ಮಂಡ್ಯದಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಭದ್ರಾವತಿಯ ದಂಪತಿ
ಮಂಡ್ಯ, ಸೆಪ್ಟೆಂಬರ್ 15: ಕಬ್ಬು ಅರೆಯುವ ಆಲೆಮನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಭದ್ರಾವತಿ ಮೂಲದ ದಂಪತಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯದಲ್ಲಿ ರೈತರೇಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ?
ಭದ್ರಾವತಿ ಮೂಲದ ಸುಜಾತ(26) ಮತ್ತು ಚಂದ್ರು (34) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಕಳೆದ ಎರಡೂವರೆ ತಿಂಗಳ ಹಿಂದಷ್ಟೆ ಮಧ್ಯವರ್ತಿಯೊಬ್ಬರ ಸಹಾಯದಿಂದ ಕೆಲಸ ಅರಿಸಿಕೊಂಡು ಬಂದಿದ್ದ ಇವರು ಬೊಮ್ಮನಾಯಕನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವರ ಮಾಲೀಕತ್ವದ ಕಬ್ಬು ಅರೆಯುವ ಆಲೆಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಪಟ್ಟಣದಲ್ಲಿ ನಡೆಯುತ್ತಿದ್ದ ಬುಧವಾರ ಸಂತೆಯಲ್ಲಿ ತರಕಾರಿ ಮತ್ತಿತರರ ಅಡುಗೆ ಸಾಮಾನು ಕೊಂಡು ತಂದಿರುವ ದಂಪತಿ ಆ ನಂತರ ಅದೇನಾಯಿತೋ ಆಲೆಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಆಲೆಮನೆಯ ಮೇಸ್ತ್ರಿ ಮಂಜುನಾಥ ರಾಜೀವ ಅವರು ನೀಡಿದ ದೂರಿನ ಮೇರೆಗೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್.ಪಿ ಗಿರೀಶ್, ಎ.ಎಸ್.ಐ ಪಾಪಣ್ಣ, ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತರ ವಿಳಾಸ ಪತ್ತೆ ಹೆಚ್ಚುವ ಸಲುವಾಗಿ ಮೃತ ಸುಜಾತ ಮತ್ತು ಚಂದ್ರು ಅವರ ಶವಗಳನ್ನು ಮೈಸೂರಿನ ಶವಾಗಾರದಲ್ಲಿರಿಸಲಾಗಿದೆ.