ಮುಂಗಾರು ಮಳೆಗೂ ಮುನ್ನವೇ ಎಚ್ಚೆತ್ತ GBA: ನಿಮ್ಮ ಆವರಣದಲ್ಲಿರುವ ಅಪಾಯಕಾರಿ ಮರಗಳ ತೆರವಿಗೆ ಅರ್ಜಿ ಸಲ್ಲಿಸಿ ಸೂಚನೆ
ಬೆಂಗಳೂರು: ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕರಿಗೆ ಪ್ರಮುಖ ಸೂಚನೆಯೊಂದನ್ನು ನೀಡಿದೆ. ನಗರದಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಗೆ ಮರಗಳು ಮತ್ತು ರೆಂಬೆ-ಕೊಂಬೆಗಳು ಉರುಳಿಬಿದ್ದು ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ನಾಗರಿಕರು ತಮ್ಮ ಸ್ವಂತ ಜಾಗ ಅಥವಾ ಸುತ್ತಮುತ್ತ ಇರುವ ದುರ್ಬಲ ಹಾಗೂ ಅಪಾಯಕಾರಿ ಮರಗಳ ಸ್ಥಿತಿಯನ್ನು ಪರಿಶೀಲಿಸುವಂತೆ ಮತ್ತು ಅವುಗಳ ತೆರವಿಗೆ ಕೂಡಲೇ ಅರ್ಜಿ ಸಲ್ಲಿಸುವಂತೆ ಜಿಬಿಎ ಆಸ್ತಿ ಮಾಲೀಕರನ್ನು ಒತ್ತಾಯಿಸಿದೆ.
ಮಳೆಗಾಲದಲ್ಲಿ ಮರಗಳು ಧರೆಗುರುಳಿ ಪ್ರಾಣಹಾನಿ ಹಾಗೂ ವಾಹನಗಳು, ಮನೆಗಳಂತಹ ಆಸ್ತಿಪಾಸ್ತಿಗೆ ಹಾನಿಯಾಗುವ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯ. ಇದನ್ನು ತಡೆಗಟ್ಟಲು ಈ ಬಾರಿ ಜಿಬಿಎ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಜಿಬಿಎ, "ನಿಮ್ಮ ಆವರಣದಲ್ಲಿರುವ, ಮಾನವ ಜೀವ ಮತ್ತು ಆಸ್ತಿಗೆ ಅಪಾಯವನ್ನು ಉಂಟುಮಾಡುವ ಅಪಾಯಕಾರಿ ಮರಗಳು ಮತ್ತು ಒಣಗಿದ ರೆಂಬೆಗಳನ್ನು ನಾಗರಿಕರು ಕೂಡಲೇ ಪರಿಶೀಲಿಸಬೇಕು.

ಒಂದು ವೇಳೆ ಅಂತಹ ಮರಗಳಿದ್ದರೆ, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ, 1976ರ ಸೆಕ್ಷನ್ 8ರ ಅಡಿಯಲ್ಲಿ ಒದಗಿಸಲಾದ ಅಗತ್ಯ ಕ್ರಮಕ್ಕಾಗಿ ಮರ ಕಡಿಯುವ ಅರ್ಜಿಯನ್ನು ಟ್ರೀ ಆಫೀಸರ್ ಮತ್ತು ಸಂಬಂಧಪಟ್ಟ ಸಹಾಯಕ ಅಧಿಕಾರಿಗಳಿಗೆ ಸಲ್ಲಿಸಲು ಈ ಮೂಲಕ ನಿರ್ದೇಶಿಸಲಾಗಿದೆ," ಎಂದು ಸ್ಪಷ್ಟಪಡಿಸಿದೆ.
ಮಾಲೀಕರೇ ಸಂಪೂರ್ಣ ಹೊಣೆ
ತಮ್ಮ ಆಸ್ತಿಯ ವ್ಯಾಪ್ತಿಯಲ್ಲಿರುವ ಅಥವಾ ಕಾಂಪೌಂಡ್ ಒಳಗೆ ಇರುವ ಅಪಾಯಕಾರಿ ಮರಗಳು, ಒಣಗಿರುವ ಅಥವಾ ವಾಲಿರುವ ಕೊಂಬೆಗಳನ್ನು ಕತ್ತರಿಸುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಆಸ್ತಿ ಮಾಲೀಕರ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ನೋಟಿಸ್ನಲ್ಲಿ ಕಟ್ಟುನಿಟ್ಟಾಗಿ ಉಲ್ಲೇಖಿಸಲಾಗಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿ, ಖಾಸಗಿ ಜಾಗದಲ್ಲಿರುವ ಮರ ಅಥವಾ ಕೊಂಬೆ ಬಿದ್ದು ಸಾರ್ವಜನಿಕರಿಗೆ ಅಥವಾ ಪಕ್ಕದ ಮನೆಯವರಿಗೆ ಅನಾಹುತ ಸಂಭವಿಸಿದರೆ, ಅದಕ್ಕೆ ನೇರವಾಗಿ ಆಸ್ತಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ಪ್ರಾಧಿಕಾರ ರವಾನಿಸಿದೆ.
ಅರ್ಜಿ ಸಲ್ಲಿಕೆ ಮತ್ತು ಅನುಮತಿ ಪ್ರಕ್ರಿಯೆ
ಸಾರ್ವಜನಿಕರು ತಮ್ಮ ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆ, ಖಾಲಿ ನಿವೇಶನ ಅಥವಾ ಯಾವುದೇ ಖಾಸಗಿ ಜಾಗದಲ್ಲಿ ಅಪಾಯಕಾರಿಯಾಗಿ ಬೆಳೆದಿರುವ ಮರಗಳಿದ್ದರೆ, ಅವುಗಳ ತೆರವಿಗೆ ನೇರವಾಗಿ ಅಥವಾ ಆನ್ಲೈನ್ ಮುಖಾಂತರ ಜಿಬಿಎ ಅರಣ್ಯ ವಿಭಾಗದ ಟ್ರೀ ಆಫೀಸರ್ಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಮರದ ನಿಖರವಾದ ಫೋಟೋ, ಸ್ಥಳದ ವಿವರ ಮತ್ತು ಅಪಾಯದ ಸ್ವರೂಪವನ್ನು ವಿವರಿಸಬೇಕು. ಅರ್ಜಿ ಸಲ್ಲಿಕೆಯಾದ ಬಳಿಕ, ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿ ಮರ ಕಡಿಯಲು ಅಥವಾ ಕೊಂಬೆಗಳನ್ನು ಕತ್ತರಿಸಲು ಅಧಿಕೃತ ಅನುಮತಿ ನೀಡುತ್ತಾರೆ. ಅನಧಿಕೃತವಾಗಿ ಅಥವಾ ಅಧಿಕಾರಿಗಳ ಗಮನಕ್ಕೆ ತರದೆ ಮರ ಕಡಿಯುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಕಡ್ಡಾಯವಾಗಿ ಕಾನೂನುಬದ್ಧ ಅನುಮತಿ ಪಡೆಯುವುದು ಅತ್ಯಗತ್ಯ.












Click it and Unblock the Notifications