ಮಡಿಕೇರಿಯಲ್ಲಿ ಇನ್ನೂ 9 ಜನರ ಸುಳಿವು ಸಿಕ್ಕಿಲ್ಲ
ಮಡಿಕೇರಿ, ಆಗಸ್ಟ್ 24 : ಮಡಿಕೇರಿಯಲ್ಲಿ ಬೀಡು ಬಿಟ್ಟಿರುವ ರಕ್ಷಣಾ ಪಡೆಗಳು ಇನ್ನೂ ಕೆಲವು ದಿನ ಅಲ್ಲಿಯೇ ಉಳಿಯಬೇಕಾಗಬಹುದು. ಕೊಡಗಿನ ಮಳೆ, ಗುಡ್ಡ ಕುಸಿತದಲ್ಲಿ ಸಿಲುಕಿರುವ ಇನ್ನೂ 9 ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿಗಳು ಎಂ.ಸತೀಶ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು 9 ಎಫ್ಐಆರ್ಗಳು ದಾಖಲಾಗಿವೆ. ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಹೇಳಿದ್ದಾರೆ.
ಯೋಧರು, ಎನ್ಡಿಆರ್ಎಫ್, ನೌಕಾಪಡೆ, ಗರುಡಾ ಪಡೆಗಳು ಜಿಲ್ಲೆಯ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಬುಧವಾರ ಮೂರು ಶವಗಳನ್ನು, ಗುರುವಾರ ಒಂದು ಶವವನ್ನು ಪತ್ತೆ ಹಚ್ಚಲಾಗಿದೆ.

ಮಡಿಕೇರಿ ಕ್ಷೇತ್ರದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ 37 ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.
ಸಂತ್ರಸ್ತರ ಸಹಾಯಕ್ಕಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರದಿದ್ದ ಸಹಾಯವಾಣಿಯನ್ನು ಸ್ಥಗಿತಗೊಳಿಸಲಾಗಿದೆ. ಒಟ್ಟು 84 ಕರೆಗಳನ್ನು ಸ್ವೀಕರಿಸಲಾಗಿದ್ದು, ಎಲ್ಲವೂ ಮನೆ, ಗುಡ್ಡ ಕುಸಿತಕ್ಕೆ ಸಂಬಂಧಿಸಿದವುಗಳು.
ರಕ್ಷಣಾ ಪಡೆಗಳ ತಂಡ ಕೆಲವು ದಿನಗಳ ಕಾಲ ಕೊಡಗಿನಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಿವೆ. ಕೊಡಗಿನಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಜಿಲ್ಲಾಡಳಿತದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ.











Click it and Unblock the Notifications