಸ ಮಾಡಿ ಒಂದಷ್ಟು ಸದಸ್ಯರನ್ನೊಳಗೊಂಡ ಗ್ರಾಮ ಘಟಕವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಆ ಮೂಲಕ ಸಂಘ ಬಲಪಡಿಸುವುದು ಉದ್ದೇಶವಾಗಿದೆ. ಸದ್ಯ ಅಮೆರಿಕಾದಲ್ಲಿರುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ವೇಳೆಗೆ ಭಾರತಕ್ಕೆ ವಾಪಸ್ಸಾಗಲಿರುವುದಾಗಿ ಅವರ ಸಹೋದರಿ ಸ್ಮಿತಾ ಪುಟ್ಟಣ್ಣಯ್ಯ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರ ನೇತೃತ್ವದಲ್ಲೇ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಹೋಗುವುದಾಗಿಯೂ ಹೇಳಿದ್ದಾರೆ. ಇನ್ನೊಂದು ವಿಚಾರವನ್ನು ಹೊರ ಹಾಕಿರುವ ಅವರು, ರೈತಸಂಘದ ಕಾರ್ಯಕರ್ತರು ಆತಂಕಗೊಳ್ಳುವ ಅಗತ್ಯವಿಲ್ಲ. ಸಹೋದರ ದರ್ಶನ್ ಪುಟ್ಟಣ್ಣಯ್ಯ ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ತೀರಿಕೊಂಡಾಗಲೇ ಯಾವುದೇ ಕಾರಣಕ್ಕೂ ತಾವು ಅಮೆರಿಕಾದಲ್ಲಿರುವುದಿಲ್ಲ. ತಾಯ್ನಾಡಿಗೆ ಬಂದು ರೈತಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಪ್ರಮಾಣ ಮಾಡಿದ್ದು, ಅದರಂತೆ ನಡೆದುಕೊಳ್ಳಲಿದ್ದಾರೆ ಎಂದರು.
ತಾಯ್ನಾಡಿಗೆ ಮರಳಲಿರುವ ದರ್ಶನ್ ಪುಟ್ಟಣ್ಣಯ್ಯ
ಕೋವಿಡ್ ಕಾರಣದಿಂದ ವಿಮಾನಯಾನ ಪ್ರಾರಂಭವಾಗಿರಲಿಲ್ಲ. ಹೀಗಾಗಿ ದರ್ಶನ್ ಪುಟ್ಟಣ್ಣಯ್ಯ ತಾಯ್ನಾಡಿಗೆ ಮರಳಲು ತಡವಾಯಿತು. ಇದೀಗ ವಿಮಾನಯಾನ ಮತ್ತೆ ಪ್ರಾರಂಭವಾಗಿರುವುದರಿಂದ ದರ್ಶನ್ ಪುಟ್ಟಣ್ಣಯ್ಯ ಶೀಘ್ರವೇ ವಾಪಸ್ಸಾಗಲಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕಾದಲ್ಲಿರುವ ಕಂಪೆನಿಯನ್ನು ಮಾರಾಟ ಮಾಡಿ ದರ್ಶನ್ ಪುಟ್ಟಣ್ಣಯ್ಯ ಇಲ್ಲಿಗೆ ವಾಪಸ್ಸಾಗಲಿದ್ದಾರೆ ಎಂಬುವುದಾಗಿಯೂ ಹೇಳಿದ್ದಾರೆ. ಸ್ಮಿತಾ ಪುಟ್ಟಣ್ಣಯ್ಯ ಅವರ ಹೇಳಿಕೆಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರು ತಮ್ಮನ್ನು ಸಕ್ರಿಯ ರಾಜಕಾರಣಕ್ಕೆ ತೊಡಗಿಸಿಕೊಳ್ಳುವುದಂತು ಖಚಿತ ಎನಿಸುತ್ತಿದೆ, ಬಹುಶಃ ರೈತ ಸಂಘಟನೆ ಬಲಗೊಂಡರೆ ಮಂಡ್ಯದ ರಾಜಕೀಯದಲ್ಲಿ ಮತ್ತೊಂದಷ್ಟು ಬದಲಾವಣೆಗಳಾಗುವುದಂತು ನಿಶ್ಚಿತ.
ಅಮೆರಿಕಾದಿಂದ ಮೇಲುಕೋಟೆಗೆ: ರಾಜಕೀಯ ಅಖಾಡದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸದ್ದು
Recommended Video
ಗ್ರಾಮ ಮಟ್ಟದಿಂದಲೇ ನೆಲೆಯೂರಲು ಯತ್ನ
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ರೈತ ಸಂಘ ಒಂದಷ್ಟು ಚುರುಕುಗೊಂಡಿದ್ದು ಗೋಚರಿಸುತ್ತಿದೆ. ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೇಗೌಡ ಮತ್ತು ಪಾಂಡವಪುರ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಮೊದಲಿಗೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ಸ್ಪರ್ಧಿಸಿದ್ದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಅನುಕೂಲವಾಗುವಂತೆ ಇಲ್ಲಿನ 34 ಪಂಚಾಯಿತಿಗಳಲ್ಲೂ ರೈತಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ ಕಾರ್ಯಕ್ಕೆ ಮುಂದಾಗಿರುವುದು ಕಂಡುಬರುತ್ತಿದೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.