ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರ ತಾಯಿಯ ಕಿವಿ ಕತ್ತರಿಸಿ ಒಡವೆ ದೋಚಿದ ದುಷ್ಕರ್ಮಿಗಳು
ಲಕ್ನೋ, ಸೆ.13: ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ನಡು ರಸ್ತೆಯಲ್ಲೇ ಬಿಜೆಪಿ ಶಾಸಕರ ತಾಯಿಯ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
ಬುಲಂದ್ಶಹರ್ ಸದರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಪ್ರದೀಪ್ ಚೌಧರಿ ಅವರ 80 ವರ್ಷದ ತಾಯಿ ಮೇಲೆ ಹಲ್ಲೆ ನಡೆಸಿ ಮಂಗಳವಾರ ಇಲ್ಲಿನ ಗಾಜಿಯಾಬಾದ್ನಲ್ಲಿ ಚಿನ್ನಾಭರಣಗಳನ್ನು ದೋಚಿದ್ದಾರೆ.
ಬಾಬ್ರಿ ಮಸೀದಿ ವಿವಾದದ ಹಾದಿಯಲ್ಲೇ ಜ್ಞಾನವಾಪಿ ಮಸೀದಿ ತೀರ್ಪು: ಹೀಗೆ ಹೇಳಿದ್ದೇಕೆ ಓವೈಸಿ?
ಈ ಭಯಾನಕ ಘಟನೆಯಲ್ಲಿ ದುಷ್ಕರ್ಮಿಗಳು ಆಕೆಯ ಚಿನ್ನದ ಕಿವಿಯೋಲೆಗಳನ್ನು ದೋಚಿದ್ದು, ಕಿವಿಯೋಲೆಗಳು ಸುಲಭವಾಗಿ ಕಿತ್ತು ಬರುತ್ತಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ವೃದ್ಧೆಯ ಕಿವಿಗಳನ್ನು ಭಾಗಶಃ ಕತ್ತರಿಸಿ ಪರಾರಿಯಾಗಿದ್ದಾರೆ.
ಗಾಜಿಯಾಬಾದ್ನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಸಕರ ತಾಯಿ ತಮ್ಮ ನಿಯಮಿತವಾದ ವಾಕಿಂಗ್ನಲ್ಲಿದ್ದಾಗ ಈ ಘಟನೆ ನಡೆದಿದೆ.
ಪ್ರತಾಪ್ ವಿಹಾರ್ನಲ್ಲಿ ಸಂತೋಷ್ ದೇವಿ ತನ್ನ ಕಿರಿಯ ಮಗ ಜೀತ್ಪಾಲ್ ಚೌಧರಿ ಜೊತೆ ವಾಸವಿದ್ದಾರೆ. ಶಾಸಕರ ತಾಯಿ ಸಂತೋಷ್ ದೇವಿ ಅವರು ಪ್ರತಿದಿನ ಬೆಳಗ್ಗೆ ವಾಕಿಂಗ್ಗೆ ಹೋಗುತ್ತಾರೆ. ಮಂಗಳವಾರ ಬೆಳಗ್ಗೆ ಆಕೆ ನಿತ್ಯ ನಡೆದುಕೊಂಡು ಹೋಗುತ್ತಿದ್ದಾಗ ಡಿಪಿಎಸ್ ವೃತ್ತದ ಬಳಿ ಇಬ್ಬರು ಮೋಟಾರ್ ಸೈಕಲ್ನಲ್ಲಿ ಬಂದವರು ಆಕೆಗೆ ಚಾಕು ತೋರಿಸಿ ಆಕೆ ಧರಿಸಿದ್ದ ಚಿನ್ನದ ಕಿವಿಯೋಲೆಗಳನ್ನು ಕೊಡುವಂತೆ ಒತ್ತಾಯಿಸಿದ್ದಾರೆ. ತನ್ನ ತಾಯಿ ಕೂಗಿಕೊಂಡ ತಕ್ಷಣ ದುಷ್ಕರ್ಮಿಗಳು ಆಕೆಯ ಕಿವಿಯೋಲೆಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೆ, ಅವುಗಳನ್ನು ಎಳೆಯಲು ಸಾಧ್ಯವಾಗಲಿಲ್ಲ ಹೀಗಾಗಿ ಹತಾಶೆಯಿಂದ ಚಾಕುವಿನಿಂದ ತಾಯಿಯ ಕಿವಿಗಳನ್ನು ಕತ್ತರಿಸಿ ಕಿವಿಯೋಲೆಗಳನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಶಾಸಕರ ಸಹೋದರ ಜೀತ್ಪಾಲ್ ಚೌಧರಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ದರೋಡೆಕೋರರ ಪತ್ತೆಗೆ ಹಲವು ತಂಡಗಳನ್ನು ರಚಿಸಿ ಶೋಧಕಾರ್ಯ ನಡೆಸಲಾಗುತ್ತಿದೆ.
ಶಾಸಕ ಪ್ರದೀಪ್ ಚೌಧರಿ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಅವರು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಎಸ್ಪಿ ಸಿಟಿ ನಿಪುನ್ ಅಗರ್ವಾಲ್ ಮಾತನಾಡಿ, ಕ್ರೈಂ ಬ್ರಾಂಚ್ ಎಸ್ಪಿ ಮತ್ತು ಎಸ್ಪಿ ಸಿಟಿ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ಮತ್ತು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿ ಅಪರಾಧಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.