ಮೋದಿ ವಿರುದ್ದ ಕಣದಿಂದ ಹಿಂದಕ್ಕೆ: ಅಸಲಿ ಕಾರಣ ತೆರೆದಿಟ್ಟ ಪ್ರಿಯಾಂಕ ಗಾಂಧಿ
ಅಮೇಠಿ, ಮೇ 1: ನಾನ್ಯಾಕೆ ಪ್ರಧಾನಿ ಮೋದಿ ವಿರುದ್ದ ವಾರಣಾಸಿಯಿಂದ ಸ್ಪರ್ಧಿಸಬಾರದು ಎಂದು ಹೇಳಿಕೆ ನೀಡಿ, ಕೊನೆಗೆ ಹಿಂದಕ್ಕೆ ಸರಿದಿದ್ದ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರಪ್ರದೇಶದ ಚುನಾವಣಾ ಉಸ್ತುವಾರಿ ಪ್ರಿಯಾಂಕ ಗಾಂಧಿ, ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ನಾನು ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದೇನೆ ಎನ್ನುವುದು ತಪ್ಪು, ಪಕ್ಷದ ನಿರ್ಧಾರದ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಮ್ಮ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನು ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಿಯಾಂಕ ಹೇಳಿದ್ದಾರೆ.
ವಾರಣಾಸಿಯೂ ಸೇರಿದಂತೆ 41ಕ್ಷೇತ್ರದ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ವಾರಣಾಸಿಯಿಂದ ಸ್ಪರ್ಧಿಸಿದರೆ, ಆ ಕ್ಷೇತ್ರಕ್ಕೆ ಮಾತ್ರ ನಾನು ಸೀಮಿತನಾಗುತ್ತಿದ್ದೆ. ಇದರಿಂದ, ಪೂರ್ವ ಉತ್ತರಪ್ರದೇಶದ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ವಾಧ್ರಾ ಹೇಳಿದ್ದಾರೆ.

ಪಕ್ಷದ ಎಲ್ಲಾ ಅಭ್ಯರ್ಥಿಗಳು ನನ್ನನ್ನು ಪ್ರಚಾರಕ್ಕೆ ಆಹ್ವಾನಿಸುತ್ತಿದ್ದಾರೆ, ಹೀಗಿರುವಾಗ ಅಲ್ಲಿಗೆ ಹೋಗುವುದು ನನ್ನ ಕರ್ತವ್ಯ. ವಾರಣಾಸಿಗೆ ಮಾತ್ರ ನಾನು ಸೀಮಿತನಾಗಲು ಸಾಧ್ಯವಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕಕ್ಕೆ ನಾಲ್ಕೈದು ದಿನ ಮುನ್ನವೇ ಕಾಂಗ್ರೆಸ್, ಅಜಯ್ ರಾಯ್ ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೂ, ಕೊನೇ ಕ್ಷಣದಲ್ಲಿ ಪ್ರಿಯಾಂಕ, ವಾರಣಾಸಿಯಿಂದ ಕಣಕ್ಕಿಳಿಯಬಹುದು ಎನ್ನುವ ಮಾತು ಕೇಳಿಬರುತ್ತಿದ್ದರಿಂದ, ಏಪ್ರಿಲ್ 29ರ ವರೆಗೂ ಈ ವಿಷಯ ಚರ್ಚೆಯ ವಿಷಯವಾಗಿತ್ತು.
ಪ್ರಿಯಾಂಕ ಹೆಸರನ್ನು ತೇಲಿಬಿಟ್ಟು ಮುಂದೆ ಬಿಜೆಪಿಯ ನಡೆ ಏನು ಇರಬಹುದು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಈ ತಂತ್ರಗಾರಿಕೆ ಬಳಸಿಕೊಂಡಿತ್ತು ಎನ್ನುವ ಮಾತು ಕೇಳಿಬರುತ್ತಿದ್ದ ಸಮಯದಲ್ಲಿ ಪ್ರಿಯಾಂಕ ಗಾಂಧಿ ಈ ಸ್ಪಷ್ಟನೆಯನ್ನು ನೀಡಿದ್ದಾರೆ.












Click it and Unblock the Notifications