ತಿರುಗಿ ನೋಡುವರೇ ಮಂಡ್ಯದ ಕೃಷ್ಣಗೌಡನದೊಡ್ಡಿಯ ಜನರನ್ನ?
ಮಂಡ್ಯ, ಮೇ 27: ಆಧುನಿಕತೆಯ ನಾಗಾಲೋಟದಲ್ಲಿ ಪ್ರಪಂಚ ಸಾಗುತ್ತಿರುವಾಗ ಇಂದಿಗೂ ಹುಲ್ಲಿನ ಚಾವಣಿಯ ಪುಟ್ಟ ಗುಡಿಸಲುಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲದೆ, ಆದಿ ಮಾನವರಂತೆ ಬದುಕುತ್ತಿರುವ ಜನರಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ. ಆದರೂ ನಂಬಲೇಬೇಕು.
ಅದು ಬೇರೆಲ್ಲೂ ಅಲ್ಲ, ಕಳೆದ ಕೆಲವು ದಿನಗಳಿಂದ ತುಂಬಾ ಸುದ್ದಿಯಲ್ಲಿದ್ದ ಮಂಡ್ಯ ಜಿಲ್ಲೆಯಲ್ಲಿ. ಸೌಲಭ್ಯ ವಂಚಿತರಾಗಿ ನಿಕೃಷ್ಟ ಜೀವನ ಸಾಗಿಸುತ್ತಿರುವ ಜನರು ಇಂದಿಗೂ ಈ ಊರಿನಲ್ಲಿದ್ದಾರೆ.
ಈಗಾಗಲೇ ಮಂಡ್ಯದ ಅಭಿವೃದ್ಧಿ ಕುರಿತಂತೆ ಪುಂಖಾನುಪುಂಖವಾಗಿ ಜನಪ್ರತಿನಿಧಿಗಳು ಮಾತನಾಡುತ್ತಿದ್ದಾರೆ, ಆದರೆ ಅವರಿಗೆ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಕುಗ್ರಾಮ ಕೃಷ್ಣಗೌಡನದೊಡ್ಡಿಯ ಜನರ ಗೋಳಿನ ಬದುಕು ಇನ್ನೂ ಗಮನಕ್ಕೆ ಬಂದಂತಿಲ್ಲ.

ಕೃಷ್ಣಗೌಡನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ದೇ ಆದರೆ, ಅಲ್ಲಿ ಹುಲ್ಲಿನ ಹೊದಿಕೆಯ, ತೆಂಗಿನ ಗರಿಯ ಗುಡಿಸಲು, ರಭಸವಾಗಿ ಗಾಳಿ ಬೀಸಿದರೆ ಹಾರಿಹೋಗುವಂತಿರುವ ತಗಡಿನ ಶೀಟ್ಗಳ ಜೋಪಡಿಗಳಲ್ಲಿ ಜೀವ ಕೈಯಲ್ಲಿಡಿದುಕೊಂಡು ಬದುಕುತ್ತಿರುವ ಜನರು ಕಾಣಸಿಗುತ್ತಾರೆ.
ಬಡವರಿಗಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವ್ಯಾವುದೂ ಇಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಮತ್ತು ಅದನ್ನು ಸಮರ್ಪಕವಾಗಿ ತಲುಪಿಸಬೇಕಾದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ತಿರುಗಿಯೂ ನೋಡದಿರುವುದು ಎದ್ದು ಕಾಣುತ್ತದೆ. ಇದೆಲ್ಲದರ ಪರಿಣಾಮದಿಂದ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವವರೆಲ್ಲರೂ ಗುಡಿಸಲುವಾಸಿಗಳಾಗಿಯೇ ಉಳಿದು ಹೋಗಿದ್ದಾರೆ.

ಕೃಷ್ಣಗೌಡನದೊಡ್ಡಿ ಗ್ರಾಮದಲ್ಲಿ ವಾಸಿಸುತ್ತಿರುವವರ ಪೈಕಿ ಹದಿಮೂರು ಭೋವಿ ಕುಟುಂಬ ಹಾಗೂ ಹತ್ತು ಮೇದ ಜನಾಂಗದ ಕುಟುಂಬ ವಾಸವಿದೆ. ಕೂಲಿಕಾರ್ಮಿಕರಾಗಿ, ಕುಲಕಸುಬನ್ನು ನಂಬಿಕೊಂಡು ಇವರು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ವಾಸವಿರುವ ಈ ಕುಟುಂಬಗಳಿಗೆ ಒಳ್ಳೆಯ ಸೂರು, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ, ಶೌಚಾಲಯ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಯಾವುದೇ ರೀತಿಯ ಮೂಲಭೂತ ಸೌಲಭ್ಯವಿಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇಲ್ಲಿ ವಾಸಿಸುವವರ ಪೈಕಿ ಒಬ್ಬ ಸ್ನಾತಕೋತ್ತರ ಪದವೀಧರ, ಒಬ್ಬ ಪದವೀಧರ, ಮೂರು ಜನ ಪದವಿ ಪೂರ್ವ ಶಿಕ್ಷಣ ಹಾಗೂ ಆರು ಮಂದಿ ಮೆಟ್ರಿಕ್ ಶಿಕ್ಷಣ ಮತ್ತು ಐದರಿಂದ ಏಳು ಜನ ಹಿರಿಯ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಈ ವ್ಯಾಪ್ತಿಯಲ್ಲಿದ್ದ ಸರ್ಕಾರಿ ಶಾಲೆ ಮಕ್ಕಳಿಲ್ಲದೆ ಮುಚ್ಚಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಪರದಾಡುತ್ತಿದ್ದಾರೆ.
ಇನ್ನು ಮುಂದೆಯಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ಕೃಷ್ಣಗೌಡನದೊಡ್ಡಿ ಗ್ರಾಮದತ್ತ ಗಮನಹರಿಸಿ ಇಲ್ಲಿನವರ ಕಷ್ಟವನ್ನು ನಿವಾರಿಸಿ, ಮೂಲಭೂತ ಸೌಲಭ್ಯವಿಲ್ಲದೆ ಬದುಕುತ್ತಿರುವವರಿಗೊಂದು ಹೊಸ ಬದುಕನ್ನು ಕಟ್ಟಿಕೊಡಬೇಕಾಗಿದೆ.












Click it and Unblock the Notifications