ಉತ್ತರ ಪ್ರದೇಶದಲ್ಲಿ ಪೌರತ್ವ ಗಲಭೆಕೋರರ ಆಸ್ತಿ ಜಪ್ತಿ ಮಾಡಿದ ಯೋಗಿ ಸರ್ಕಾರ
ಲಖ್ನೋ, ಡಿಸೆಂಬರ್, 23: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವ ನೆಪದಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿಗೆ ಹಾನಿಯುಂಟು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹೇಳಿತ್ತು, ಈಗ ಅದನ್ನು ಕಾರ್ಯರೂಪಕ್ಕೆ ತರಲಾಗಿದೆ.
ಗಲಭೆ ನಡೆದಿರುವ ಉತ್ತರ ಪ್ರದೇಶದ ಲಖ್ನೋ, ಮುಜಫ್ಫರ್ ನಗರ, ರಾಂಪುರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರ 67 ಅಂಗಡಿಗಳನ್ನು ಜಪ್ತಿ ಮಾಡಲಾಗಿದೆ.
ಪೌರತ್ವಕಾಯ್ದೆ; ಅಮಿತ್ ಶಾ ರಾಜ್ಯಕ್ಕೆ ಕೊಟ್ಟ ಸೂಚನೆ ಏನು?
ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ದಂಗೆಕೋರರನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಇವರು ದಂಡ ಪಾವತಿಸದಿದ್ದಲ್ಲಿ, ಅವರ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದೆ. ರಾಂಪುರದಲ್ಲಿ 25 ದಂಗೆಕೋರರ ಆಸ್ತಿ ಜಪ್ತಿ ಪ್ರಕ್ರಿಯೆ ಆರಂಭವಾಗಿದೆ.
ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು, ಮುಜಫ್ಫರ್ ನಗರದಲ್ಲಿ ಶುಕ್ರವಾರ ಪ್ರಾರ್ಥನೆಯ ನಂತರ ಗಲಭೆ ನಡೆದಿತ್ತು. 10 ಬೈಕ್ ಗಳಿಗೆ, ಹಲವು ಕಾರುಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಲಾಗಿತ್ತು. 12 ಪೊಲೀಸರು ಸೇರಿದಂತೆ 30 ಜನರಿಗೆ ಗಾಯಗಳಾಗಿದ್ದವು.
"ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್ ಸಿ) ಮಾಡಿದ್ದೇ ಕಾಂಗ್ರೆಸ್"
ಯಾವುದೇ ಪ್ರತಿಭಟನೆ ವೇಳೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವವರ ಆಸ್ತಿಯನ್ನು ಜಪ್ತಿ ಮಾಡಿ ಭರಿಸಬೇಕು ಎಂದು 2018 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 2010 ರಲ್ಲಿ ಅಲಹಬಾದ್ ಹೈಕೋರ್ಟ್ ಇದೇ ಆದೇಶ ನೀಡಿತ್ತು. ಇದನ್ನೇ ಮಾನದಂಡವಾಗಿ ತೆಗೆದುಕೊಂಡು ಯೋಗಿ ಆದಿತ್ಯನಾಥ್ ಸರ್ಕಾರ ಗಲಭೆ ಮಾಡಿರುವವರ ವಿರುದ್ದ ಸಮರ ಸಾರಿದೆ.
ಈ ಹಿಂಸಾಚಾರದ ತನಿಖೆ ಇನ್ನೂ ನಡೆಯುತ್ತಿದೆ. ಗಲಭೆಕೋರರನ್ನು ವಿಡಿಯೋ ದೃಶ್ಯಾವಳಿ ಮೂಲಕ ಪತ್ತೆ ಹಚ್ಚಲಾಗುತ್ತದೆ. ದಂಗೆಕೋರರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.