ಹಾರಂಗಿಯಲ್ಲಿ ಬಲೆಗೆ ಬಿತ್ತು ಅಪರೂಪದ ಈ ಬೃಹತ್ ಮೀನು
ಮಡಿಕೇರಿ, ಏಪ್ರಿಲ್ 30: ಕೊರೊನಾ ಲಾಕ್ಡೌನ್ ಮಧ್ಯೆ ಸಮಯ ಕಳೆಯಲು ಹಾರಂಗಿ ಹಿನ್ನೀರಿಗೆ ಗಾಳ ಹಾಕಲು ತೆರಳಿದ್ದ ಯುವಕರ ಗುಂಪಿಗೆ ಬರೋಬ್ಬರಿ 38 ಕೆ.ಜಿ ತೂಕದ ಮೀನೊಂದು ಸಿಕ್ಕಿದೆ. ಈ ಮೀನು ಮೇಲ್ನೋಟಕ್ಕೆ ಇಲ್ಲಿನ ಹೊಳೆ, ಕೆರೆಗಳಲ್ಲಿ ಬೆಳೆಸಲಾಗುವ ಕಾಟ್ಲಾ ಜಾತಿಯ ಮೀನು ಎಂದು ಗುರುತಿಸಲಾಗಿತ್ತು. ಅದರೆ ಗಾಳಕ್ಕೆ ಸಿಕ್ಕಿರುವ ಮೀನು ಕಾಟ್ಲಾ ಅಲ್ಲ. ಬದಲಿಗೆ ಅಪರೂಪದ, ಅಳಿವಿನಂಚಿನಲ್ಲಿರುವ ಮಹಶೀರ್ ಮೀನು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಸ್ಕೂಬಾ ಡೈವ್ ವೇಳೆ ಪತ್ತೆಯಾದ ಬೃಹತ್ ಹಂಪ್ ಬ್ಯಾಕ್ ತಿಮಿಂಗಲ
ಬುಧವಾರ ನಾಕೂರಿನ ಹಿನ್ನೀರಿನಲ್ಲಿ ಸಾಂಪ್ರದಾಯಿಕ ಶೈಲಿಯ ಗಾಳವನ್ನು ಬಿಟ್ಟು ಕುಳಿತಿದ್ದ ತಂಡದ ಪ್ರವೀಶ್ ಎಂಬುವರಿಗೆ, ಗಾಳವನ್ನು ನೀರೊಳಗೆ ಯಾರೋ ಬಲವಾಗಿ ಎಳೆದಂತಾಗಿದೆ. ಸ್ನೇಹಿತರ ಸಹಾಯದಿಂದ ಗಾಳವನ್ನು ನದಿಯಿಂದ ಮೇಲೆ ತರುತ್ತಿದ್ದಂತೆಯೇ ಬೃಹತ್ ಗಾತ್ರದ ಮೀನು ನೋಡಿ ಶಾಕ್ ಆಗಿದ್ದಾರೆ. ಈ ಬೃಹತ್ ಗಾತ್ರದ ಮೀನಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ದರ್ಶನ್ ಅವರು, "ಇದು ಅಳಿವಿನಂಚಿನಲ್ಲಿರುವ ಮಹಶೀರ್ ಮೀನಾಗಿದ್ದು, ಇದನ್ನು ಹಿಡಿಯುವುದು ಅಪರಾಧ" ಎಂದು ಹೇಳಿದ್ದಾರೆ. ಸ್ಥಳೀಯ ಕಾಟ್ಲಾ ಮೀನು ಹೆಚ್ಚೆಂದರೆ 25 ಕೆ.ಜಿವರೆಗೆ ಬೆಳೆಯಬಲ್ಲುದು. ಆದರೆ ಮೇಲ್ನೋಟಕ್ಕೆ ಕಾಟ್ಲಾದಂತೆಯೇ ಕಾಣುವ ಮಹಶೀರ್ ಮೀನು 60 ಕೆ.ಜಿ.ಗೂ ಹೆಚ್ಚು ಬೆಳೆಯುತ್ತದೆ ಎಂದರು. ಹಾರಂಗಿಯಲ್ಲಿ ಮಹಶೀರ್ ಮೀನು ತಳಿ ಸಂತಾನೋತ್ಪತ್ತಿ ಕೇಂದ್ರವಿದ್ದು, ಇಲ್ಲಿ ವಾರ್ಷಿಕವಾಗಿ 30-35 ಸಾವಿರ ಮೀನು ಮರಿಗಳನ್ನು ರಾಜ್ಯದ ವಿವಿಧ ಹೊಳೆ, ನದಿಗಳಿಗೆ ಬಿಡಲಾಗುತ್ತಿದೆ ಎಂದರು.
ಕಾವೇರಿ ನದಿಯ 20 ಕಿ.ಮೀ ಪ್ರದೇಶವನ್ನು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯವರಿಗೆ ಮೀನು ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರ ಗುತ್ತಿಗೆ ನೀಡಿದೆ. ಸೊಸೈಟಿಯವರು ಆಸಕ್ತರಿಗೆ ಗೇಮ್ ಫಿಶಿಂಗ್ ಅವಕಾಶ ನೀಡಿ, ಹಿಡಿದ ಮೀನಿನೊಂದಿಗೆ ಫೋಟೊ ತೆಗೆಸಿಕೊಂಡ ನಂತರ 30 ಸೆಕೆಂಡುಗಳಲ್ಲಿ ಪುನಃ ನದಿಗೆ ಬಿಡಬೇಕಿದೆ ಎಂದೂ ತಿಳಿಸಿದರು. ಮಹಶೀರ್ ಮೀನು ಹಿಡಿಯುವುದು ಅತ್ಯಂತ ಕಷ್ಟ ಎಂದ ಅವರು, ನಿನ್ನೆ ಸಿಕ್ಕ ಮೀನು ಅಪ್ಪಿತಪ್ಪಿ ಗಾಣಕ್ಕೆ ಸಿಕ್ಕಿದೆ ಎಂದರು. ಅಳಿವಿನಂಚಿನಲ್ಲಿರುವ ಈ ಮೀನಿನ ಸಂತಾನಾಭಿವೃದ್ಧಿಗೆ ಸರ್ಕಾರ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ.