ಕೊಡಗು; ಜನರ ನಿದ್ದೆಗೆಡಿಸಿದ್ದ ಎರಡು ಹುಲಿಗಳು ಸೆರೆ
ಮೈಸೂರು ದಸರಾ ಆನೆ 'ಅಭಿಮನ್ಯು' ನೇತೃತ್ವದಲ್ಲಿ ಮೂರು ಸಾಕಾನೆಗಳನ್ನು ಬಳಸಿಕೊಂಡು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಕಾರ್ಯಾಚರಣೆ ನಡೆಸಿ ಎರಡು ಹುಲಿಗಳನ್ನು ಸೆರೆ ಹಿಡಿಯಲಾಗಿದೆ.
ಮಡಿಕೇರಿ, ಫೆಬ್ರವರಿ 14; ಕೊಡಗು ಜಿಲ್ಲೆಯಲ್ಲಿ ಜನರ ಆತಂಕ ದೂರವಾಗಿದೆ. ಪೊನ್ನಂಪೇಟೆ ತಾಲೂಕಿನ ನಾಣಚ್ಚಿಗೇಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆಯಿಂದ ಬೆಳಗ್ಗೆಯಿಂದ ಮೈಸೂರು ದಸರಾ ಆನೆ 'ಅಭಿಮನ್ಯು' ನೇತೃತ್ವದಲ್ಲಿ ಮೂರು ಸಾಕಾನೆಗಳನ್ನು ಬಳಸಿಕೊಂಡು ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಸಂಜೆಯ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅರಿವಳಿಕೆ ಚುಚ್ಚುಮದ್ದು ನೀಡಿ ಎರಡು ಹುಲಿಗಳನ್ನು ಸೆರೆ ಹಿಡಿದಿದ್ದಾರೆ. ಎರಡೂ ಸಹ ಹೆಣ್ಣು ಹುಲಿಗಳು ಎಂದು ತಿಳಿದುಬಂದಿದೆ. ಹುಲಿ ಸೆರೆ ಸಿಕ್ಕ ಬಳಿಕ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಫೆಬ್ರವರಿ 12 ರಂದು ಕೇವಲ 24 ಗಂಟೆಗಳಲ್ಲಿ ಇಬ್ಬರು ಹುಲಿ ದಾಳಿಗೆ ಬಲಿಯಾಗಿದ್ದರು. ಇದರಿಂದಾಗಿ ಜನರು ಆತಂಕಗೊಂಡಿದ್ದರು. ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇಬ್ಬರ ಮೇಲೆ ಹುಲಿ ದಾಳಿ; ಫೆಬ್ರವರಿ 12ರಂದು ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ 12 ವರ್ಷದ ಚೇತನ್ ಮೇಲೆ ಹುಲಿ ದಾಳಿ ಮಾಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ನಾಲ್ಕೇರಿ ಗ್ರಾಮದ ಬಳಿ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ ರಾಜು (75) ಮೇಲೆ ಹುಲಿ ದಾಳಿ ಮಾಡಿತ್ತು. ಈ ಸಮಯದಲ್ಲಿ ರಾಜು ಪುತ್ರನಿಗೂ ಗಾಯವಾಗಿತ್ತು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇಬ್ಬರ ಮೇಲೆ ದಾಳಿ ಮಾಡಿದ ಬಳಿಕ ಜನರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನರಭಕ್ಷಕ ಹುಲಿಯನ್ನು ಕೊಲ್ಲುವಂತೆ ಆಗ್ರಹಿಸಿದ್ದರು. ಕರ್ನಾಟಕ ಸರ್ಕಾರ ಹುಲಿ ಸೆರೆಹಿಡಿಯುವಂತೆ ಆದೇಶ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದಿದ್ದರು.
ಜನರ ಪ್ರತಿಭಟನೆಯ ನಡುವೆಯೇ ಸರ್ಕಾರ ಹುಲಿ ದಾಳಿಗೆ ಬಲಿಯಾದ ರಾಜು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಪರಿಹಾರದ ಚೆಕ್ ಸಹ ತಲುಪಿಸಿತ್ತು.












Click it and Unblock the Notifications