ಆಕ್ಸಿಸ್ ಸಮೀಕ್ಷೆ : ಯೋಗಿ ಆದಿತ್ಯನಾಥ್ ಜನಪ್ರಿಯತೆ ಇಳಿಕೆ, ಅಖಿಲೇಶ್ ಏರಿಕೆ

ನವದೆಹಲಿ, ಡಿಸೆಂಬರ್ 24 : ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಕಂಡುಬಂದಿದ್ದ ಆಡಳಿತ ವಿರೋಧಿ ಅಲೆ ಉತ್ತರ ಪ್ರದೇಶದಲ್ಲಿಯೂ ಆವರಿಸಿಕೊಳ್ಳುತ್ತಿರುವುದು, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಕಂಡುಬಂದಿದ್ದು, ಬಿಜೆಪಿಗೆ ಆತಂಕ ಮೂಡಿಸಿದೆ.

ಇಂಡಿಯಾ ಟುಡೇಗಾಗಿ ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಈ ಸಮೀಕ್ಷೆಯಲ್ಲಿ, ಕಳೆದ ಮೂರು ತಿಂಗಳುಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯ ಗ್ರಾಫ್ ಕೆಳಮುಖವಾಗಿದೆ.

ಸತತ ಹದಿನೈದು ವರ್ಷಗಳ ಕಾಲ ಆಡಳಿತ ನಡೆಸಿದ್ದ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಜನಪ್ರಿಯತೆಯಿಂದ ಶೇ.6ರಷ್ಟು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಕುಸಿದಿದೆ.

ಎರಡು ವರ್ಷಗಳ ಹಿಂದೆ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಅವರು ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರಾದರೂ ಜನಪ್ರಿಯತೆಯ ದೃಷ್ಟಿಯಿಂದ ಕುಂಠಿತವಾಗಿರುವುದು ಬಿಜೆಪಿ ಪಾಳಯದಲ್ಲಿ ಕಳವಳಕಾರಿಯಾಗಿದೆ.

ಯಾಕೆಂದರೆ, ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಿರುವಾಗ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಬೇಕಾಗಿರುವುದು ಅತ್ಯಂತ ಮುಖ್ಯವಾಗಿದೆ. ಉತ್ತರ ಪ್ರದೇಶದಲ್ಲಿ ಸ್ವಲ್ಪ ಎಡವಟ್ಟಾದರೆ ಇಡೀ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಯೋಗಿಯವರ ಜನಪ್ರಿಯತೆ ಶೇ.5ರಷ್ಟು ಇಳಿಕೆ

ಯೋಗಿಯವರ ಜನಪ್ರಿಯತೆ ಶೇ.5ರಷ್ಟು ಇಳಿಕೆ

ಸೆಪ್ಟೆಂಬರ್ ನಲ್ಲಿ ಆಕ್ಸಿಸ್ ಮೈ ಇಂಡಿಯಾ ನಡೆಸಿದ್ದ ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯ ಮಟ್ಟ ಶೇ.43ರಷ್ಟು ಇತ್ತು. ಕೆಲವೇ ತಿಂಗಳುಗಳ ಅಂತರದಲ್ಲಿ ಇದೇ ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಯೋಗಿಯವರ ಜನಪ್ರಿಯತೆ ಶೇ.5ರಷ್ಟು ಇಳಿಕೆ ಕಂಡಿದೆ. ಡಿಸೆಂಬರ್ 3ನೇ ವಾರದಲ್ಲಿ ಮಾಡಿದ ಸಮೀಕ್ಷೆಯ ಪ್ರಕಾರ, ಶೇ.38ರಷ್ಟು ಸಮೀಕ್ಷೆಯಲ್ಲಿ ಭಾಗವಹಿಸಿದವರು ಯೋಗಿ ಆದಿತ್ಯನಾಥ್ ಅವರೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಖಿಲೇಶ್ ಜನಪ್ರಿಯತೆ ಏರಿಕೆ

ಅಖಿಲೇಶ್ ಜನಪ್ರಿಯತೆ ಏರಿಕೆ

ಅಚ್ಚರಿಯ ರೀತಿಯಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲು ಕಂಡು ಸುಣ್ಣವಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಸದ್ಯದ ಜನಪ್ರಿಯತೆಯ ಮಟ್ಟ ಶೇ.37ರಷ್ಟಿದೆ. ಕಳೆದ ಬಾರಿ ನಡೆಸಿದ ಸಮೀಕ್ಷೆಗಿಂತ ಶೇ.7ರಷ್ಟು ಜನಪ್ರಿಯತೆಯನ್ನು ಅವರು ಹೆಚ್ಚಿಸಿಕೊಂಡಿರುವುದು ಬಿಜೆಪಿ ವಿರೋಧಿ ಪಕ್ಷಗಳಿಗೆ ಭಾರೀ ಆಶಾದಾಯಕವಾಗಿ ಪರಿಣಮಿಸಿದೆ. ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್ ಅವರ ನಡುವೆ ಕೇವಲ ಶೇ.1ರಷ್ಟು ಮಾತ್ರ ವ್ಯತ್ಯಾಸವಿದೆ. ಕಳೆದ ಚುನಾವಣೆಯಲ್ಲಿ ರಾಹುಲ್ ಜೊತೆ ಕೈಜೋಡಿಸಿದ್ದರಿಂದ ಅಖಿಲೇಶ್ ಕೈಸುಟ್ಟುಕೊಂಡಿದ್ದರು.

ಮಾಯಾವತಿಗೆ ಭಾರೀ ಹೊಡೆತ

ಮಾಯಾವತಿಗೆ ಭಾರೀ ಹೊಡೆತ

ಆದರೆ ಭಾರೀ ಹೊಡೆತ ಬಿದ್ದಿರುವುದು ಮಹತ್ವಾಕಾಂಕ್ಷಿ ನಾಯಕಿ, ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅವರಿಗೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕುಮಾರಿ ಮಾಯಾವತಿ ಅವರ ಜನಪ್ರಿಯತೆ ಕೆಳಮುಖವಾಗಿದೆ. ಶೇ.15ರಷ್ಟು ಮಾತ್ರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಲಾಯಕ್ಕು ಎಂದಿದ್ದಾರೆ. ಕಳೆದ ಸಮೀಕ್ಷೆಗಿಂತಲೂ ಇದು ಶೇ.3ರಷ್ಟು ಕಡಿಮೆಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾತ್ರವಲ್ಲ, ಚಾನ್ಸ್ ಸಿಕ್ಕಿದರೆ ದೇಶದ ಪ್ರಧಾನಿಯಾಗಲೂ ಸಿದ್ಧರಿರುವ ಮಾಯಾವತಿಗೆ ಈ ಸಮೀಕ್ಷೆ ಭಾರೀ ಹೊಡೆತ ಕೊಟ್ಟಿರುವುದಂತೂ ನಿಜ.

ಒಂಚೂರೂ ತೃಪ್ತಿ ಇಲ್ಲ ಅಂದವರು ಶೇ.35

ಒಂಚೂರೂ ತೃಪ್ತಿ ಇಲ್ಲ ಅಂದವರು ಶೇ.35

ಯೋಗಿ ಆದಿತ್ಯನಾಥ್ ಅವರ ವೈಯಕ್ತಿಕ ಜನಪ್ರಿಯತೆ ಮಾತ್ರವಲ್ಲ, ಒಟ್ಟಾರೆಯಾಗಿ ಇಡೀ ಸರಕಾರದ ಜನಪ್ರಿಯತೆಯೂ ಕುಗ್ಗಿದೆ. ಶೇ.35ರಷ್ಟು ಸಮೀಕ್ಷೆಯಲ್ಲಿ ಮತ ಹಾಕಿದವರು ಯೋಗಿ ಆದಿತ್ಯನಾಥ್ ಸರಕಾರದ ಬಗ್ಗೆ ಒಂಚೂರೂ ಸಂತೃಪ್ತಿ ಹೊಂದಿಲ್ಲ ಎಂದು ಹೇಳಿ ಬಿಜೆಪಿ ಪಾಳಯದಲ್ಲಿ ಅಲ್ಲೋಲಕಲ್ಲೋಲವಾಗುವಂತೆ ಮಾಡಿದ್ದಾರೆ. ಆದರೆ, ಶೇ.37ರಷ್ಟು ಜನರು ಯೋಗಿಯ ಸರಕಾರದ ವೈಖರಿಯ ಬಗ್ಗೆ ಸಂಪೂರ್ಣ ಸಂತೃಪ್ತಿ ಹೊಂದಿರುವುದಾಗಿ ಹೇಳಿ ಸ್ವಲ್ಪ ಮಟ್ಟಿನ ಆಶಯ ಮೂಡಿಸಿದ್ದಾರೆ. ಶೇ.12ರಷ್ಟು ಜನ ಯೋಗಿ ಅವರ ಆಡಳಿತ ಅಷ್ಟಕ್ಕಷ್ಟೇ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಮಹಾಘಟಬಂಧನ ಆಗಲೇಬೇಕು

ಮಹಾಘಟಬಂಧನ ಆಗಲೇಬೇಕು

ಬಿಜೆಪಿಗೆ ತಲೆನೋವು ತಂದಿರುವುದು ಯೋಗಿ ಸರಕಾರದ ಬಗ್ಗೆ ಜನ ತಿರಸ್ಕಾರ ಭಾವ ಇರುವುದು ಮಾತ್ರವಲ್ಲ, ಬಿಜೆಪಿಯ ವಿರೋಧಿಗಳು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಉದ್ದೇಶದಿಂದ ಒಂದಾಗುತ್ತಿರುವದು ಭಾರೀ ತಲೆಬಿಸಿ ತಂದಿದೆ. ಬಿಜೆಪಿ ವಿರುದ್ಧದ ಯುದ್ಧದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದು ಶೇ.47ರಷ್ಟು ಜನ ಹೇಳಿದ್ದಾರೆ. ಈ ಮಹಾಘಟಬಂಧನ ಆಗಲೇಬಾರದು ಎಂದು ಅಂದವರು ಶೇ.28ರಷ್ಟು ಮಾತ್ರ. ಉಳಿದವರು, ವಿರೋಧಿಗಳ ಮೈತ್ರಿಕೂಟ ಇರಬೇಕೋ ಬಿಡಬೇಕೋ ಎಂಬ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ.

ಯಾರಿಗೆ ಎಷ್ಟು ಸೀಟು ಎಂದು ಹೇಳಿಲ್ಲ

ಯಾರಿಗೆ ಎಷ್ಟು ಸೀಟು ಎಂದು ಹೇಳಿಲ್ಲ

ಈ ಸಮೀಕ್ಷೆ, ಈಗ ಚುನಾವಣೆ ನಡೆದರೆ ಯಾವ ಪಕ್ಷ ಎಷ್ಟು ಸೀಟು ಗಳಿಸುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಲೋಕಸಭೆ ಹತ್ತಿರವೇ ಇರುವುದರಿಂದ ಜನರು ಯಾವ ರೀತಿ ಚಿಂತಿಸುತ್ತಿದ್ದಾರೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ 70 ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡು ಧೂಳೆಬ್ಬಿಸಿತ್ತು. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕೂಡ 403 ಸೀಟುಗಳಲ್ಲಿ 325ರಷ್ಟು ಬಿಜೆಪಿ ವಶ ಮಾಡಿಕೊಂಡಿತ್ತು. ಕಾಂಗ್ರೆಸ್ ಕೇವಲ 7 ಸೀಟು ಗೆದ್ದು ಸೋತು ಸುಣ್ಣವಾಗಿತ್ತು. ಅಖಿಲೇಶ್ ಯಾದವ್ ಅವರು ರಾಹುಲ್ ಗಾಂಧಿ ಅವರ ಜೊತೆ ಕೈಜೋಡಿಸಿದ್ದು ಭಾರೀ ಉಲ್ಟಾ ಹೊಡೆದಿತ್ತು. ಎರಡೂ ಪಕ್ಷಗಳು ಮುಳುಗಡೆಯಾದವು.

ಶೇ.51ರಷ್ಟು ಮೋದಿ ಪ್ರಧಾನಿ ಆಗಬೇಕಂತೆ

ಶೇ.51ರಷ್ಟು ಮೋದಿ ಪ್ರಧಾನಿ ಆಗಬೇಕಂತೆ

ಬಿಜೆಪಿ ಪಾಲಿನ ಆಶಾಕಿರಣವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಉತ್ತರ ಪ್ರದೇಶದಲ್ಲಿ ಇನ್ನೂ ಉತ್ತಮವಾಗುತ್ತ ಸಾಗಿದೆ. ಸೆಪ್ಟೆಂಬರ್ ನಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.48ರಷ್ಟು ಜನರು ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರೆ, ಡಿಸೆಂಬರ್ ನಲ್ಲಿ ನಡೆದ ಸಮೀಕ್ಷೆ.ಲ್ಲಿ ಅದು ಶೇ.3ರಷ್ಟು ಹೆಚ್ಚಾಗಿದೆ. ಶೇ.51ರಷ್ಟು ಜನರು ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕು ಎಂದು ಉತ್ತರ ಪ್ರದೇಶದ ಜನತೆ ಹೇಳಿದ್ದಾರೆ. ಇದು ಲೋಕಸಭೆ ಚುನಾವಣೆಯ ದೃಷ್ಟಿಯಿಂತ ಭಾರತೀಯ ಜನತಾ ಪಕ್ಷಕ್ಕೆ ಬೆಳ್ಳಿ ಕಿರಣ ಮೂಡಿಸಿದಂತಾಗಿದೆ.

ಶೇ.26ರಷ್ಟು ರಾಹುಲ್ ಪ್ರಧಾನಿಯಾಗಬೇಕಂತೆ

ಶೇ.26ರಷ್ಟು ರಾಹುಲ್ ಪ್ರಧಾನಿಯಾಗಬೇಕಂತೆ

ಇದೇ ಸಮಯದಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಪ್ರಿಯತೆ ಕೂಡ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಸೆಪ್ಟೆಂಬರ್ ನಲ್ಲಿ ಶೇ.22ರಷ್ಟು ಇದ್ದ ಅವರ ಜನಪ್ರಿಯತೆ ಇದೀಗ ಶೇ.4ರಷ್ಟು ಹೆಚ್ಚಿದೆ. ಅಂದರೆ, ಶೇ.26ರಷ್ಟು ಜನರು ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತಾಗಿದ್ದ ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದಲ್ಲಿ ಒಪ್ಪಿಕೊಳ್ಳಲು ಆರಂಭಿಸಿರುವುದು ಕಾಂಗ್ರೆಸ್ ಪಾಲಿಗೆ ಸಂಭ್ರಮದ ಕ್ಷಣವಾಗಿದೆ. ಆದರೆ, ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗಲು ಇಷ್ಟು ಸಾಕಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+