ಕೊಡಗಿನಲ್ಲಿ ಕೊಂಚ ಬಿಡುವು ನೀಡಿದ ಮಳೆರಾಯ, ಸದ್ಯ ಪ್ರವಾಸಿಗರಿಗೆ ತಡೆ
ಮೈಸೂರು, ಆಗಸ್ಟ್.20: ಕೊಡಗು ಜಿಲ್ಲೆಯಲ್ಲಿ ಮಳೆ ಕೊಂಚ ಬಿಡುವು ನೀಡಿದ್ದು, ಸದ್ಯ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ಗಾಳಿ ರಭಸದಿಂದ ಬೀಸುತ್ತಿದ್ದು, ಬೆಟ್ಟ ಗುಡ್ಡಗಳು ಕುಸಿದು ಬೀಳುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತ್ರಸ್ಥರು ಶಾಲಾ ಕಾಲೇಜುಗಳಲ್ಲಿ ಆಶ್ರಯ ಪಡೆದಿರುವ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ (ಆಗಸ್ಟ್.20, 21) ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎಂದಿನಂತೆ ಮಡಿಕೇರಿ, ಕುಶಾಲನಗರಕ್ಕೆ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಪ್ರವಾಸಿಗರು ಸದ್ಯಕ್ಕೆ ಕೊಡಗು ಜಿಲ್ಲೆಗೆ ಬರದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪರಿಹಾರ ಕಾರ್ಯ ಭರದಿಂದ ಸಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಸಂತ್ರಸ್ಥರ ರಕ್ಷಣಾ ಕಾರ್ಯ ಸಾಗಿದೆ.

ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ ಆಸುಪಾಸು ಇದುವರೆಗೂ ಮಳೆಯ ಅವಾಂತರದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಸಂಚಾರ ಕೂಡ ಬಂದ್ ಆಗಿದೆ. ಕೊಡಗಿನಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಜನ ನಿರಾಶ್ರಿತರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಭಾರಿ ಮಳೆಯಾಗಿದ್ದು, ಶನಿವಾರದಿಂದ ಕೊಂಚ ಇಳಿಕೆಯಾಗಿದೆ.











Click it and Unblock the Notifications