ಮಾಜಿ ಸಚಿವ, ಜೆಡಿಎಸ್ ನ ಜೀವಿಜಯ ‘ಕೈ’ ಹಿಡಿಯೋದು ವದಂತಿಯಂತೆ!
ಮಡಿಕೇರಿ, ಜುಲೈ 18 : ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಪೋಹಗಳಿಗೆ ಸ್ವತಃ ಜೀವಿಜಯ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, "ತಾನು ಕಾಂಗ್ರೆಸ್ ಸೇರುವ ಮಾತೇ ಇಲ್ಲ. ಅಂತಹ ಯೋಚನೆ ಇಲ್ಲವೇ ಇಲ್ಲ. ದುರುದ್ದೇಶದಿಂದ ಕೆಲವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನನಗೆ ಆಪ್ತರಿದ್ದಾರೆ. ಅಂದ ಮಾತ್ರಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ತಯಾರಿಲ್ಲ ಎಂದು ಹೇಳಿ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಆದರೂ ಬೆಂಕಿಯಿಲ್ಲದೆ ಹೊಗೆಯಾಡುತ್ತಾ ಎಂಬ ಸಂಶಯವೂ ಇಲ್ಲಿನ ಜನರನ್ನು ಕಾಡುತ್ತಿದೆ. ಕೊಡಗಿನಲ್ಲಿ ಸದ್ಯ ಇರುವ ನಾಯಕರಲ್ಲಿ ಪ್ರಭಾವಿ ಎಂದರೆ ಮಾಜಿ ಸಚಿವ ಬಿ.ಎ.ಜೀವಿಜಯ. ಇವರು ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರೂ ಪಕ್ಷ ಸಂಘಟನೆಯತ್ತ ಯಾವುದೇ ಗಮನಹರಿಸಿದಂತೆ ಕಾಣುತ್ತಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು.
ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಒಂದಷ್ಟು ಮಂದಿ ನಮ್ಮೊಂದಿಗಿದ್ದಾರೆ ಎಂಬುದನ್ನು ತೋರಿಸುವ ಅಗತ್ಯತೆ ಇರುವುದರಿಂದಾಗಿ ತನ್ನಪಾಡಿಗೆ ಎಂಬಂತಿದ್ದ ಬಿ.ಎ.ಜೀವಿಜಯ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯನ್ನು ಹರಡಲಾಗಿದೆ.
ಕಾಂಗ್ರೆಸ್ನ ಮುಖಂಡ ನಾಪಂಡ ಮುತ್ತಪ್ಪ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಜೆಡಿಎಸ್ ಮುಖಂಡ ಜೀವಿಜಯ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎಂದು ತಿಳಿದುಬಂದಿರುವುದಾಗಿ ಬರೆದುಕೊಂಡಿದ್ದರು.
ಇದಾದ ನಂತರ ಅವರ ಸಹೋದರ, ಐಎನ್ ಟಿಯುಸಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ನಾಪಂಡ ಮುದ್ದಪ್ಪ ಅವರು ಜೀವಿಜಯ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡರೂ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾಪಂಡ ಮುತ್ತಪ್ಪನವರೇ ಕಾಂಗ್ರೆಸ್ ಎಂಎಲ್ ಎ ಅಭ್ಯರ್ಥಿ ಎಂದು ಪೋಸ್ಟ್ ಮಾಡಿದ್ದರು.
ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಯಾರು ಯಾವ ಪಕ್ಷದ ಬಾಗಿಲು ತಟ್ಟಲಿದ್ದಾರೆಯೋ ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲವಾದರೂ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ.












Click it and Unblock the Notifications