ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ
ಮಂಡ್ಯ, ಏಪ್ರಿಲ್ 1: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಿಖಿಲ್ ಕುಮಾರಸ್ವಾಮಿ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿಲ್ಲ. ನಾಮಪತ್ರ ಸಲ್ಲಿಕೆ ವೇಳೆ ಅಕ್ರಮ ನಡೆದಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಎಂಬುವವರು ಆರೋಪಿಸಿದ್ದರು.
ಈ ಬಗ್ಗೆ ಚುನಾವಣಾ ವೀಕ್ಷಕರಾದ ರಂಜಿತ್ ಕುಮಾರ್ ಮತ್ತು ರಾಣಿ ನಗರ್ ಅವರು ಐದು ಪುಟಗಳಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ವಿವರಣೆ ನೀಡಿದ್ದಾರೆ.

ಮದನ್ ಕುಮಾರ್ ಅವರ ಆರೋಪ ಆಧಾರ ರಹಿತ. ಅವರು ಮತದಾರರಲ್ಲಿ ಗೊಂದಲ ಮೂಡಿಸುವ ಉದ್ದೇಶ ಹೊಂದಿದ್ದಾರೆ. ನಾಮಪತ್ರ ಮತ್ತು ಅಫಿಡವಿಟ್ ಪರಿಶೀಲನೆ ಮಾಡಿದ್ದೇವೆ. ಎಲ್ಲ ದಾಖಲೆಗಳೂ ಕಾನೂನು ಬದ್ಧವಾಗಿವೆ ಹಾಗೂ ಕ್ರಮಬದ್ಧವಾಗಿವೆ.
ಮದನ್ ಕುಮಾರ್ ಅವರು ಸಲ್ಲಿಸಿದ್ದ ಆಕ್ಷೇಪಗಳನ್ನು ಪರಿಹರಿಸಲಾಗಿದೆ ಎಂದು ಚುನಾವಣಾ ವೀಕ್ಷಕರು ತಿಳಿಸಿದ್ದಾರೆ.
'ನಮ್ಮ ಸಮ್ಮುಖದಲ್ಲಿಯೇ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅನುಮೋದನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಮಾಣಪತ್ರದಲ್ಲಿ ಲೋಪ ಇರುವುದು ಕಂಡುಬಂದಿತ್ತು. ಬಳಿಕ ಅದನ್ನು ಪರಿಷ್ಕರಣೆ ಮಾಡಲಾಗಿತ್ತು. ಆಗ ಹಾಜರಿದ್ದ ಸುಮಲತಾ ಪರ ಏಜೆಂಟ್ ಮದನ್ ಕುಮಾರ್ ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಅದು ಅನುಮೋದನೆಯಾದ ನಂತರ ಆಕ್ಷೇಪಣೆ ಸಲ್ಲಿಸಿದ್ದಾರೆ. ಹೀಗಾಗಿ ನಾಮಪತ್ರ ಕ್ರಮಬದ್ಧವಾಗಿ ಇದೆ' ಎಂಬುದಾಗಿ ವರದಿಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಸರಿಯಾಗಿ ಚಿತ್ರೀಕರಣ ನಡೆದಿಲ್ಲ. ಚಿತ್ರೀಕರಣದಲ್ಲಿ ಲೋಪ ಎಸದಗಿದ ಸಂಬಂಧ ಛಾಯಾಗ್ರಾಹಕನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications