ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಆಕ್ರೋಶ, ಹೆದ್ದಾರಿ ಬಂದ್
ಮಂಡ್ಯ, ಸೆಪ್ಟೆಂಬರ್ 19 : ತಮಿಳುನಾಡಿಗೆ ಮತ್ತೆ ಸೆ.21ರಿಂದ 30ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ನಂತೆ ಒಟ್ಟು 30 ಸಾವಿರ ಕ್ಯೂಸೆಕ್ಸ್ ನೀರನ್ನು ಕೆ.ಆರ್.ಎಸ್. ಜಲಾಶಯದಿಂದ ಬಿಡುವಂತೆ ಆದೇಶ ನೀಡಿರುವ ಕಾವೇರಿ ಮೇಲುಸ್ತುವಾರಿ ಸಮಿತಿಯ ಆದೇಶ ಖಂಡಿಸಿ ಕಾವೇರಿಕೊಳ್ಳದಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದೆ.
ಸೋಮವಾರ, ಸೆ. 19ರಂದು ಸಮಿತಿಯ ಆದೇಶ ಹೊರಬೀಳುತ್ತಿದ್ದಂತೆ ನಿಷೇಧಾಜ್ಞೆ ನಡುವೆಯೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಸತ್ಯಾಗ್ರಹ ಧರಣಿ ಸ್ಥಳದಲ್ಲಿ ಜಮಾವಣೆಗೊಂಡ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾವೇರಿ ಉಸ್ತುವಾರಿ ಸಮಿತಿಯ ಆದೇಶವನ್ನು ಒಕ್ಕೊರಲಿನಿಂದ ಖಂಡಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತು ವಾಹನಗಳನ್ನು ತಡೆದು, ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿಯು ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದು, ಸಮಿತಿಯು ಸೋಮವಾರ ನೀಡಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ['ದಿಟ್ಟತನ ತೋರಲು ರಾಜ್ಯ ಸರ್ಕಾರಕ್ಕೆ ಇದು ಸಕಾಲ']
ಸಿಎಂ ಸಿದ್ದರಾಮಯ್ಯ ಮಾತಿಗೆ ಬದ್ಧರಾಗಿರಲಿ
ಸೆ.20ರ ನಂತರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಬದ್ಧರಾಗಿರಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಆಗ್ರಹಿಸಿದರು.
ಕಾವೇರಿ ಮೇಲುಸ್ತುವಾರಿ ಸಮಿತಿಯ ಆದೇಶ ರಾಜ್ಯಕ್ಕೆ ಮಾರಕವಾಗಿದ್ದು, ಯಾವುದೇ ಕಾರಣಕ್ಕೂ ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ನೀರನ್ನು ಬಿಡಬಾರದು ಎಂದ ಅವರು, ಸರ್ಕಾರ ನಡೆಸಲು ಸಿದ್ದರಾಮಯ್ಯಗೆ ಕಷ್ಟವಾದಲ್ಲಿ ಸಿಎಂ ಕುರ್ಚಿಯಿಂದ ಕೆಳಗಿಳಿಯಲಿ. ಅವರು ಅಧಿಕಾರ ಬಿಟ್ರೆ ಸಂತೋಷ, ಬಿಡದೇ ಇದ್ದರೆ ಘೇರಾವ್ ಮಾಡೋಣ, ಬಲವಂತ ಮಾಡೋಣ, ಓಡಾಡಬೇಡ ನನ್ನ ಮಗನೇ ಅಂತಾ ಹೇಳೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. [ಸೆ. 21ರಿಂದ 30ರ ವರೆಗೆ ಕಾವೇರಿ ನೀರು ಬಿಡಿ: ಶಶಿಶೇಖರ್]
ನೀರು ಬಿಡುವ ಸಂಬಂಧ ರಾಜ್ಯ ಸರ್ಕಾರದ ನಡೆ ನೋಡಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ಹೋರಾಟಕ್ಕೆ ಮಠಾಧೀಶರು ಬೆಂಬಲ ಸೂಚಿಸಿದ್ದು, ಆನೆ ಬಲ ಬಂದಂತಾಗಿದೆ. ಕಾವೇರಿ ನದಿ ನೀರು ವಿಚಾರವಾಗಿ ಪ್ರಧಾನಿ ಬಳಿ ನಿಯೋಗ ಹೋಗಲು ಮಠಾಧೀಶರು ತಿಳಿಸಿದ್ದಾರೆ. ಕಾವೇರಿ ವಿಷಯದಲ್ಲಿ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡ್ತೀವಿ, ನಮ್ಮ ಜೊತೆ ಮಠಾಧೀಶರೂ ಹೋರಾಟಕ್ಕೆ ಧುಮುಕಲಿದ್ದಾರೆ ಎಂದು ಮಾದೇಗೌಡ ತಿಳಿಸಿದರು.
ಕೆ.ಆರ್.ಎಸ್.ನಿಂದ ನೀರು ನಿಲುಗಡೆ
ಕೃಷ್ಣರಾಜ ಸಾಗರ ಜಲಾಶಯದಿಂದ ಸುಪ್ರೀಂ ಆದೇಶದಂತೆ ಕಳೆದ 14 ದಿನಗಳಿಂದ ತಮಿಳುನಾಡಿಗೆ ಹರಿಸಲಾಗುತ್ತಿದ್ದ ನೀರನ್ನು ಸೋಮವಾರ ಸಂಜೆಯಿಂದ ನಿಲ್ಲಿಸಲಾಗಿದೆ.
ಸಿಎಂಸಿ ಆದೇಶ ಖಂಡಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರು ಬೀದಿಗಿಳಿಯುತ್ತಿದ್ದಂತೆ ಕೊಂಚ ಮಟ್ಟಿಗೆ ಹೆದರಿದಂತೆ ಕಂಡ ರಾಜ್ಯ ಸರ್ಕಾರ ತಕ್ಷಣವೇ ನೀರನ್ನು ನಿಲ್ಲಿಸುವಂತೆ ಕೆ.ಆರ್.ಎಸ್.ನ ನೀರಾವರಿ ಅಧಿಕಾರಿಗಳಿಗೆ ಸೂಚಿಸಿತು.
ಸರ್ಕಾರದ ಸೂಚನೆಯಂತೆ ಅಧಿಕಾರಿಗಳು ಜಲಾಶಯದ ಗೇಟ್ಗಳನ್ನು ಬಂದ್ ಮಾಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ. ಸದ್ಯ ಜಲಾಶಯದಲ್ಲಿ 84.25 ಅಡಿ ನೀರಿದೆ. ಒಳಹರಿವು 6669 ಕ್ಯೂಸೆಕ್ಸ್ ಇದ್ದು, 252 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.