ಮಂಡ್ಯದಲ್ಲಿ ಭರ್ಜರಿ ಬೆಟ್ಟಿಂಗ್ : ಗೆದ್ದರೆ ಕೋಟಿ, ಸೋತರೆ ಲಂಗೋಟಿ!
Recommended Video
ಸುಮಕ್ಕನಿಗೆ ಒಂದು ಲಕ್ಷ, ನಿಖಿಲ್ ಗಾದರೆ ಒಂದು ಲಕ್ಷಕ್ಕೆ ಹತ್ತು ಸಾವಿರ ಜಾಸ್ತಿ, ವ್ಯವಹಾರ ಪಕ್ಕಾ ಅಂದ್ರೆ, ಪಕ್ಕಾ.. ಇಲ್ಲಾಂದ್ರೆ ಇಲ್ಲಾ ಕಣಣ್ಣಾ.. ಈ ರೀತಿಯ ಬೆಟ್ಟಿಂಗ್ ದಂಧೆಯ ಆಡಿಯೋವೊಂದು, ಖಾಸಗಿ ಕನ್ನಡ ಸುದ್ದಿವಾಹಿನಿಯಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಮಂಡ್ಯದಲ್ಲಿ ಬೆಟ್ಟಿಂಗ್ ವ್ಯವಹಾರ ಎಗ್ಗಿಲ್ಲದ್ದಂತೇ ಸಾಗುತ್ತಿದೆ. ಬರೀ ಹಣ, ಒಡವೆ ಅಲ್ಲದೇ ಕುರಿ, ಕೋಳಿ, ಜೋಡೆತ್ತುಗಳು, ಅಷ್ಟೇ ಯಾಕೆ ತಮ್ಮ ಎಕರೆಗಟ್ಟಲೆ ಫಲವತ್ತಾದ ಜಮೀನನ್ನು ಬೆಟ್ಟಿಂಗ್ ನಲ್ಲಿ ಹೂಡುತ್ತಿದ್ದಾರೆ. ಬಂದ್ರೆ ಕೋಟಿ.. ಇಲ್ಲಾಂದ್ರೆ ಲಂಗೋಟಿ..
ರಾಜ್ಯದ ಎರಡೂ ಹಂತದ ಲೋಕಸಭಾ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಮೇ 23ರ ವರೆಗೆ ಕಾಯುವ ಅನಿವಾರ್ಯತೆ. ಈ ಗ್ಯಾಪ್ ನಲ್ಲಿ, ಆ ಬೂತ್ ನಲ್ಲಿ ವೋಟ್ ಎಷ್ಟು ಬಿದ್ದಿರಬಹುದು, ಈ ಬೂತ್ ನವರು ನಮಗ್ಯಾಕೆ ಕೈಕೊಟ್ಟರು ಎನ್ನುವ ಸೋಲು ಗೆಲುವಿನ ಲೆಕ್ಕಾಚಾರ.
ಮತದಾನ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಭ್ಯರ್ಥಿಗಳ ಮೇಲೆ ಪಕ್ಷದ ಮೇಲೆ ಅಭಿಮಾನ ಇರುವುದು ತಪ್ಪಲ್ಲ. ಆದರೆ, ಅತಿರೇಕವಾದರೆ? ನಮ್ಮಲ್ಲಿ ಈ ರೀತಿಯ ಸಮಸ್ಯೆಯೊಂದು ಹಿಂದಿನಿಂದಲೂ ಇದೆ, ಅದು ರಾಜಕಾರಣಿಗಳಾಗಿರಲಿ, ಚಿತ್ರನಟರಾಗಿರಲಿ.. ಜನ ಬೇಗ ಅವರನ್ನು ಪ್ರೀತಿಸುತ್ತಾರೆ, ಆರಾಧಿಸುತ್ತಾರೆ.. ಜೊತೆಗೆ ದ್ವೇಷಿಸುತ್ತಾರೆ ಕೂಡಾ.

ಮಂಡ್ಯ ಬೆಟ್ಟಿಂಗ್ ಒಂದು ಕೈಯಲ್ಲ ಹತ್ತು ಕೈಮೇಲು
ರಾಜ್ಯದೆಲ್ಲಡೆ ಬೆಟ್ಟಿಂಗ್ ನಡೆಯುತ್ತಿದೆ. ಆದರೆ, ಮಂಡ್ಯದಲ್ಲಿ ಒಂದು ಕೈಯಲ್ಲ ಹತ್ತು ಕೈಮೇಲು. ರಾಜ್ಯ ಇತ್ತೀಚೆಗೆ ಕಂಡುಕೇಳರಿಯದ ಹೈಪ್ ಆ ಕ್ಷೇತ್ರದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಿಕ್ಕಿತ್ತು. ಆದರೆ ಅದರ ಕಾವು, ಇಲೆಕ್ಷನ್ ಮುಗಿದ ಬೆನ್ನಲ್ಲೇ ಬೆಟ್ಟಿಂಗ್ ರೂಪದಲ್ಲಿ ಜಾಸ್ತಿಯಾಗುತ್ತಿದೆ. ಲಕ್ಷ ಲಕ್ಷ ಬೆಟ್ಟಿಂಗ್ ನಲ್ಲಿ ಹೂಡುತ್ತಿದ್ದಾರೆ. ಒಬ್ಬ ಅಂತೂ ಜೀವನೋಪಾಯಕ್ಕೆ ನಂಬಿಕೊಂಡಿರುವ ಆಟೋರಿಕ್ಷಾವನ್ನೇ ಹೂಡಿದ್ದಾನಂತೆ..

ಫಲವತ್ತಾದ ಎಕರೆಗಟ್ಟಲೆ ಜಮೀನನ್ನೂ ಬೆಟ್ಟಿಂಗ್ ನಲ್ಲಿ ಅಡವಿಡುತ್ತಿದ್ದಾರೆ
ಬೆಟ್ಟಿಂಗ್ ನಲ್ಲಿ ಬರೀ ಹಣ ಚಲಾವಣೆಯಾಗುತ್ತಿಲ್ಲ, ಬದಲಿಗೆ ಕುರಿ, ಟ್ರ್ಯಾಕ್ಟರ್ ಜೊತೆಗೆ ತಮ್ಮ ಫಲವತ್ತಾದ ಎಕರೆಗಟ್ಟಲೆ ಜಮೀನನ್ನೂ ಬೆಟ್ಟಿಂಗ್ ನಲ್ಲಿ ಅಡವಿಡುತ್ತಿದ್ದಾರೆ. ಇದು ಮಂಡ್ಯದ ಜನರ ಪಾಲಿಗೆ ನೆಮ್ಮದಿಯನ್ನೇ ಹಾಳುಮಾಡುವಂತಹ ವಿದ್ಯಮಾನಗಳು ಮತ್ತು ಮನುಷ್ಯ ಮನುಷ್ಯರ ನಡುವೆ ದ್ವೇಷದ ವಾತಾವರಣಕ್ಕೂ ಇದು ಕಾರಣವಾಗುತ್ತಿದೆ ಎನ್ನುವುದು ಇಲ್ಲಿನ ಹಲವು ಜನರ ಅಭಿಪ್ರಾಯ ಕೂಡಾ..

ಸುಮಲತಾನೇ ಗೆಲ್ಲಲ್ಲಿ ಅಥವಾ ನಿಖಿಲ್ ಕುಮಾರಸ್ವಾಮಿಯೇ ಗೆಲ್ಲಲಿ ನಾವುಗಳು ಕೆಲಸ ಮಾಡುವುದು ತಪ್ಪುತ್ತಾ
ಸುಮಲತಾನೇ ಗೆಲ್ಲಲ್ಲಿ ಅಥವಾ ನಿಖಿಲ್ ಕುಮಾರಸ್ವಾಮಿಯೇ ಗೆಲ್ಲಲಿ ನಾವುಗಳು ಕೆಲಸ ಮಾಡುವುದು ತಪ್ಪುತ್ತಾ.. ಕಬ್ಬು ಖಟಾವ್ ಮಾಡುವುದನ್ನು ನಿಲ್ಲಿಸಲು ಆಗುತ್ತಾ, ಮಂಡಿಗೆ ಹೋಗುವುದು ನಿಲ್ಲುತ್ತಾ? ಬೆಟ್ಟಿಂಗ್ ನಲ್ಲಿ ಸೋತರೆ ಅದರ ನಷ್ಟವನ್ನು ಅಭ್ಯರ್ಥಿಗಳು ತುಂಬಿಕೊಡುತ್ತಾರಾ ಅಥವಾ ನಮ್ಮ ಪರವಾಗಿ ಬೆಟ್ಟಿಂಗ್ ನಡೆಸಿ ಎಂದು ನಿಖಿಲ್, ಸುಮಕ್ಕ ಹೇಳಿದ್ದಾರಾ ಎನ್ನುವ ಹಿರಿಯರಿಗೆ ಮಾತನ್ನು ಇಲ್ಲಿ ಕೇಳುವವರೇ ಇಲ್ಲ.

ಅಭಿಮಾನ ಇರಬೇಕು, ಅದು ಅತಿರೇಕವಾಗಬಾರದು
ಅಭಿಮಾನ ಇರಲಿ, ಯಾರ ಪರವಾಗಿ ಬೆಟ್ಟಿಂಗ್ ಕಟ್ಟಿರುತ್ತಾರೋ ಅವರು ಚುನಾವಣೆಯಲ್ಲಿ ಸೋತರೆ, ಬೆಟ್ಟಿಂಗ್ ನಲ್ಲಿ ಸೋತ ಜಮೀನುಗಳನ್ನು ಅಭ್ಯರ್ಥಿ ವಾಪಸ್ ತಂದುಕೊಡಲು ಸಾಧ್ಯವೇ? ಜಮೀನುಗಳನ್ನೇ ಜೀವನಾಧಾರವಾಗಿಟ್ಟು ಕೊಂಡಿರುವ ರೈತರ ಮಕ್ಕಳು ನಾವು, ಅದನ್ನೇ ಬೆಟ್ಟಿಂಗ್ ನಲ್ಲಿ ಹೂಡಿದರೆ, ನಿಮ್ಮನ್ನೇ ನಂಬಿರುವ ಕುಟುಂಬದ ಪಾಡೇನು ಎನ್ನುವ ಅರಿವು ನಿಮಗಳಿಗೆ ಬರುವುದು ಯಾವಾಗ ಎಂದು ಬುದ್ದಿ ಹೇಳಲು ಹೋದರೆ, ನಿಮ್ ಕ್ಯಾಮೇ ನೀವು ನೊಡ್ಕೊಳ್ಳಿ ಎನ್ನುವ ಉತ್ತರ ಬರುತ್ತೆ ಎನ್ನುವುದು ಕೆಲವರ ಹತಾಶ ನುಡಿಗಳು.

ನಿಮ್ಮ ಜೀವನ ನೀವು ನೋಡಿಕೊಳ್ಳಿ, ಗೆದ್ದ ಅಭ್ಯರ್ಥಿಗಳು ಬರುವುದಿಲ್ಲ
ಸರಕಾರ ಬೆಟ್ಟಿಂಗ್ ವಿರುದ್ದ ಕ್ರಮತೆಗೆದುಕೊಳ್ಳಲು ಮುಂದಾಗಿದೆ. ಮಂಡ್ಯದ ಇಬ್ಬರೂ ಅಭ್ಯರ್ಥಿಗಳು ಬೆಟ್ಟಿಂಗ್ ಆಡಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಯಾರೇ ಗೆಲ್ಲಲಿ, ಯಾರೇ ಸೋಲಲಿ ನಮ್ಮ ಕೆಲಸ ನಾವು ಮಾಡುವುದು ತಪ್ಪುವುದಿಲ್ಲ ಎನ್ನುವ ಕನಿಷ್ಠ ಅರಿವಿದ್ದರೆ, ಹೊನ್ನುಮಣ್ಣು, ನೆಮ್ಮದಿ, ಸಂಸಾರವನ್ನು ಕಳೆದುಕೊಳ್ಳುವುದಿಲ್ಲ. ಫಲಿತಾಂಶದ ದಿನ ಗೆದ್ದ ಅಭ್ಯರ್ಥಿಗೆ ಒಂದೆರಡು ಜೈಕಾರ ಹಾಕಿ.. ಸೋತ ಅಭ್ಯರ್ಥಿಯ ಬೆನ್ನುತಟ್ಟಿ.. ಅದು ಬಿಟ್ಟು...












Click it and Unblock the Notifications