ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಅಂಬಿ, ಏನು ಮಾಡುತ್ತೆ ಕಾಂಗ್ರೆಸ್?
ಮಂಡ್ಯ, ಏಪ್ರಿಲ್ 21: ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಅವರು ಹೇಳಿದ್ದಾರೆ. ಆದರೆ ತಾವು ಸೂಚಿಸಿದವರಿಗೇ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ.
ಮಂಡ್ಯಕ್ಕೆ ಬರುವಂತೆ ಅಂಬಿ ನಿವಾಸಕ್ಕೆ ದೌಡಾಯಿಸಿದ ಮುಖಂಡರು
ಅಂಬರೀಶ್ ಅವರಿಗೆ ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆದರೆ ಅಂಬರೀಶ್ ಅವರು ಬಿ-ಫಾರಂ ಪಡೆದಿರಲಿಲ್ಲ, ಕೊನೆಗೆ ಕಾಂಗ್ರೆಸ್ ಮುಖಂಡರೇ ಬಿ-ಫಾರಂ ಅನ್ನು ಅಂಬರೀಶ್ ಅವರಿಗೆ ತಲುಪಿಸಿದ್ದರು, ಆದರೆ ಈಗ ಅವರು, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಠ ಹಿಡಿದಿದ್ದಾರೆ.
ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ
ಕೆಪಿಸಿಸಿ ಪರಮೇಶ್ವರ್, ಕೆಜೆ ಜಾರ್ಜ್ ಕೊನೆಗೆ ರಾಜ್ಯ ಉಸ್ತುವಾರಿ ಕೆ.ವೇಣುಗೋಪಾಲ್ ಎಲ್ಲರೂ ಅಂಬರೀಶ್ ಜೊತೆಗೆ ಮಾತನಾಡಿದರೂ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸದಿರುವ ತಮ್ಮ ನಿರ್ಧಾರದಿಂದ ಹಿಂದೆ ಬರಲಿಲ್ಲ. ಹಾಗಿದ್ದರೆ ಮಂಡ್ಯಕ್ಕೆ ಯಾರು ಅಭ್ಯರ್ಥಿ ಆಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಭರವಸೆ ನೀಡಿದರೂ ಸ್ಪರ್ಧೆಗೆ ನಕಾರ
ಅಂಬರೀಶ್ ಅವರು ಕಾಂಗ್ರೆಸ್ ಮುಂದೆ ಕೆಲವು ಷರತ್ತುಗಳನ್ನು ಇಟ್ಟಿದ್ದಾರೆ ಅವನ್ನು ಈಡೇರಿಸಿದರೆ ಮಾತ್ರವೇ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಅವರು ಸ್ಪಷ್ಟವಾಗಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮುಖಂಡರ ಬಳಿಯೇ ಹೇಳಿದ್ದಾರೆ. ಮಂತ್ರಿ ಮಾಡಬೇಕು, ಮಂಡ್ಯ ಚುನಾವಣಾ ಉಸ್ತುವಾರಿ ತಮಗೆ ನಿಡಬೇಕು, ಮತ್ತು ರಮ್ಯಾರನ್ನು ರಾಷ್ಟ್ರ ರಾಜಕಾರಣಕ್ಕೆ ಸೀಮಿತ ಮಾಡಬೇಕು ಎಂಬ ಷರತ್ತುಗಳನ್ನು ಅಂಬರೀಶ್ ಅವರು ಕಾಂಗ್ರೆಸ್ ಮುಂದೆ ಇಟ್ಟಿದ್ದರು ಎನ್ನಲಾಗಿತ್ತು.
ಯಾರಿಗಾಗಿ ಲಾಭಿ ನಡೆಸಿದ್ದಾರೆ ಅಂಬಿ?
ನಾಮಪತ್ರ ಸಲ್ಲಿಕೆಗೆ ಇರುವುದು ಇನ್ನು ಎರಡು ದಿನವಷ್ಟೆ (ಭಾನುವಾರದ ರಜಾ) ಆದರೆ ಇನ್ನೂ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಅಂಬರೀಶ್ ಉಮೇದುವಾರಿಕೆ ಸಲ್ಲಿಸಿಲ್ಲ. ಆದರೆ ತಾವು ಸೂಚಿಸಿದವರಿಗೆ ಟಿಕೆಟ್ ನೀಡಬೇಕೆಂದು ಅಂಬಿ ಒತ್ತಾಯಿಸುತ್ತಿದ್ದು, ಅವರ ಆಪ್ತವಲಯದ ಅಭ್ಯರ್ಥಿಯನ್ನು ಅವರು ಸೂಚಿಸುತ್ತಿದ್ದಾರೆ ಆದರೆ ಆ ಅಭ್ಯರ್ಥಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿದೆ.
ಅಂಬರೀಶ್ ಸಿಟ್ಟಿಗೆ ಕಾರಣವೇನು?
ಅಂಬರೀಶ್ ಅವರಿಂದ ಏಕಾ-ಏಕಿ ಮಂತ್ರಿ ಸ್ಥಾನ ಕಿತ್ತುಕೊಂಡಿದ್ದು ಮತ್ತು ಮಂಡ್ಯ ರಾಜಕೀಯದ ಉಸ್ತುವಾರಿ ಚಲುವರಾಯಸ್ವಾಮಿಗೆ ವಹಿಸಿರುವುದು ಅಂಬರೀಶ್ ಅವರ ಸಿಟ್ಟಿಗೆ ಕಾರಣವಾಗಿದೆ. ಜೊತೆಗೆ ರಮ್ಯಾ ಅವರಿಗೆ ರಾಜ್ಯ ರಾಜಕೀಯದಲ್ಲಿ ನೀಡಲಾಗುತ್ತಿರುವ ಪ್ರಾಶಸ್ತ್ಯ ಕೂಡ ಅವರ ಅಸಹನೆಗೆ ಕಾರಣವಾಗಿದೆ ಎನ್ನಲಾಗಿದೆ.
ಅಮರಾವತಿ ಚಂದ್ರಶೇಖರ್ಗೆ ಅಪಮಾನ
ಇಂದು ಬೆಳಿಗ್ಗೆ ಮುಖ್ಯಂಮತ್ರಿಗಳ ಸೂಚನೆಯಂತೆ ಸಚಿವ ಕೆಜೆ ಜಾರ್ಜ್ ಮತ್ತು ಅಮರಾವತಿ ಚಂದ್ರಶೇಖರ್ ಅವರು ಅಂಬರೀಶ್ ಅವರ ನಿವಾಸಕ್ಕೆ ಭೇಟಿ ಮಾಡಲು ತೆರಳಿದ್ದರು ಆದರೆ ಬೇಕೆಂದೇ ಸಚಿವರು ಬರುವ ಕೆಲವು ಸಮಯ ಮುಂಚೆ ಅಂಬರೀಶ್ ಹೊರಟು ಹೋಗಿದ್ದಾರೆ. ಸಚಿವರಿಬ್ಬರೂ ಖಾಲಿ ಕೈಲಿ ವಾಪಾಸ್ಸಾದರು.
ಗಣಿಗ ರವಿಗೆ ಅವಕಾಶ ಸಿಗುತ್ತಾ?
ಮಂಡ್ಯದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಯುವಕ ಗಣಿಗ ರವಿಕುಮಾರ್ ಅವರು ಅರ್ಜಿ ಹಾಕಿದ್ದರು. ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ಯೋಚಿಸಬಹುದು. ಆದರೆ ಅಂಬರೀಶ್ ಅವರಿಗೆ ಟಿಕೆಟ್ ದೊರಕಿರುವುದು ಗೊತ್ತಾದ ಕೂಡಲೇ ಗಣಿಗ ರವಿ ಬೆಂಬಲಿಗರು ಮಂಡ್ಯ ಕೆಪಿಸಿಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದರು ಗಣಿಗ ರವಿ ಕೂಡಾ ತಾವು ಬಂಡಾಯವಾಗಿ ಅಂಬರೀಶ್ ವಿರುದ್ಧ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ.
ರಮ್ಯಾಗೆ ಕೊಡಬಹುದಾ?
ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸದಿದ್ದರೆ ಅವರ ಪತ್ನಿ ಸುಮಲತಾ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಗಾಳಿ ಸುದ್ದಿಯೂ ಹರಡಿದೆ. ರಮ್ಯಾ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಅಂಬರೀಶ್ ಭೇಟಿ ಆಗಲಿದ್ದಾರೆ ಸಿಎಂ
ಬೆಳಿಗ್ಗೆ ತಾನೇ ಅಂಬರೀಶ್ ಅವರನ್ನು ಭೇಟಿ ಆಗುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ ವೇಳೆಗೆ ವರಸೆ ಬದಲಿಸಿದ್ದಾರೆ. ಇಂದು ಸಂಜೆ ಸಿಎಂ ಅವರು ಅಂಬರೀಶ್ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ. ಆದರೆ ಅಂಬರೀಶ್ ಹೇಳಿದವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸಿಎಂ ಖಡಾಖಂಡಿತವಾಗಿ ಹೇಳಿದ್ದಾರೆ.