ಹೆಗಲೇರಿದ 350 ಕೆಜಿ ಸೇಬಿನ ಹಾರದಿಂದ ಸೇಬು ಕಿತ್ತು ತಿಂದ ಡಿಕೆಶಿ!
Recommended Video

ಶ್ರೀರಂಗಪಟ್ಟಣ (ಮಂಡ್ಯ), ಮಾರ್ಚ್ 15: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದು ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದರು. ಈ ಸಂದರ್ಭ ಅವರನ್ನು ಸ್ವಾಗತಿಸಲು ಬೃಹತ್ ಸೇಬಿನ ಹಾರವನ್ನು ಹಾಕಲಾಯಿತು. ಈ ಹಾರದಿಂದ ಡಿಕೆಶಿ ಸೇಬಿನ ಹಣ್ಣನ್ನು ಕಿತ್ತು ತಿನ್ನುತ್ತಿದ್ದುದು ಗಮನಸೆಳೆಯಿತು. ಅಷ್ಟೇ ಅಲ್ಲ ಸೇಬಿನ ಹಾರದ ಹಣ್ಣಿಗಾಗಿ ಕೈ ಕಾರ್ಯಕರ್ತರೂ ಕಿತ್ತಾಡಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತೂಬಿನಕೆರೆ ಹೆಲಿಪ್ಯಾಡ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ನಂತರ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಯಲಿಯೂರು, ಸಿದ್ದಯ್ಯನಕೊಪ್ಪಲು, ಸುಂಡಹಳ್ಳಿ, ಇಂಡುವಾಳುಗೆ ಕರೆತರಲಾಯಿತು.
ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಮೇಲೆ ಪುಷ್ಪವೃಷ್ಟಿ ಮಾಡಿದರು. ಜೆಸಿಬಿ ಮೇಲಿಂದ ಹೂವಿನ ಮಳೆ ಸುರಿಸಿ ಅಭಿಮಾನ ವ್ಯಕ್ತಪಡಿಸಿದರು.

ಬಳಿಕ ಇಂಡುವಾಳುವಿನಲ್ಲಿ ಶ್ರೀರಂಗಪಟ್ಟಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಚ್ಚಿದಾನಂದ ಬೆಂಬಲಿಗರು ಸುಮಾರು ಮೂರುವರೆ ಕ್ವಿಂಟಾಲ್ ತೂಕದ ಸೇಬು, ಗುಲಾಬಿ ಮಿಶ್ರಿತ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ ಅಭಿನಂದಿಸಿದರು. ಈ ವೇಳೆ ಒಂದು ಸೇಬು ಕಿತ್ತು ತಿಂದು ಅಭಿಮಾನಿಗಳಿಗೆ ಧನ್ಯವಾದವನ್ನು ಡಿಕೆಶಿ ಅರ್ಪಿಸಿದರು.

ಇದಾದ ಬಳಿಕ ಹಾರವನ್ನು ಕ್ರೇನ್ ಮೂಲಕ ಕೆಳಗಿಳಿಸುತ್ತಿದ್ದಂತೆಯೇ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೈ ಕಾರ್ಯಕರ್ತರು ಸೇಬಿನ ಹಣ್ಣನ್ನು ಪಡೆಯಲು ತಾಮುಂದು ನಾಮುಂದು ಎಂದು ಮುಗಿಬಿದ್ದು ಕಿತ್ತು ತಿಂದರು. ಇದರಿಂದಾಗಿ ಕೆಲಕಾಲ ತಳ್ಳಾಟ ನೂಕಾಟ ಕಂಡು ಬಂದಿತು.

ಸದ್ಯ ಶ್ರೀರಂಗಪಟ್ಟಣವನ್ನು ಜೆಡಿಎಸ್ ಶಾಸಕ ಬಂಡಿಸಿದ್ದೇಗೌಡ ಪ್ರತಿನಿಧಿಸುತ್ತಿದ್ದಾರೆ. ಇವರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ. ಇದರಿಂದ ಇಲ್ಲಿ ಕಾಂಗ್ರೆಸ್ ನ ಸಚ್ಚಿದಾನಂದ ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ಅವರ ಜತೆ ಮಾತನಾಡಲು ಇಂದು ಡಿಕೆ ಶಿವಕುಮಾರ್ ಆಗಮಿಸಿದ್ದರು. ಈ ಸಂದರ್ಭ ಡಿ.ಕೆ. ಶಿವಕುಮಾರ್ ಮುಂದೆ ಸಚ್ಚಿದಾನಂದ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.












Click it and Unblock the Notifications