ಕೊಡಗು; ತಿಂಗಳೊಳಗೆ ಬಾಕಿ ಇರುವ ಮನೆಗಳ ಹಸ್ತಾಂತರಕ್ಕೆ ಸಿಎಂ ಸೂಚನೆ
ಮಡಿಕೇರಿ, ಜುಲೈ12: ಎರಡು ವರ್ಷಗಳ ಹಿಂದೆ ಸುರಿದ ಧಾರಕಾರ ಮಹಾಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿದ್ದವು . ಈ ವೇಲೆ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ವಿತರಿಸಲು ಬಾಕಿ ಇರುವ ಮನೆಗಳನ್ನು ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಹಸ್ತಾಂತರ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಯಿಂದ ಉಂಟಾದ ಅನಾಹುತದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, "ಇನ್ಫೋಸಿಸ್ ಮನೆಯನ್ನು ಕಳೆದುಕೊಂಡ ಕುಟುಂಬಕ್ಕಾಗಿ ನಿರ್ಮಿಸುತ್ತಿರುವ 195 ಮನೆಗಳನ್ನೂ ಸಹ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗುವುದು" ಎಂದು ತಿಳಿಸಿದರು.
"ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ತಕ್ಷಣ ದುರಸ್ತಿ ಮಾಡುವುದು, ಎರಡನೇ ಹಂತದಲ್ಲಿ ಹಾಳಾಗಿರುವ ರಸ್ತೆಗಳನ್ನು ಪುನರ್ ನಿರ್ಮಿಸಲಾಗುವುದು. 2018-19 ರಲ್ಲಿ ನಿರ್ಮಿಸಬೇಕಿದ್ದ ಮನೆಗಳ ಪೈಕಿ 835 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದರಲ್ಲಿ ಕೆಲವು ಮನೆಗಳು ಮಾತ್ರ ಬಾಕಿ ಇದ್ದು, ಬಹುತೇಕ ಎಲ್ಲಾ ಮನೆಗಳಲ್ಲಿಯೂ ಜನ ವಾಸಿಸುತ್ತಿದ್ದಾರೆ" ಎಂದು ಹೇಳಿದರು.

ಜೆಸ್ಕಾಂ ಅಧಿಕಾರಿಗಳ ಜವಾಬ್ದಾರಿ
ಹಾನಿಯಾಗಿರುವ ವಿದ್ಯುತ್ ಕಂಬಗಳ ಪಟ್ಟಿ ಮಾಡಿ, ಟ್ರಾನ್ಸ್ ಫಾರ್ಮರ್ ಹಾಗೂ ಕಂಬಗಳನ್ನು ಪುನ: ಸ್ಥಾಪಿಸಲು ವ್ಯವಸ್ಥೆ ಮಾಡಿ ವಿದ್ಯುತ್ ಸಂಪರ್ಕ ನೀಡುವುದು ಇಲ್ಲಿನ ಜೆಸ್ಕಾಂ ಅಧಿಕಾರಿಗಳ ಜವಾಬ್ದಾರಿ. ಎಂಡಿ ಖುದ್ದಾಗಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಲಾಗಿದೆ. ಎನ್ಡಿಆರ್ಎಫ್ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಈ ಕೆಲಸದ ಮೇಲ್ವಿಚಾರಣೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಶಾಶ್ವತ ಪರಿಹಾರಕ್ಕೆ ಕ್ರಮ
ಕೊಡಗು ಜಿಲ್ಲೆಯ ಸೆಸ್ಮಿಕ್ ವಲಯದಲ್ಲಿ ಪದೇ ಪದೇ ಭೂ ಕುಸಿತ ಹಾಗೂ ಭೂ ಕಂಪದ ಸೂಚನೆಗಳು ಬರುತ್ತಿವೆ. ಸೆಸ್ಮಿಕ್ ಅಧ್ಯಯನ ಮಾಡಲು ರಾಷ್ಟ್ರದ ಪ್ರಮುಖ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ಮುಂದಿನ ವಾರ ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಟೀರಿಯಲ್ ಹಾಗೂ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಬೆಂಗಳೂರು ಹಾಗೂ ಮೈಸೂರು ವಿವಿಗಳ ಜಿಯೋಲಾಜಿಕಲ್ ವಿಭಾಗದವರು ಈ ಬಗ್ಗೆ ಅಧ್ಯಯನ ಕೈಗೊಳ್ಳಲಿದ್ದಾರೆ. ಅದರ ಆಧಾರದ ಮೇಲೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಸೆಸ್ಮಿಕ್ ವಲಯ ಮುಂದುವರೆಯುವಲ್ಲಿ ಜನವಸತಿ ಆಗದಂತೆ ಕ್ರಮ ವಹಿಸಲಾಗುವುದು. ಕೆಲವು ಕಡೆ ಮನೆಗಳಿಗೆ ರೆಟ್ರೋ ಫಿಟ್ಟಿಂಗ್ ಮಾಡಿ ರಕ್ಷಣೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.

ಮುಂದಿನ ಮಳೆಗಾಲಕ್ಕೆ ಅಳವಡಿಕೆ
ಭೂಕುಸಿತವಾಗಿರುವ ಸ್ಥಳಗಳ ಬಗ್ಗೆ ಅಮೃತಾ ವಿಶ್ವವಿದ್ಯಾಲಯದವರು ಅಧ್ಯಯನ ಕೈಗೊಂಡು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಭೂಕುಸಿತವನ್ನು ತಡೆಗಟ್ಟಲು ಹಲವಾರು ತಂತ್ರಜ್ಞಾನವಿದೆ. ರಿವಿಟ್ಟಿಂಗ್, ರೀಟೈನಿಂಗ್ ಗೋಡೆ ಕಟ್ಟುವಂತಹ ತಂತ್ರಜ್ಞಾನವಿದೆ. ಯಾವುದನ್ನು ಬಳಸಬೇಕೆಂದು ಸಲಹೆ ಮಾಡುತ್ತಾರೋ ಅದನ್ನು ಕೂಡಲೇ ಪ್ರಾರಂಭಿಸಿ ಮುಂದಿನ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪೊಲೀಸರ ಕ್ರಮಕ್ಕೆ ಸೂಚನೆ
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಕಾನೂನಿನ ವಿರುದ್ದ ಯಾರೇ ಕೆಲಸವನ್ನು ಮಾಡಿದರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications