ದಕ್ಷಿಣ ಭಾರತದ ಮೊದಲ ಬುಲೆಟ್ ರೈಲು ಕನಸು ಶೀಘ್ರದಲ್ಲೇ ನನಸು: ಕೇವಲ 2 ಗಂಟೆಯಲ್ಲಿ ಹೈದರಾಬಾದ್, 75 ನಿಮಿಷದಲ್ಲಿ ಚೆನ್ನೈ ಪ್ರಯಾಣ

ಬೆಂಗಳೂರು: ದಕ್ಷಿಣ ಭಾರತದ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ. ದಕ್ಷಿಣ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದಾಗಿ ಈ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ತಗ್ಗಲಿದೆ.

ಈ ಎರಡು ಹೈ-ಸ್ಪೀಡ್ ರೈಲು ಯೋಜನೆಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಾದ್ಯಂತ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಕೈಗಾರಿಕಾ ಬೆಳವಣಿಗೆ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಲಿವೆ. ಪ್ರಸ್ತಾವಿತ ಬುಲೆಟ್ ರೈಲುಗಳು ಗಂಟೆಗೆ 320 ರಿಂದ 350 ಕಿ.ಮೀ ವೇಗದಲ್ಲಿ ಚಲಿಸಲಿವೆ ಎಂದು ವರದಿಗಳು ತಿಳಿಸಿವೆ.

Bengaluru To Hyderabad

ಹೈದರಾಬಾದ್-ಬೆಂಗಳೂರು ಬುಲೆಟ್ ರೈಲು ಕಾರಿಡಾರ್

ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಬೆಸೆಯುವ ಈ ಕಾರಿಡಾರ್ ಒಟ್ಟು 607 ಕಿ.ಮೀ ಉದ್ದವಿರಲಿದೆ. ಇದರಲ್ಲಿ ಸುಮಾರು 101 ಕಿ.ಮೀ ಮಾರ್ಗವು ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಪ್ರಸ್ತುತ ನೈರುತ್ಯ ರೈಲ್ವೆ ವಲಯದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸಲು ಸುಮಾರು 8 ರಿಂದ 12 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ಈ ಬುಲೆಟ್ ರೈಲು ಕಾರಿಡಾರ್ ಕಾರ್ಯಾರಂಭಗೊಂಡರೆ, ಪ್ರಯಾಣದ ಸಮಯ ಕೇವಲ 2 ಗಂಟೆ 10 ನಿಮಿಷಗಳಿಗೆ ಇಳಿಕೆಯಾಗಲಿದೆ.

ಈ ಮಾರ್ಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಆಲಿಪುರ, ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತು ಹೊಸಕೋಟೆ ತಾಲೂಕಿನ ಕೋಡಿಹಳ್ಳಿಯಲ್ಲಿ ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ರೈಲುಗಳ ತಡೆರಹಿತ ಅತಿವೇಗದ ಕಾರ್ಯಾಚರಣೆಗಾಗಿ ಸಂಪೂರ್ಣ ಎಲಿವೇಟೆಡ್ ಮಾರ್ಗವನ್ನು ನಿರ್ಮಿಸಲು ಅಧಿಕಾರಿಗಳು ಯೋಜಿಸಿದ್ದಾರೆ.

ಬೆಂಗಳೂರು-ಚೆನ್ನೈ-ಮೈಸೂರು ಹೈ-ಸ್ಪೀಡ್ ಕಾರಿಡಾರ್

ಎರಡನೇ ಕಾರಿಡಾರ್ ಮೈಸೂರು, ಬೆಂಗಳೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸಲಿದ್ದು, ಇದು 435 ರಿಂದ 463 ಕಿ.ಮೀ ಉದ್ದವಿರಲಿದೆ. ಇದರಲ್ಲಿ ಚೆನ್ನೈ-ಬೆಂಗಳೂರು ವಿಭಾಗವು ಸುಮಾರು 306 ಕಿ.ಮೀ ನಷ್ಟಿರಲಿದೆ. ಸದ್ಯ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣಕ್ಕೆ ಸರಿಸುಮಾರು 5 ರಿಂದ 7 ಗಂಟೆಗಳು ಬೇಕಾಗುತ್ತದೆ. ಆದರೆ, ಹೈ-ಸ್ಪೀಡ್ ರೈಲು ವ್ಯವಸ್ಥೆಯು ಈ ದೂರವನ್ನು ಕೇವಲ 1 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲು ಅನುವು ಮಾಡಿಕೊಡುತ್ತದೆ. ಕೋಲಾರ ಜಿಲ್ಲೆಯ ಕೆಜಿಎಫ್, ಹೊಸಕೋಟೆಯ ಕೋಡಿಹಳ್ಳಿ, ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಬೈಯಪ್ಪನಹಳ್ಳಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ.

ಹೊಸಕೋಟೆಯ ಕೋಡಿಹಳ್ಳಿಯು ಈ ಎರಡೂ ಯೋಜನೆಗಳಿಗೆ ಪ್ರಮುಖ ಇಂಟರ್‌ಚೇಂಜ್ ಕೇಂದ್ರವಾಗುವ ನಿರೀಕ್ಷೆಯಿದೆ, ಏಕೆಂದರೆ ಹೈದರಾಬಾದ್ ಮತ್ತು ಚೆನ್ನೈ ಬುಲೆಟ್ ರೈಲು ಮಾರ್ಗಗಳು ಇಲ್ಲಿಯೇ ಸಂಧಿಸಲಿವೆ. ಇಲ್ಲಿ ಬೃಹತ್ ಡಿಪೋ ಮತ್ತು ನಿರ್ವಹಣಾ ಘಟಕವನ್ನು ಸ್ಥಾಪಿಸಲೂ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಆರಂಭ

ಈ ಎರಡೂ ಬೃಹತ್ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗಳನ್ನು ನೋಡಿಕೊಳ್ಳಲು ಕರ್ನಾಟಕ ಸರ್ಕಾರವು ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಪ್ರಾಥಮಿಕ ಯೋಜನೆಗಳ ಪ್ರಕಾರ, ಈ ಎರಡು ಹೈ-ಸ್ಪೀಡ್ ಕಾರಿಡಾರ್‌ಗಳ ಅಭಿವೃದ್ಧಿಗಾಗಿ ಕರ್ನಾಟಕದಾದ್ಯಂತ ಸುಮಾರು 1,757 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಪ್ರಯಾಣಿಕರಿಗೆ ತಡೆರಹಿತ ಸಂಪರ್ಕ ಒದಗಿಸುವ ಉದ್ದೇಶದಿಂದ ಬೈಯಪ್ಪನಹಳ್ಳಿ ನಿಲ್ದಾಣವನ್ನು ಬೆಂಗಳೂರಿನ ನಮ್ಮ ಮೆಟ್ರೋ ಮತ್ತು ಉಪನಗರ ರೈಲು (Suburban Rail) ವ್ಯವಸ್ಥೆಗಳೊಂದಿಗೆ ಸಂಯೋಜಿಸಲು ಯೋಜಿಸಲಾಗಿದೆ. ಒಟ್ಟಿನಲ್ಲಿ ಈ ಯೋಜನೆಗಳು ಸಾಕಾರಗೊಂಡರೆ ದಕ್ಷಿಣ ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗುವುದು ಖಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+