ಉತ್ತರ ಪ್ರದೇಶ ಹಿಂಸಾಚಾರ: ಯಾವುದೇ ಸಾಕ್ಷ್ಯಗಳಿಲ್ಲದೆ ಬಂಧನ ಸಾಧ್ಯವಿಲ್ಲ ಎಂದ ಯೋಗಿ
ಲಕ್ನೋ, ಅಕ್ಟೋಬರ್ 09: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕಷ್ಟಿಗಳಿಲ್ಲದೆ ಬಂಧನ ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಭಾನುವಾರ ನಡೆದ ಹಿಂಸಾಚಾರದಲ್ಲಿ 4 ಮಂದಿ ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದರು. ಕಾನೂನಿನ ಮುಂದೆ ಎಲ್ಲರೂ ಸಮಾನರು, ಸುಪ್ರೀಂಕೋರ್ಟ್ ಪ್ರಕಾರ ಸಾಕ್ಷ್ಯವಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಹಾಗೂ ತನಿಖೆ ನಡೆಯುತ್ತಿದೆ. ದೂರು ದಾಖಲಾಗಿದೆ. ತಪ್ಪು ಯಾರದ್ದೇ ಇದ್ದರೂ ಶಿಕ್ಷೆ ನಿಶ್ಚಿತ ಎಂದು ಯೋಗಿ ಹೇಳಿದರು.
ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಹಾಗೂ ಯಾವುದೇ ಒತ್ತಡದಲ್ಲಿ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಹಿಂಸೆಗೆ ಅವಕಾಶವಿಲ್ಲ, ಕಾನೂನಿನಲ್ಲಿ ಪ್ರತಿಯೊಬ್ಬರಿಗೂ ಭದ್ರತೆ ಇದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ, ಕಾರು ಹರಿದು ಎಂಟು ಜನ ಅಸುನೀಗಿರುವ ದುರ್ಘಟನೆ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಳೆದ ಅಕ್ಟೋಬರ್ 3ರಂದು ನಡೆದ ಈ ಘಟನೆ, ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಕಲ್ಪಿಸಿದೆ.
ರೈತರ ಮೇಲೆ ಕಾರು ಹರಿಸಿದ್ದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಎಂಬ ಆರೋಪ ಬಲವಾಗಿದೆ. ಪ್ರತಿಭಟನಾನಿರತ ರೈತರ ಹೇಳಿಕೆಗಳು, ಘಟನೆ ಸಂಬಂಧ ಬಿಡುಗಡೆಯಾಗಿರುವ ವಿಡಿಯೋಗಳು ಆಶಿಶ್ ಮಿಶ್ರಾ ಅವರತ್ತ ಬೊಟ್ಟು ಮಾಡುತ್ತಿವೆ.
ಘಟನೆ ಖಂಡಿಸಿ ಕಾಂಗ್ರೆಸ್ ಸಿಡಿದೆದ್ದಿದೆ. ಆದರೆ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿರುವ ಉತ್ತರ ಪ್ರದೇಶ ಸರ್ಕಾರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ಮತ್ತಷ್ಟು ಸಂಕಟವನ್ನು ಮೈಮೇಲೆ ಎಳೆದುಕೊಂಡಿದೆ. ದುರ್ಘಟನೆಯಲ್ಲಿ ಮೃತಪಟ್ಟ ರೈತರ ಸಂಬಂಧಿಕರು ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ಕಾಂಗ್ರೆಸ್ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ. ಅಲ್ಲದೇ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಸಿದೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇದೇ ಮಾರ್ಗವಾಗಿ ತೆರಳುತ್ತಿದ್ದರು.
ಬಿಜೆಪಿ ನಾಯಕರನ್ನು ಕಂಡ ರೈತರು, ಅವರ ಕಾರನ್ನು ತಡೆದು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಗ ಬಿಜೆಪಿ ನಾಯಕರ ಭದ್ರತಾ ಸಿಬ್ಬಂದಿ ಪ್ರತಿಭಟನಾನಿರತ ರೈತರನ್ನು ಚದುರಿಸಲು ಮುಂದಾದಾಗ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ತಮ್ಮ ಕಾರನ್ನು ರೈತರ ಮೇಲೆ ನುಗ್ಗಿಸಿದರು ಎಂಬ ಆರೋಪ ಕೇಳಿ ಬಂದಿದೆ.
ಈ ದುರ್ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನ ಮೃತಪಟ್ಟಿದ್ದರಿಂದ, ಭುಗಿಲೆದ್ದ ರೈತರು, ಎಸ್ಯುವಿ ಕಾರಿಗೆ ಬೆಂಕಿ ಹಚ್ಚಿದರು. ಬಿಜೆಪಿ ನಾಯಕರನ್ನು ಸ್ಥಳದಿಂದ ಸುರಕ್ಷಿತವಾಗಿ ಪಾರು ಮಾಡಲಾಯಿತು.
ಲಖಿಂಪುರ ಖೇರಿಯತ್ತ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಯುಪಿ ಪೊಲೀಸರು ಬೆಳಗಿನ ಜಾವ 4-30 ಗಂಟೆಗೆ ಬಂಧಿಸಿದರು.
ಸೂರ್ಯೋದಯಕ್ಕೂ ಮೊದಲೇ ಓರ್ವ ಪುರುಷ ಪೊಲೀಸ್ ಅಧಿಕಾರಿಯಿಂದ ಪ್ರಿಯಾಂಕಾ ಅವರನ್ನು ಬಂಧಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೇ ತಮ್ಮ ಬಂಧನ ಖಂಡಿಸಿ ಪ್ರಿಯಾಂಕಾ ನಡೆಸಿದ ಪ್ರತಿಭಟನೆ ವಿಡಿಯೋ ವೈರಲ್ ಆಯಿತು. ಆದರೂ ಯುಪಿ ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿ ಗೃಹ ಬಂಧನದಲ್ಲಿರಿಸಿದರು.
ಪ್ರಿಯಾಂಕಾ ಬಂಧನವನ್ನು ಕಾಂಗ್ರೆಸ್ನ ಅಸಮಾಧಾನಿತರ ಗುಂಪು ಎಂದು ಹೇಳಲಾಗುವ ಜಿ-23 ನಾಯಕರೂ ಖಂಡಿಸಿದರು. ಇದೇ ವೇಳೆ ಪ್ರಿಯಾಂಕಾ ಅವರನ್ನು ನೋಡಲು ಬಂದ ಛತ್ತೀಸ್ಗಢ ಸಿಎಂ ಭೂಪೇಶ್ ಭಾಘೆಲ್ ಅವರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಯುಪಿ ಪೊಲೀಸರು ತಡೆದರು. ಇದನ್ನು ಖಂಡಿಸಿ ವಿಮಾನ ನಿಲ್ದಾಣದಲ್ಲೇ ಭಾಘೆಲ್ ಪ್ರತಿಭಟನೆ ನಡೆಸಿದರು.












Click it and Unblock the Notifications