ಸ್ವರಾಜ್ ಇಂಡಿಯಾ ಪರ ಪುಟ್ಟಣ್ಣಯ್ಯ ಕುಟುಂಬದ ಒಲವು
ಮಂಡ್ಯ, ಮಾರ್ಚ್ 12: ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್ )ದ ನಾಯಕ ಕೆ.ಎಸ್ ಪುಟ್ಟಣ್ಣಯ್ಯ ಅವರ ಅಗಲಿಕೆಯ ನೋವಿನಲ್ಲೇ ರೈತರ ನೋವನ್ನು ಆಲಿಸುವ ಪರಿಸ್ಥಿತಿಯನ್ನು ಪುಟ್ಟಣ್ಣಯ್ಯ ಅವರ ಕುಟುಂಬ ಎದುರಿಸುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪುಟ್ಟಣ್ಣಯ್ಯ ಅವರ ಪತ್ನಿ ಹಾಗೂ ಮಗನಿಗೆ ಎಲ್ಲೆಡೆಯಿಂದ ಒತ್ತಡ ಹೆಚ್ಚಾಗುತ್ತಿದೆ.
ವಿಧಾನಸಭಾ ಚುನಾವಣೆಗೆ ಸ್ವರಾಜ್ ಇಂಡಿಯಾ (ರೈತಸಂಘ) ಪಕ್ಷದಿಂದ ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್)ವು ತಮ್ಮ ಏಕೈಕ ಜನಪ್ರತಿನಿಧಿಯಾಗಿದ್ದ ಮೇಲುಕೋಟೆ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರನ್ನು ಕಳೆದುಕೊಂಡ ದುಃಖದಲ್ಲಿದೆ. ಈ ನಡುವೆ ಪುಟ್ಟಣ್ಣಯ್ಯ ಅವರ ನಂತರವೂ ರೈತ ಪರ ಹೋರಾಟ ಮುಂದುವರೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಂದಾಗಿದ್ದು, 50 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿದೆ.

ರೈತರ ಸಮಸ್ಯೆಗಳ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಚುನಾವಣೆಯನ್ನು ರೈತ ಸಂಘ ಚಳವಳಿಯನ್ನಾಗಿ ಸ್ವೀಕರಿಸಿದ್ದು, ಸಂಘಟನೆಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆಸಕ್ತ ರೈತರು ಸಂಘದಲ್ಲಿ ಅರ್ಜಿ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಈ ನಡುವೆ ಚುನಾವಣೆ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಅವರು, ಕೆಎಸ್ ಪುಟ್ಟಣ್ಣಯ್ಯ ಅವರ ಅಗಲಿಕೆಯ ದುಃಖದಲ್ಲಿ ನಾವಿದ್ದೇವೆ,ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ನಮ್ಮ ಕುಟುಂಬ ನಿರ್ಧರಿಸಿಲ್ಲ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿದರೆ, ಸ್ವರಾಜ್ ಇಂಡಿಯಾ ಪಕ್ಷದಿಂದ ಮಾತ್ರ ಸ್ಪರ್ಧೆಗಿಳಿಯುವುದಾಗಿ ಹೇಳಿದರು.












Click it and Unblock the Notifications