ಎಸ್ ಜಾನಕಿ ಅಂತ್ಯಕ್ರಿಯೆ ಮಾಡಿದ ಮೊಮ್ಮಗಳು ಅಪ್ಸರಾ ವೈದ್ಯುಲ ಬಗ್ಗೆ ಗೊತ್ತಾ! ಟ್ರೋಲಿಗರಿಗೇ ಕ್ಲಾಸ್
ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿದ ಮೊಮ್ಮಗಳು ಅಪ್ಸರಾ ವೈದ್ಯುಲ ಕಣ್ಣೀರು ಹಾಕಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದುರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರ ಪೋಸ್ಟ್ ವ್ಯಾಪಕ ಗಮನ ಸೆಳೆದಿದೆ.
ಗಾನಕೋಗಿಲೆ ಎಸ್ ಜಾನಕಿ ಅವರ ಅಂತ್ಯಕ್ರಿಯೆಯನ್ನು ಮಾಡಿದ್ದು ಅವರ ಮೊಮ್ಮಗಳು ಅಪ್ಸರಾ ವೈದ್ಯುಲ. ಅಜ್ಜಿ ಅಂತ್ಯಸಂಸ್ಕಾರದ ವೇಳೆಗೆ ಬೇಸರ ತೋರ್ಪಡಿಸಲಿಲ್ಲ ಎಂಬ ಕಾರಣಕ್ಕೆ ಟ್ರೋಲಿಗೊಳಗಾಗಿ ಆಮೇಲೆ ಟ್ರೋಲಿಗರಿಗೆ ಸಖತ್ ಕ್ಲಾಸನ್ನೂ ತೆಗೆದುಕೊಂಡ ಈಕೆ ಯೋಗ, ಅಧ್ಯಾತ್ಮ ಅರಿತವರೂ ಹೌದು.

ಸಾವಿರಾರು ಹಾಡುಗಳ ಮೂಲಕ ದಂತಕಥೆಯಾದ ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮೊನ್ನೆ ಭಾನುವಾರ ಕಣಿಯನಹುಂಡಿಯಲ್ಲಿರುವ ಅವರ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ. ಅವರ ಅಂತ್ಯಕ್ರಿಯೆ ಮಾಡಿದ್ದು ಮೊಮ್ಮಗಳು ಅಪ್ಸರಾ ವೈದ್ಯುಲಾ. ಲಕ್ಷಾಂತರ ಜನರ ಕಣ್ಣೀರ ಕೋಡಿಯ ನಡುವೆ ತನ್ನಜ್ಜಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ಈ ಹೆಣ್ಣುಮಗಳು ನಿರ್ಲಿಪ್ತವಾಗಿ ನೆರವೇರಿಸಿದರು. ಈ ಜ್ಞಾನದ ಬಗ್ಗೆ ಅರಿವಿಲ್ಲದ ಜನ ಎಂದಿನಂತೆ ಎಸ್.ಜಾನಕಿಯ ಸಾವಿನಂಥಾ ದಟ್ಟ ವಿಷಾದದ ನಡುವೆಯೂ ತಮ್ಮ ಕೆಟ್ಟ ಬುದ್ಧಿ ಶುರು ಮಾಡಿದರು. ಅಜ್ಜಿಯ ಅಂತ್ಯಕ್ರಿಯೆ ವೇಳೆಗೆ ಮೊಮ್ಮಗಳು ಅಪ್ಸರಾ ಕಣ್ಣೀರು ಹಾಕುತ್ತಿಲ್ಲ ಅಂತ ಟ್ರೋಲ್ ಮಾಡಲು ಶುರು ಮಾಡಿದರು.
ಒಂದೆಡೆ ತನ್ನ ಪ್ರೀತಿಯ ಅಜ್ಜಿಯನ್ನು ಅಗಲಿದ ನೋವು, ಇನ್ನೊಂದೆಡೆ ಇಂಥಾ ಕೆಟ್ಟ ಮನಸ್ಸಿನವರ ಕಾಟ. ಆದರೂ ಈ ಹುಡುಗಿ ಎದೆಗುಂದದೇ ಎರಡಕ್ಕೂ ಸಮರ್ಥ ಉತ್ತರ ನೀಡಿದ್ದಾಳೆ. ತನ್ನ ದುಃಖದ ಬಗ್ಗೆಯೇ ಜಡ್ಜ್ಮೆಂಟಲ್ ಆಗಿ ಮಾತನಾಡಿದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ.
ಅಜ್ಜಿಯನ್ನೇ ಹೋಲುತ್ತಿದ್ದ ಅಕ್ಕ ಮೂರು ವರ್ಷ ಹಿಂದೆ ತೀರಿಕೊಂಡಳು!
ಅಪ್ಸರಾ ಅಜ್ಜಿಯ ಸಾವಿನ ಬೆನ್ನಲ್ಲೇ ಕೇಳಿಬಂದ ಟೀಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ. ನನ್ನ ಅಜ್ಜಿಗೆ ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಯ ವ್ಯಕ್ತಿ ಎಂದರೆ ನನ್ನ ಅಕ್ಕ ವರ್ಷಾ. ಅಜ್ಜಿಯೂ ಅಕ್ಕನೂ ಒಂದೇ ತರಹ ಇದ್ದರು. ಮಾತುಗಳೇ ಬೇಡದ ಮಟ್ಟಿಗೆ ಅವರಿಬ್ಬರ ನಡುವೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ನಂಟಿತ್ತು. ನಿಜವಾದ ಅರ್ಥದಲ್ಲಿ ಅವರಿಬ್ಬರೂ ಒಬ್ಬರಿಗೊಬ್ಬರು ಎಂಬಂತಿದ್ದರು. ಇಂದು ನಾನು ಇಲ್ಲಿ ನಿಂತು ಅಜ್ಜಿಯನ್ನು ನೋಡಿಕೊಳ್ಳುತ್ತಾ, ಈಗ ನನ್ನ ಹೆಗಲಿಗೆ ಬಂದಿರುವ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನಲ್ಲಾ, ಅಲ್ಲಿ ನಿಜವಾಗಿ ಇರಬೇಕಾಗಿದ್ದವಳು ವರ್ಷಾ ಎಂಬುದನ್ನು ಈ ಜಗತ್ತು ಮರೆಯಬಾರದು. ಅವಳು 2023 ಆಗಸ್ಟ್ ತಿಂಗಳಲ್ಲಿ ನಮ್ಮನ್ನು ಅಗಲಿದಳು, ಆ ನಷ್ಟದಿಂದ ನಮ್ಮ ಕುಟುಂಬ ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ದುಃಖ ಎಂದಿಗೂ ಮಾಯವಾಗುವುದಿಲ್ಲ. ಅದುನೀವು ನಿಮ್ಮ ಜೀವನದ ಕೊನೆಯವರೆಗೂ ಜೊತೆಯಲ್ಲೇ ಹೊತ್ತು ಸಾಗುವ ಒಂದು ಭಾರ ಅಷ್ಟೇ.
ಅಜ್ಜಿಯ ಪ್ರೀತಿಯನ್ನು ಕಣ್ಣೀರಿಂದ ಅಳೆಯಬೇಡಿ
ಇದೀಗ ಅಜ್ಜಿ ಅಂತ್ಯಕ್ರಿಯೆ ವೇಳೆ ನನ್ನ ಕಣ್ಣಿನಲ್ಲಿ ನೀರಿರಲಿಲ್ಲ ಎಂಬ ಕಾರಣಕ್ಕೆ ಜನರು ನನ್ನ ದುಃಖವನ್ನು ಪ್ರಶ್ನಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ದಯವಿಟ್ಟು ನನ್ನ ಅಜ್ಜಿಯ ಮೇಲಿರುವ ನನ್ನ ಪ್ರೀತಿಯನ್ನು ಕಣ್ಣಲ್ಲಿ ಕಾಣುವ ಅಥವಾ ಕಾಣದ ಕಣ್ಣೀರಿನ ಮೂಲಕ ಅಳೆಯಬೇಡಿ. ಸಾವನ್ನು ಅತ್ಯಂತ ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಳ್ಳುವುದನ್ನು ನಮಗೆ ಮುಖ್ಯವಾಗಿ ಅವರೇ ಕಲಿಸಿಕೊಟ್ಟಿದ್ದಾರೆ. ಒಂದು ಜೀವ ಕೊನೆಗೊಂಡ ತಕ್ಷಣ ಪ್ರೀತಿ ಮುಗಿದುಹೋಗುವುದಿಲ್ಲ ಎಂದು ಅವರು ನಮಗೆ ಕಲಿಸಿದ್ದರು. ನನ್ನ ಅನುಭವಗಳು ನನ್ನನ್ನು ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಬಲಿಷ್ಠವಾಗಿ ಮಾಡಿದೆ. ದುಃಖ ಯಾವಾಗಲೂ ಜೋರಾಗಿ ಅಳುವುದರಲ್ಲೇ ಇರುವುದಿಲ್ಲ. ಕೆಲವೊಮ್ಮೆ ಅದು ತುಂಬಾ ನಿಶ್ಯಬ್ದವಾಗಿ, ಮೌನವಾಗಿ ಮತ್ತು ತೀರಾ ವೈಯಕ್ತಿಕವಾಗಿರುತ್ತದೆ.
ಅಜ್ಜಿಗೆ ನೋವುಂಟು ಮಾಡದಿರಿ
ಸಾರ್ವಜನಿಕ ಜೀವನದಲ್ಲಿ ಇರುವುದೆಂದರೆ ಜನರು ನಿಮ್ಮ ಜೀವನದ ಬಗ್ಗೆ ಕಟ್ಟುವ ವದಂತಿಗಳು, ಊಹಾಪೋಹಗಳು ಮತ್ತು ಕಟ್ಟುಕಥೆಗಳ ಜೊತೆ ಬದುಕುವುದು ಎಂದರ್ಥ. ತಾವು ಎಂದೂ ಹತ್ತಿರದಿಂದ ತಿಳಿಯದ ಒಂದು ಕುಟುಂಬದ ಬಗ್ಗೆ ಜನರು ಅಭಿಪ್ರಾಯಗಳನ್ನು ರೂಪಿಸುವುದನ್ನು ನೋಡುವುದು ತುಂಬಾ ನೋವುಂಟು ಮಾಡುತ್ತದೆ. ನನ್ನ ಅಜ್ಜಿ ನಿಜವಾಗಿಯೂ ಯಾರೆಂದು ಜನರು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಅವರು ತುಂಬಾ ಮೃದುಸ್ವಭಾವದವರು, ದಯಾಮಯಿ, ಅತ್ಯಂತ ವಿನಮ್ರರು ಮತ್ತು ಯಾರನ್ನೂ ತಪ್ಪು ತಿಳಿಯದ ಮುಕ್ತ ಮನಸ್ಸಿನವರು.. ಅವರು ಎಲ್ಲರಲ್ಲೂ ಒಳ್ಳೆಯದನ್ನೇ ನೋಡುತ್ತಿದ್ದರು. ವರ್ಷಾ ಕೂಡ ಹೂವಿನ ಹಾಗೆ ತದ್ರೂಪು ಅವಳಂತೆಯೇ ಇದ್ದಳು. ಅಂಥಾ ಅಜ್ಜಿಯನ್ನು ಮತ್ತೆ ನೋಯಿಸಬೇಡಿ' ಎಂದು ಬರೆದಿದ್ದಾರೆ.
ಯಾರು ಈ ಅಪ್ಸರಾ?
ಇವರು ಎಸ್ ಜಾನಕಿ ಮೊಮ್ಮಗಳು ಅನ್ನುವುದು ಈಗ ಜಗತ್ತಿಗೆ ತಿಳಿದಿದೆ. ಆದರೆ ಇವರು ಯೋಗ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಯೋಗ ರಿಟ್ರೀಟ್ಗಳನ್ನು ಮಾಡುತ್ತಿರುತ್ತಾರೆ. ಇವರಿಗೆ ಅಧ್ಯಾತ್ಮದಲ್ಲೂ ಅಪಾರ ಆಸಕ್ತಿ ಇದೆ. ಹೀಗಾಗಿ ಸಾವನ್ನು ಸಾಮಾನ್ಯರು ಗ್ರಹಿಸುವುದಕ್ಕಿಂತ ಭಿನ್ನವಾಗಿ ಅವರು ಕಂಡುಕೊಂಡಿದ್ದಾರೆ. ಅಧ್ಯಾತ್ಮದ ಪ್ರಕಾರ ಆತ್ಮಕ್ಕೆ ಸಾವಿಲ್ಲ. ನಾವು ಬಟ್ಟೆ ಧರಿಸುವಂತೆ ಆತ್ಮ ನಮ್ಮ ದೇಹವನ್ನು ಬಟ್ಟೆಯನ್ನು ಧರಿಸುತ್ತದೆ. ಬಟ್ಟೆ ಹಳೆಯದಾದ ಮೇಲೆ ಹೇಗೆ ನಾವು ಅದನ್ನು ಬಿಸಾಕಿ ಹೊಸ ಬಟ್ಟೆ ತೊಡುತ್ತೇವೆಯೋ ಆತ್ಮವೂ ಅದೇ ರೀತಿ ದೇಹ ಕೃಶವಾದಂತೆ ಆ ದೇಹ ಬಿಟ್ಟು ಹೊಸ ದೇಹ ಹುಡುಕಿಕೊಳ್ಳುತ್ತದೆ. ಅಧ್ಯಾತ್ಮದಲ್ಲಿ ಅಪಾರ ಸಾಧನೆ ಮಾಡಿರುವವರು ಈ ಸಾವು ಬದುಕಿನ ಚಕ್ರದಿಂದ ಪಾರಾಗುತ್ತಾರೆ.
(ಬರಹ: ಭವಾನಿ ಭಟ್)














Click it and Unblock the Notifications