Mandya: ಮಂಡ್ಯದ ನಾಗನಕೆರೆ ಗಿಡದ ಜಾತ್ರೆಯ ವೈಶಿಷ್ಟ್ಯತೆ ಏನು ಗೊತ್ತಾ?
ಮಂಡ್ಯ, ನವೆಂಬರ್ 12: ಪ್ರಕೃತಿಯೊಂದಿಗೆ ಒಡನಾಟವಿಟ್ಟುಕೊಂಡಿರುವ ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯಲ್ಲಿರುವ ಅಘೋರ ಶಕ್ತಿಗಳ ಬಗ್ಗೆ ಅರಿತು ಅವುಗಳನ್ನು ಪೂಜಿಸುತ್ತಾ ಬಂದಿರುವುದನ್ನು ನಾವೆಲ್ಲರೂ ಕಾಣಬಹುದಾಗಿದೆ. ಜಾತ್ರೆಗಳನ್ನು ಊರ ಒಳಗೆ ಮಾತ್ರವಲ್ಲದೆ, ಊರ ಹೊರಗಿನ ಬೆಟ್ಟಗುಡ್ಡ, ನದಿ, ಕೆರೆಗಳ ತಟದಲ್ಲಿ ನಡೆಸಿ ಎಡೆಯಿಟ್ಟು, ಹರಕೆ ಒಪ್ಪಿಸಿ ಎಲ್ಲರನ್ನು ಸುಖವಾಗಿಡು ಎಂದು ಪ್ರಾರ್ಥನೆ ಸಲ್ಲಿಸುವುದು ಎಲ್ಲೆಡೆಯೂ ನಡೆಯುತ್ತದೆ. ಎಲ್ಲ ಜಾತ್ರೆಗಳ ಆಶಯ ಕೂಡ ಪ್ರಕೃತಿಯನ್ನು ಆರಾಧಿಸುವುದೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ ಮಂಡ್ಯದ ಹಲವೆಡೆ ಪೂಜೆ ಜಾತ್ರೆಗಳು ನಡೆದಿವೆ ಮುಂದಿನ ದಿನಗಳಲ್ಲಿ ನಾಗಮಂಗಲ ತಾಲೂಕಿನ ದೇವಲಾಪರ ನಾಗನಕೆರೆಯಲ್ಲಿ ಗಿಡದ ಜಾತ್ರೆ ನಡೆಯಲಿದ್ದು, ಈ ಜಾತ್ರೆಗಾಗಿ ಭಕ್ತರು ಹಾತೊರೆಯುತ್ತಿದ್ದಾರೆ. ಪ್ರತಿವರ್ಷವೂ ಜಾತ್ರೆಯಲ್ಲಿ ಪಾಲ್ಗೊಂಡು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಿ ಬರುವುದು ನಡೆಯುತ್ತದೆ. ಈ ಜಾತ್ರೆ ವರ್ಷದ ಕೊನೆಯ ಡಿಸೆಂಬರ್ ನಲ್ಲಿ ನಡೆಯುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಬೇರೆಡೆಗೆ ಹೋಲಿಸಿದರೆ ಇಲ್ಲಿಯ ಜಾತ್ರೆ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ನಮಗೆಲ್ಲರಿಗೂ ಜಾತ್ರೆ ಎಂದಾಕ್ಷಣ ರಥೋತ್ಸವ, ಜನಜಂಗುಳಿ, ಪೂಜೆ, ವ್ಯಾಪಾರ ವಹಿವಾಟಿನ ದೃಶ್ಯಗಳು ನಮ್ಮ ಕಣ್ಣು ಮುಂದೆ ಬರುತ್ತವೆ. ಆದರೆ ನಾಗಮಂಗಲ ತಾಲೂಕಿನ ದೇವಲಾಪರ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆ ಮಾತ್ರ ಇತರೆಡೆಗಳಲ್ಲಿ ನಡೆಯುವ ಜಾತ್ರೆಯಂತೆ ಇರದೆ ತೀರಾ ಭಿನ್ನವಾಗಿದೆ. ಹೀಗಾಗಿಯೇ ಇದು ಗಮನಾರ್ಹವಾಗಿದೆ.
ಭಕ್ತರ ಪಾಲಿನ ಚಿಕ್ಕತಿರುಪತಿ
ದೇವಲಾಪರ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆ ಬಗ್ಗೆ ಹೇಳಬೇಕೆಂದರೆ ಈ ಜಾತ್ರೆಯಲ್ಲಿ ಹಲವು ವೈಶಿಷ್ಟ್ಯತೆಗಳಿರುವುದನ್ನು ನಾವು ಕಾಣಬಹುದಾಗಿದೆ. ಇಂತಹದೊಂದು ಜಾತ್ರೆ ನಡೆಯುತ್ತದೆ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಜಾತ್ರೆ ನಡೆಯುವ ಸ್ಥಳವನ್ನು ಚಿಕ್ಕ ತಿರುಪತಿ ಎಂದೇ ಕರೆಯಲಾಗುತ್ತದೆ. ಜಾತ್ರೆಯ ದಿನದಂದು ಎಲ್ಲೆಂದರಲ್ಲಿ ಗೋವಿಂದನ ನಾಮಸ್ಮರಣೆ.. ಜಾಗಟೆಯ ನಿನಾದ.. ತದೇಕ ಚಿತ್ತದಿಂದ ತಿಮ್ಮಪ್ಪನ ಸ್ಮರಿಸುವ ದಾಸರು.. ಬಯಲಲ್ಲೇ ನಡೆಯುವ ಪೂಜೆ.. ಅದರಾಚೆ ದೇವರಿಗೆ ಭಕ್ತರಿಂದ ಮಾಂಸ ಮದ್ಯದ ಎಡೆ.. ಹೀಗೆ ಹತ್ತಾರು ವಿಶೇಷತೆಗಳು ಕಾಣಸಿಗುತ್ತವೆ.

ಇನ್ನು ಈ ಜಾತ್ರೆಗೆ ಮಂಡ್ಯ ಜಿಲ್ಲೆಯವರು ಮಾತ್ರವಲ್ಲದೆ ಹೊರಗಿನವರು ಬರುತ್ತಾರೆ. ಎಲ್ಲರೂ ಒಂದೆಡೆ ಸೇರಿ ತಿಮ್ಮಪ್ಪನನ್ನು ಸ್ಮರಿಸಿ, ಪೂಜೆ ಮಾಡಿ ಹರಕೆ ಸಲ್ಲಿಸುತ್ತಾರೆ. ಇಲ್ಲಿ ಮದ್ಯ ಮತ್ತು ಮಾಂಸದ ಎಡೆ ಇಡುವುದು ಜಾತ್ರೆಯ ಮತ್ತೊಂದು ವಿಶೇಷ. ಅಂದು ಜಾತ್ರೆಗೆ ಆಗಮಿಸುವ ಭಕ್ತರಾದ ದಾಸರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಡದ ಗಿಡದ ಪ್ರದೇಶದಲ್ಲಿಟ್ಟು ಪೂಜಿಸುತ್ತಾರೆ. ಈ ವೇಳೆ ಕೇಳಿ ಬರುವ ಶಂಖ, ಜಾಗಟೆಯ ಸದ್ದು ಭಕ್ತರ ಮೈನವಿರೇಳಿಸುತ್ತದೆ.
ದೇವಲಾಪರ ನಾಗನಕೆರೆ ಎಲ್ಲಿದೆ?
ಇದರ ಜೊತೆಗೆ ಮದ್ಯ, ಮಾಂಸವನ್ನು ಎಡೆಗಿಟ್ಟು ಪೂಜಿಸಲಾಗುತ್ತದೆ. ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಭಕ್ತರು ಪೂಜೆ ಮಾಡಿ ಬೋಜನ ಸ್ವೀಕರಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಒಂದು ದಿನ ನಡೆಯುವ ಈ ಗಿಡದ ಜಾತ್ರೆಗೆ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಕೆಲವರು ಇಲ್ಲಿ ಹರಕೆಯಾಗಿ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ.
ಈ ಜಾತ್ರೆ ನಡೆಯುವ ದೇವಲಾಪರ ನಾಗನಕೆರೆ ತಾಣವು ನಾಗಮಂಗಲ ಪಟ್ಟಣದಿಂದ ಕೇವಲ 10 ಕಿ.ಮೀ. ದೂರದಲ್ಲಿದ್ದರೂ ಇಲ್ಲಿ ರಸ್ತೆ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಸಂಚಾರಕ್ಕೆ ಸಮರ್ಪಕ ವ್ಯವಸ್ಥೆಯೂ ಇಲ್ಲ ಎನ್ನುವುದು ಪ್ರತಿ ವರ್ಷವೂ ಭಕ್ತರು ಮಾಡುವ ಆರೋಪವಾಗಿದೆ. ಅದರೆ ಸೌಲಭ್ಯವಿರಲಿ, ಇಲ್ಲದಿರಲಿ ಜನ ಮಾತ್ರ ಇಲ್ಲಿಗೆ ಬಂದೇ ಬರುತ್ತಾರೆ. ಅಷ್ಟೇ ಅಲ್ಲದೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications