ನಿಖಿಲ್ ಪರ ಕೆಲಸ ಮಾಡಲು ಕೈ ಮುಖಂಡರ ನಕಾರ
Recommended Video

ಮಂಡ್ಯ, ಏಪ್ರಿಲ್ 10:ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಮಾಡಲು ಕಾಂಗ್ರೆಸ್ನ ಮುಖಂಡರು ಹಿಂದೇಟು ಹಾಕಿದ್ದಲ್ಲದೆ, ಜೆಡಿಎಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮದ್ದೂರು ಸಮೀಪದ ಶಿವಪುರದದಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಿವಪುರದಲ್ಲಿ ರಾಜ್ಯ ಸಭಾ ಸದಸ್ಯ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಚಂದ್ರಶೇಖರ್, ಜಿಲ್ಲಾ ಚುನಾವಣಾ ಉಸ್ತುವಾರಿ ಸಂಪಂಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮೊದಲಾದವರು ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಆದೇಶದಂತೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭ ಸಭೆಗೆ ಆಗಮಿಸಿದ್ದ ಮುಖಂಡರು ಅಸಮಾಧಾನಗೊಂಡಿದ್ದು, ಈ ಪೈಕಿ ರಾಘವ ಎಂಬುವವರು ಮಾತನಾಡಿ, ಎಪಿಎಂಸಿ ಸೇರಿದಂತೆ ಇನ್ನಿತರರ ಕಡೆಗಳಲ್ಲಿ ಕಾಂಗ್ರೆಸ್ ನಾಮನಿರ್ದೇಶಕರು ಕಿತ್ತು ಹಾಕಿ, ಜೆಡಿಎಸ್ ನಾಮನಿರ್ದೇಶಕರನ್ನು ನೇಮಕ ಮಾಡಿಕೊಂಡಿದ್ದಾರೆ. ಇದರಿಂದ ನಮಗೆ ತುಂಬಾ ನೋವಾಗಿದೆ, ಸುಮಲತಾ ಅವರು ಪ್ರಬಲ ಸ್ಪರ್ಧೆ ನೀಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸಹಕಾರ ಬೇಕು ಎಂದು ಜೆಡಿಎಸ್ ಅವರು ಕೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಶಿವರಾಮೇಗೌಡರು ಸ್ಪರ್ಧೆ ಮಾಡಿದಾಗ ನಮ್ಮನ್ನು ಯಾರು ಮಾತನಾಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದೆ ಓದಿ...

ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ
ಇನ್ನೊಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮಾತನಾಡಿ, ಮೈತ್ರಿ ಧರ್ಮ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ. ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಾನು ಎಂಬ ಕಾರಣಕ್ಕೆ ಒಕ್ಕೂಟದ ಅಭಿವೃದ್ಧಿಗೆ ಜೆಡಿಎಸ್ ಮುಖಂಡರು ಬಿಡುತ್ತಿಲ್ಲ ಮತ್ತು ಒಕ್ಕೂಟದಲ್ಲಿ ನೇಮಕಾತಿ ಆದೇಶ ತಡೆಹಿಡಿದರು. ಬೇರೆ ಜಿಲ್ಲೆಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದರು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ರೀತಿಯಾದರೆ ಜೆಡಿಎಸ್ ಪರವಾಗಿ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡುವುದು ಎಂದು ಕಾರ್ಯಕರ್ತರನ್ನು ನಮ್ಮನ್ನು ಕೇಳುತ್ತಿದ್ದಾರೆ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

ಜಾತಿನಿಂದನೆ ಪ್ರಕರಣ ದಾಖಲು
ತಾಪಂ ಮಾಜಿ ಅಧ್ಯಕ್ಷ ಪಿ.ಸಂದರ್ಶ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ನನ್ನ ಮೇಲೆ ಜಾತಿನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ. ಇದರಿಂದ 3 ತಿಂಗಳಿಗೊಮ್ಮೆ ನಾನು ಕೋರ್ಟ್ ಅಲೆಯುವ ಸ್ಥಿತಿ ಬಂದಿದೆ. ಈಗ ಬಂದು ನೀವು ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಿ ಎಂದರೆ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ
ಕಾಂಗ್ರೆಸ್ ಮಖಂಡ ಮರಿಯಪ್ಪ ಎಂಬುವರು ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ 5 ಶಾಸಕರು, 2ಸಚಿವರು, 3 ವಿಧಾನ ಪರಿಷತ್ ಸದಸ್ಯರಿದ್ದಾರೆ. ಚುನಾವಣೆಯಲ್ಲಿ ಸಂಸದರು ಅವರೇ ಆದರೆ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ನಿರ್ನಾಮವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.

ನಿಖಿಲ್ ಪರವಾಗಿ ಕೆಲಸಕ್ಕೆ ಬೇಸರ
ಜತೆಗೆ ಇನ್ನು ಹಲವು ಮುಖಂಡರು ನಿಖಿಲ್ ಕುಮಾರಸ್ವಾಮಿ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಲು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯ ಸಭಾ ಸದಸ್ಯ ಚಂದ್ರಶೇಖರ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ಕುಮಾರ್, ಚುನಾವಣಾ ಉಸ್ತುವಾರಿಗಳಾದ ಶಾರದಮ್ಮ, ನಾಗರಾಜು, ಹರೀಶ್ಬಾಬು, ಮುಖಂಡ ಅಜ್ಜಹಳ್ಳಿ ರಾಮಕೃಷ್ಣ ಇತರರು ಹಾಜರಿದ್ದರು.












Click it and Unblock the Notifications