2024ರಲ್ಲಿ ಭಾಗ್ಯದ ಬಾಗಿಲು ತೆರೆಯಲು ಯುಪಿ ಗೆಲುವು ಅತ್ಯಗತ್ಯ: ಅಮಿತ್ ಶಾ
ಲಕ್ನೋ, ನವೆಂಬರ್ 12: ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ಗೆಲುವಿನಿಂದ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಬಾಗಿಲು ತೆರೆದುಕೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವರಾಗುವುದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವೂ ಆಗಿರುವ ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಂವಾದ ನಡೆಸಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ವೇದಿಕೆ ಹಂಚಿಕೊಂಡರು.
ಉತ್ತರ ಪ್ರದೇಶದಲ್ಲಿ ಒಂದೇ ದಿನ 700 ಬಿಜೆಪಿ ನಾಯಕರಿಗೆ ಅಮಿತ್ ಶಾ ಚುನಾವಣಾ ಪಾಠ
ಶುಕ್ರವಾರ ವಾರಣಾಸಿಯಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ಅವರು, ಚುನಾವಣಾ ರಣತಂತ್ರಗಳನ್ನು ಬೋಧಿಸಿದರು. ರಾಜ್ಯದಲ್ಲಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ತಲಾ ಕನಿಷ್ಠ ಮೂರು ಕುಟುಂಬಗಳಿಂದ ಮತಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಅಡಿಪಾಯವನ್ನು ಪರಿಶೀಲಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಲು ಯಾವ ನಿಟ್ಟಿನಲ್ಲಿ ಶ್ರಮಿಸಬೇಕು ಎಂಬುದನ್ನು ವಿವರಿಸಿ ಹೇಳಿದರು.
ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟನೆ
ಉತ್ತರ ಪ್ರದೇಶದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯನ್ನು ಕೆಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಅಮಿತ್ ಶಾ ತಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿದರು. ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಪ್ರಚಾರಗಳನ್ನು ಬಲಪಡಿಸುವಂತೆ ಪಕ್ಷದ ಕಾರ್ಯಕರ್ತರನ್ನು ಕೇಳಿಕೊಂಡರು. ಈ ಹಿನ್ನೆಲೆಯಲ್ಲಿ "ಬೂತ್ ಸಮಿತಿಗಳನ್ನು" ಸ್ಥಾಪಿಸಬೇಕು ಎಂದು ಹೇಳಿದರು. "ನಮಗೆ ಪ್ರತಿಯೊಬ್ಬ ವ್ಯಕ್ತಿಯೂ ಬಿಜೆಪಿಗೆ ಮತ ಹಾಕಲು ಒಬ್ಬ ಕಾರ್ಯಕರ್ತನು ತಲಾ 60 ಜನರ ಮೇಲೆ ಪ್ರಭಾವ ಬೀರಬೇಕು. ಆ ವಲಯದಿಂದ ಕನಿಷ್ಠ 20 ಮತಗಳನ್ನು ಗಳಿಸುವ ಗುರಿಯನ್ನು ಹೊಂದಬೇಕು. ಏಕಕಾಲದಲ್ಲಿ ಒಬ್ಬ ಪಕ್ಷದ ಕಾರ್ಯಕರ್ತ ತಲಾ ಮೂರು ಕುಟುಂಬಗಳಿಂದ ಮತಗಳನ್ನು ಪಡೆಯುವ ಗುರಿಯನ್ನು ಹೊಂದಿರಬೇಕು" ಎಂದು ಶಾ ಹೇಳಿದ್ದಾರೆ.
ಉಚಿತ ಗ್ಯಾಸ್ ಸಿಲಿಂಡರ್ ರೀತಿ ಯೋಜನೆ ಬಗ್ಗೆ ಉಲ್ಲೇಖ
"ಇದು ಸಾಮಾನ್ಯ ಚುನಾವಣೆಯಲ್ಲ. ಇದು ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಮತ್ತು ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಚುನಾವಣೆಯಾಗಿದೆ," ಎಂದು ಅಮಿತ್ ಶಾ ಹೇಳಿದರು. ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಸೇರಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಾರಿಗೊಳಿಸಲಾಗಿರುವ ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂಚೂಣಿಯಲ್ಲಿಟ್ಟುಕೊಂಡು ಪ್ರಚಾರ ನಡೆಸುವಂತೆ ಶಾ ಸಲಹೆ ನೀಡಿದರು. ಇದೇ ವೇಳೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಗಡಿ ಪ್ರದೇಶಗಳಲ್ಲಿ ರೈತರ ಕಣ್ಣು ಕೆಂಪಾಗಿಸಿರುವ ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಅಮಿತ್ ಶಾ ತುಟಿ ಬಿಚ್ಚಲಿಲ್ಲ.
2024ರ ಚುನಾವಣೆ ಬಾಗಿಲು ತೆರೆಯಲು ಯುಪಿ ಗೆಲುವು ಅಗತ್ಯ
"ಕಾಂಗ್ರೆಸ್ ಕಾರ್ಯಕರ್ತರು ಹಲವು ವರ್ಷಗಳಿಂದ ಭ್ರಷ್ಟಾಚಾರ ಮತ್ತು ಅವ್ಯವಸ್ಥೆ ಮತ್ತು ಒಡೆದು ಆಳುವ ರಾಜಕೀಯದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ನಷ್ಟು ವರ್ಷಗಳ ಕಾಲ ಬಿಜೆಪಿಯು ಅಧಿಕಾರದಲ್ಲಿದ್ದರೆ, ಭಾರತವನ್ನು ಆರ್ಥಿಕ ಶಕ್ತಿ ಕೇಂದ್ರವಾಗಿ ಬದಲಾಯಿಸುತ್ತಿದ್ದೆವು. "ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಾಫಿಯಾ ಮತ್ತು ಗುಂಡಾ ರಾಜ್ಗಳನ್ನು ನಿಯಂತ್ರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಉತ್ತಮ ಉತ್ತರ ಪ್ರದೇಶವನ್ನು ರಚಿಸಬೇಕಾಗಿದೆ. ಯುಪಿ ಗೆಲುವಿನಿಂದಾಗಿ 2024ರ ಬಾಗಿಲು ತೆರೆಯುತ್ತದೆ," ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ.
700 ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ
"ವಾರಣಾಸಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆದ ಮಾಸ್ಟರ್ ಕ್ಲಾಸ್ ನಲ್ಲಿ ರಾಜ್ಯದ ಎಲ್ಲಾ 98 ಜಿಲ್ಲೆಗಳ ಅಧ್ಯಕ್ಷರು, ಪಕ್ಷದ ಜಿಲ್ಲಾ ಉಸ್ತುವಾರಿಗಳು, 403 ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು, ಉತ್ತರ ಪ್ರದೇಶದಲ್ಲಿರುವ 6 ಪ್ರಾದೇಶಿಕವಾರು ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪಕ್ಷದ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳು ಭಾಗವಹಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, ಉಪ ಮುಖ್ಯಮಂತ್ರಿಗಳು ಮತ್ತು ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿಯ ಇಡೀ ತಂಡವೇ ವಾರಣಾಸಿ ಸಭೆಯಲ್ಲಿ ಹಾಜರಾಗಿತ್ತು.
2017ರಲ್ಲಿ ಯುಪಿ ಚುನಾವಣೆ ಫಲಿತಾಂಶ ಹೇಗಿತ್ತು?
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಕ್ಷವು 311 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಇನ್ನೊಂದು ಕಡೆ 277 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಆರ್ಎಲ್ಡಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲವು ಸಾಧಿಸಿತ್ತು.
ರಾಜ್ಯದ ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ 312 ರಲ್ಲಿ ಗೆಲುವು ದಾಖಲಿಸಿತ್ತು. ಈ ಪಕ್ಷ ಶೇ. 39.67ರಷ್ಟು ಮತವನ್ನು ಪಡೆದುಕೊಂಡಿತ್ತು. ಅಂದು ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷ (BSP) 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.