ಮೋದಿ ಮತ್ತೆ ಗೆದ್ದರೆ ಹಳ್ಳಿ ತೊರೆಯಲು ಮುಸ್ಲಿಮರ ನಿರ್ಧಾರ
ಲಕ್ನೋ, ಮೇ 22: ಒಂದು ಕಾಲದಲ್ಲಿ ಸಾಮರಸ್ಯದಿಂದ ಇದ್ದ ಈ ಹಳ್ಳಿಯ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ, ಅಸಹನೆಯ ಕಿಡಿ ಜೋರಾಗಿದೆ. ಒಂದು ಸಮುದಾಯದವರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂಬ ಸ್ಥಿತಿ ಇದೆ. ಇದಕ್ಕೆ ಕಾರಣವಾಗಿದ್ದು ರಾಜಕೀಯ ಧ್ರುವೀಕರಣ.
ಉತ್ತರ ಪ್ರದೇಶದ ನಯಾಬನ್ಸ್ ಎಂಬ ಗ್ರಾಮದ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಉತ್ತಮ ಬಾಂಧವ್ಯ ಇತ್ತು. ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸುತ್ತಿದ್ದರು. ಮಕ್ಕಳು ಕೂಡಿ ಆಡುತ್ತಿದ್ದರು. ಆದರೆ, ಈಗ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಅದರಲ್ಲಿಯೂ ಎರಡು ವರ್ಷದಿಂದೀಚೆಗೆ ಅಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದನ್ನು ಸಹಿಸಿಕೊಳ್ಳಲಾಗದೆ ಊರು ತೊರೆಯುವ ಚಿಂತನೆ ನಡೆಸಿದ್ದಾರೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪ್ರಸ್ತುತ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಗ್ರಾಮದಲ್ಲಿನ ಉದ್ವಿಗ್ನತೆ ಮತ್ತಷ್ಟು ಜೋರಾಗಲಿದೆ ಎಂದು ಸ್ಥಳೀಯ ಮುಸ್ಲಿಮರು ಕಳವಳ ವ್ಯಕ್ತಪಡಿಸಿದ್ದಾರೆ. ಭಾನುವಾರ ಪ್ರಕಟಗೊಂಡ ಎಕ್ಸಿಟ್ ಪೋಲ್ ಸಮೀಕ್ಷೆಗಳು ಎನ್ಡಿಎ ಸರ್ಕಾರ ಎರಡನೆಯ ಅವಧಿಗೆ ರಚನೆಯಾಗುವುದನ್ನು ಸೂಚಿಸಿವೆ. ಇದರಂತೆ ಆದರೆ, ತಾವು ಊರು ಬಿಡಬೇಕಾಗುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.
'ಈ ಮೊದಲು ಎಲ್ಲವೂ ಚೆನ್ನಾಗಿದ್ದವು. ಒಳ್ಳೆಯ ಮತ್ತು ಕೆಟ್ಟ ಕ್ಷಣಗಳಲ್ಲಿ, ಮದುವೆಯಿಂದ ಸಾವಿನವರೆಗೂ ಹಿಂದೂ ಹಾಗೂ ಮುಸ್ಲಿಮರು ಒಗ್ಗಟ್ಟಾಗಿದ್ದರು. ಈಗ ಒಂದೇ ಗ್ರಾಮದಲ್ಲಿದ್ದರೂ ನಾವು ಬೇರೆ ಬೇರೆಯಾಗಿ ಬದುಕುತ್ತಿದ್ದೇವೆ' ಎಂದು ಸಣ್ಣ ಅಂಗಡಿ ನಡೆಸುವ ಗುಲ್ಫಾಮ್ ಅಲಿ ಹೇಳಿದ್ದಾರೆ.

ಈಗಾಗಲೇ ಊರು ತ್ಯಜಿಸಿದ ಕುಟುಂಬಗಳು
2014ರಲ್ಲಿ ಮೋದಿ ಸರ್ಕಾರ ಮತ್ತು 2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಗೊಂದಲ ಸಂಘರ್ಷಗಳು ಹೆಚ್ಚಾಗಿವೆ. ಹಿಂದೂ ಮತ್ತು ಮುಸ್ಲಿಮರನ್ನು ಒಡೆಯುವುದೇ ಅವರ ಮುಖ್ಯ ಗುರಿ. ಅದೊಂದೇ ಅವರ ಕಾರ್ಯಸೂಚಿ. ಈ ಹಿಂದೆ ಹೀಗೆ ಇರಲಿಲ್ಲ. ನಾವು ಈ ಜಾಗವನ್ನು ತೊರೆಯಲು ಬಯಸಿದ್ದೇವೆ. ಆದರೆ, ಅದು ಮಾಡಲು ಆಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಸುಮಾರು ಹನ್ನೆರಡು ಮುಸ್ಲಿಂ ಕುಟುಂಬಗಳು ಊರನ್ನು ತ್ಯಜಿಸಿವೆ ಎಂದು ಅವರು ಆರೋಪಿಸಿದ್ದಾರೆ.

ಕೋಮುಗಲಭೆ
ಇಲ್ಲಿನ ಮುಸ್ಲಿಮರು ಗೋಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಹಿಂದೂಗಳು ಆರೋಪಿಸಿದ್ದರು. ಪೊಲೀಸರು ಅದನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸಿಟ್ಟಿಗೆದ್ದು, ಗುಂಪೊಂದು ಹೆದ್ದಾರಿ ಅಡ್ಡಗಟ್ಟಿ ಕಲ್ಲುತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಇಲ್ಲಿ ಕೋಮು ಗಲಭೆ, ವೈಷಮ್ಯ ತೋರಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ.

40 ವರ್ಷಗಳಿಂದ ಸಾಮರಸ್ಯ
ಸ್ಥಳೀಯರ ಪ್ರಕಾರ ಇಲ್ಲಿ ಹಿಂದೂ ಮುಸ್ಲಿಂ ಸಂಘರ್ಷ ಇಂದು ನಿನ್ನೆಯದ್ದೇನಲ್ಲ. 1977ರಲ್ಲಿ ಮಸೀದಿ ಸ್ಥಾಪನೆಯ ಪ್ರಯತ್ನ ಕೋಮು ಗಲಭೆಗೆ ಎಡೆಮಾಡಿಕೊಟ್ಟಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. ಆದರೆ, ಬಳಿಕದ 40 ವರ್ಷಗಳಲ್ಲಿ ಎರಡೂ ಸಮುದಾಯಗಳ ನಡುವೆ ಕೋಮು ಸಾಮರಸ್ಯ ಬೆಳೆದಿತ್ತು.

ಹಳ್ಳಿ ತೊರೆಯುವುದು ಅನಿವಾರ್ಯ
2017ರಲ್ಲಿ ರಂಜಾನ್ ಮಾಸದ ಸಂದರ್ಭದಲ್ಲಿ ಮುಸ್ಲಿಮರು ಮದರಸಾ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಮೈಕ್ರೋಫೋನ್ಗಳನ್ನು ಬಳಸದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದರು. ಆ ಘಟನೆ ಬಳಿಕ ಪರಿಸ್ಥಿತಿ ಮತ್ತಷ್ಟು ವಿಷಮಿಸಿತ್ತು. ಈಗ ಅಲ್ಲಿ ತಮಗೆ ವ್ಯಾಪಾರ ವಹಿವಾಟುಗಳನ್ನು ನಡೆಸುವುದಕ್ಕೂ ತೊಂದರೆ ನೀಡಲಾಗುತ್ತಿದೆ. ತಮಗೆ ಧರ್ಮವನ್ನು ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯವಿಲ್ಲ. ಹೀಗೆಯೇ ಮುಂದುವರಿದರೆ, ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಹಳ್ಳಿ ತೊರೆದು ಬೇರೆಡೆ ಹೋಗುವ ಸ್ಥಿತಿ ನಿರ್ಮಾಣವಾಗಬಹುದು ಎನ್ನುತ್ತಾರೆ ಸ್ಥಳೀಯ ಮುಸ್ಲಿಮರು.












Click it and Unblock the Notifications