ಮಂಡ್ಯದಲ್ಲಿ ನಾಲ್ಕು ಉಪಚುನಾವಣೆ ನಡೆದಿದ್ದೇಕೆ ಗೊತ್ತಾ?
ಮಂಡ್ಯ, ಏಪ್ರಿಲ್ 03:ಲೋಕಸಭೆಯ ಚುನಾವಣಾ ಕಣ ರಂಗೇರತೊಡಗಿದೆ. ಈಗಾಗಲೇ ಎಲ್ಲೆಡೆ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದು, ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಗೆಲುವಿಗಾಗಿ ತಂತ್ರ, ಕುತಂತ್ರಗಳು ನಡೆಯುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಕೂಡ ಬರತೊಡಗಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದೀಗ ರಾಜ್ಯದಲ್ಲಿಯೇ ಅತಿ ಹೆಚ್ಚು ಕುತೂಹಲ ಕ್ಷೇತ್ರವಾಗಿ ಮಂಡ್ಯ ಗಮನಸೆಳೆಯುತ್ತಿದೆ. ಮಾಜಿ ಕೇಂದ್ರ ಸಚಿವ, ನಟ ದಿ.ಅಂಬರೀಶ್ ಅವರ ಪತ್ನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ ದೇವೇಗೌಡರ ಮೊಮ್ಮಗ, ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ರಾಜ್ಯದ ಜನ ಮಂಡ್ಯದತ್ತ ಕಣ್ಣಿಟ್ಟು ನೋಡುತ್ತಿರುವುದೇಕೆ?
ಹೀಗಾಗಿ ಈ ಕ್ಷೇತ್ರ ಹೆಚ್ಚು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯ ನಂತರದಲ್ಲಿ ನಡೆದ ಚುನಾವಣೆಗಳ ಇತಿಹಾಸವನ್ನು ನೋಡಿದರೆ 1967 ರಿಂದ 2019 ವರೆಗೆ ಒಟ್ಟು 20 ಚುನಾವಣೆಗಳು ಕಂಡಿದ್ದು ಈಗ 21 ನೇ ಚುನಾವಣೆ ನಡೆಯುತ್ತಿದೆ.
ಇದುವರೆಗಿನ ಚುನಾವಣೆಗಳಿಗೆ ಹೋಲಿಸಿದರೆ ಈ ಚುನಾವಣೆ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿದೆ. ಕಾರಣವಿಷ್ಟೆ ಸ್ವತಂತ್ರ ಅಭ್ಯರ್ಥಿಯೊಬ್ಬರು ದೊಡ್ಡಮಟ್ಟದಲ್ಲಿ ಸ್ಪರ್ಧೆ ನೀಡುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಬೆಚ್ಚಿ ಬೀಳುವಂತಾಗಿದೆ.
ಇವತ್ತು ಮಂಡ್ಯವನ್ನು ಜೆಡಿಎಸ್ ಭದ್ರಕೋಟೆ ಎಂದು ಹೇಳಲಾಗುತ್ತಿದೆಯಾದರೂ ಚುನಾವಣಾ ಇತಿಹಾಸಗಳನ್ನು ನೋಡಿದರೆ ಕಾಂಗ್ರೆಸ್ ಇಲ್ಲಿ ಸೌರ್ವಭೌಮತೆಯನ್ನು ಕಾಪಾಡಿಕೊಂಡು ಬಂದಿದ್ದನ್ನು ಕಾಣಬಹುದು. ಇಲ್ಲಿನ ನಾಯಕರ ಎಡವಟ್ಟಿನಿಂದಾಗಿ ಇವತ್ತು ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ತಲೆಬಾಗುವಂತಾಗಿದೆ.
ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?
ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಈ ಕ್ಷೇತ್ರದಲ್ಲಿ ನಾಲ್ಕು ಉಪಚುನಾವಣೆಗಳು ನಡೆದಿರುವುದನ್ನು ನಾವು ಕಾಣಬಹುದು. ಮತ್ತು ಈ ಉಪ ಚುನಾವಣೆಯಲ್ಲಿ ಒಂದು ಬಾರಿ ಪಿಎಸ್ಪಿ, ಎರಡು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಜೆಡಿಎಸ್ ಗೆಲುವು ಸಾಧಿಸಿರುವುದನ್ನು ನಾವು ಕಾಣಬಹುದಾಗಿದೆ. ಇನ್ನು ಈ ನಾಲ್ಕು ಉಪಚುನಾವಣೆಗಳು ಏಕೆ ನಡೆಯಿತು ಎಂಬುದರ ವಿವರ ಇಲ್ಲಿದೆ ಓದಿ...
ಎಸ್.ಎಂ.ಕೃಷ್ಣ ಗೆಲುವು
1967 ರಲ್ಲಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದ ಎಂ.ಕೆ. ಶಿವನಂಜಪ್ಪ ಅವರು ನಿಧನರಾದ ಹಿನ್ನಲೆಯಲ್ಲಿ ಮೊದಲ ಬಾರಿಗೆ ಮಂಡ್ಯ ಲೋಕಸಭೆಗೆ 1968 ರಲ್ಲಿ ಉಪ ಚುನಾವಣೆ ನಡೆದು ತಾಲೂಕು ಬೋರ್ಡ್ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಚ್.ಡಿ. ಚೌಡಯ್ಯ ಕಾಂಗ್ರೆಸ್ ಅಭ್ಯರ್ಥಿಯಾದರೆ, 1962ರಲ್ಲಿ ಮದ್ದೂರು ಕ್ಷೇತ್ರದ ಎಚ್.ಕೆ. ವೀರಣ್ಣಗೌಡರನ್ನು ಸೋಲಿಸಿ, 67ರಲ್ಲಿ ಎಂ. ಮಂಚೇಗೌಡರಿಂದ ಪರಾಭವಗೊಂಡಿದ್ದ ಎಸ್.ಎಂ.ಕೃಷ್ಣ ಪಿಎಸ್ಪಿಯಿಂದ ಎದುರಾಳಿಯಾಗಿ ಸ್ಪರ್ಧಿಸುತ್ತಾರೆ. ಅಲ್ಲದೆ ಎಸ್.ಎಂ.ಕೃಷ್ಣ ಅವರು 63,953 ಮತಗಳ ಅಂತರದಿಂದ ಗೆಲುವು ಪಡೆಯುತ್ತಾರೆ. ಇದಾದ ಬಳಿಕ ನಡೆದ 1971 ರಸಾರ್ವತ್ರಿಕ ಚುನಾವಣೆ ವೇಳೆಗೆ ಕಾಂಗ್ರೆಸ್ನತ್ತ ಒಲವು ತೋರಿದ ಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು. ಆದರೆ, ನಂತರದ ಬೆಳವಣಿಗೆಯಲ್ಲಿ 1972 ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜು ಅರಸುರವರು ಕೃಷ್ಣರಿಂದ ರಾಜೀನಾಮೆ ಕೊಡಿಸಿ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುತ್ತಾರೆ. ಹೀಗಾಗಿ ಎರಡನೇ ಬಾರಿಗೆ ಮಂಡ್ಯ ಲೋಕಸಭೆಗೆ ಉಪ ಚುನಾವಣೆ ನಡೆಯುವಂತಾಗುತ್ತದೆ.
ಅಧಿಕ ಮತಗಳಿಂದ ಗೆದ್ದ ರಮ್ಯಾ
1972ರ ಲೋಕಸಭೆಯ ಉಪಚುನಾವಣೆಗೆ ಸ್ವಾತಂತ್ರ್ಯ ಹೋರಾಟಗಾರಾಗಿದ್ದ ಕೆ. ಕೆ.ಚಿಕ್ಕಲಿಂಗಯ್ಯ ಅವರನ್ನು ಎಸ್.ಎಂ.ಕೃಷ್ಣರ ಸಲಹೆ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ. ಇವರ ಎದುರಾಳಿಯಾಗಿ ಮೂಲತಃ ಚಂದಗಾಲು ಗ್ರಾಮದ ಸಿರಿವಂತ ಕುಟುಂಬದ ತಾಲೂಕು ಬೋರ್ಡ್ ಸದಸ್ಯರಾಗಿದ್ದ ಎಂ.ಶ್ರೀನಿವಾಸ್ ಸಂಸ್ಥಾ ಕಾಂಗ್ರೆಸ್ನಿಂದ ಕಣಕ್ಕಿಳಿದರೂ ಚುನಾವಣೆ ಬಳಿಕ ಕಾಂಗ್ರೆಸ್ನ ಕೆ.ಚಿಕ್ಕಲಿಂಗಯ್ಯ ಅವರು 20,112 ಮತಗಳ ಅಂತರದಿಂದ ಗೆಲುವು ಪಡೆಯುತ್ತಾರೆ. ಇದಾದ ನಂತರ 2009 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಅಂಬರೀಶ್ ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ನ ಚಲುವರಾಯಸ್ವಾಮಿ ಅವರು ಗೆಲುವು ಸಾಧಿಸಿ ಸಂಸದರಾಗಿದ್ದರೂ 2013ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಎನ್.ಚಲುವರಾಯಸ್ವಾಮಿ ಸ್ಪರ್ಧಿಸಿ ಗೆಲುವು ಪಡೆಯುತ್ತಾರೆ. ಹೀಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಈ ವೇಳೆ ಮತ್ತೊಮ್ಮೆ ಕೇವಲ 6 ತಿಂಗಳಿಗೆ ಉಪ ಚುನಾವಣೆ ನಡೆಯುತ್ತದೆ. ಈ ಉಪಚುನಾವಣೆಗೆ ಕಾಂಗ್ರೆಸ್ನಿಂದ ರಮ್ಯಾ ಅಭ್ಯರ್ಥಿಯಾದರೆ, ಮೇಲುಕೋಟೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಸಿ.ಎಸ್.ಪುಟ್ಟರಾಜು ಜೆಡಿಎಸ್ ನಿಂದ ಕಣಕ್ಕಿಳಿಯುತ್ತಾರೆ. ಚುನಾವಣೆ ನಂತರ ಫಲಿತಾಂಶ ಬಂದಾಗ ರಮ್ಯಾ 67 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಪಡೆಯುತ್ತಾರೆ.
ವಿಡಿಪಿ ಸಮೀಕ್ಷೆ ಬಿಜೆಪಿಗೆ 17 ಸೀಟು, ಮಂಡ್ಯದಲ್ಲಿ ಸುಮಲತಾಗೆ ಜಯ!
ಎಲ್.ಆರ್.ಶಿವರಾಮೇಗೌಡ ಗೆಲುವು
2014 ರಲ್ಲಿ ಮತ್ತೊಮ್ಮೆ ಲೋಕಸಭೆ ಚುನಾವಣೆ ನಡೆದಾಗ ಕಾಂಗ್ರೆಸ್ನಿಂದ ರಮ್ಯಾ, ಜೆಡಿಎಸ್ ನಿಂದ ಸಿ.ಎಸ್.ಪುಟ್ಟರಾಜು ಹಾಗೂ ಬಿಜೆಪಿಯಿಂದ ಪ್ರೊ. ಬಿ.ಶಿವಲಿಂಗಯ್ಯ ಸ್ಪರ್ಧಿಸಿದ್ದರು. ಅಂತಿಮವಾಗಿ ಪುಟ್ಟರಾಜು ಅವರು ಗೆಲುವು ಸಾಧಿಸಿದರು. ಕಳೆದ ವರ್ಷ ಅಂದರೆ 2018 ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆದಾಗ ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ಸ್ಪರ್ಧಿಸಿ ಗೆದ್ದರಲ್ಲದೆ, ಸಚಿವರೂ ಆದರು ಹೀಗಾಗಿ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಷ್ಟರಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸಿದ್ದರಿಂದ ಅಲ್ಪ ಕಾಲದ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರನ್ನು, ಬಿಜೆಪಿಯಿಂದ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಡಾ. ಸಿದ್ದರಾಮಯ್ಯ ಅವರನ್ನು ಕಣಕ್ಕಿಸಲಾಯಿತು. ಈ ಚುನಾವಣೆ ಒಂದಷ್ಟು ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಈ ಉಪಚುನಾಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ತಳಮಟ್ಟದ ನಾಯಕರು ಮತ್ತು ಮುಖಂಡರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ಹೆಚ್ಚಿನ ಜನ ಬಿಜೆಪಿಯನ್ನು ಬೆಂಬಲಿಸಿದ್ದರು. ಅದರ ಪರಿಣಾಮ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ 5,69,301 ಮತಗಳನ್ನು ಪಡೆದರೆ, ಜಿಲ್ಲೆಯಲ್ಲಿ ಅಸ್ಥಿತ್ವವೇ ಇಲ್ಲದ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರು 2,44,377 ಮತಗಳನ್ನು ಪಡೆದಿದ್ದರು.
ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ
ನಿಖಿಲ್ ಪರ ಮತಯಾಚನೆ
ಕೆಲವೇ ಕೆಲವು ತಿಂಗಳಿಗಷ್ಟೇ ಸಂಸದರಾದ ಎಲ್.ಆರ್.ಶಿವರಾಮೇಗೌಡರಿಗೆ ಇದೀಗ ಜೆಡಿಎಸ್ ನಿಂದ ಟಿಕೆಟ್ ನೀಡದೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೆ ನೀಡಲಾಗಿದೆ. ದುರಂತವೆಂದರೆ ಹಾಲಿ ಸಂಸದರಾಗಿದ್ದ ಶಿವರಾಮೇಗೌಡರು ನಿಖಿಲ್ ಪರ ಮತಯಾಚನೆ ಮಾಡುವಂತಾಗಿದೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ ಎನ್ನುವ ದೇವೇಗೌಡರ ಕುಟುಂಬ ಹಾಲಿ ಸಂಸದನಿಗೆ ಟಿಕೆಟ್ ನೀಡಿ ಗೆಲುವಿಗೆ ಹೋರಾಟ ಮಾಡಬಹುದಿತ್ತಲ್ಲವೆ? ಮಂಡ್ಯದ ಅಭಿವೃದ್ಧಿಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಎಂದು ಬೊಬ್ಬೆ ಹೊಡೆಯುವವರು ಆರು ತಿಂಗಳು ನಿಮ್ಮದೇ ಪಕ್ಷದ ಮುಖಂಡ ಶಿವರಾಮೇಗೌಡರು ಸಂಸದರಾಗಿದ್ದರಲ್ಲವೆ? ಅವರೇನು ಅಭಿವೃದ್ಧಿ ಮಾಡಲಿಲ್ಲವೆ? ಹೀಗೆಂದು ಜನ ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲದಾಗಿದೆ. ಕಾರಣ ಈಗ ಏನಿದ್ದರೂ, ಕುಟುಂಬ, ಅವಕಾಶವಾಗಿ ರಾಜಕಾರಣ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.