ಉತ್ತರ ಪ್ರದೇಶಕ್ಕೆ 3 ದಿನ ಪ್ರವಾಸ ಆರಂಭಿಸಿದ ಕೇಂದ್ರ ಚುನಾವಣಾ ಆಯೋಗ
ಲಕ್ನೋ, ಡಿಸೆಂಬರ್ 28: ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಮಂಗಳವಾರ ಭಾರತೀಯ ಚುನಾವಣಾ ಆಯೋಗವು ರಾಜ್ಯಕ್ಕೆ ಮೂರು ದಿನಗಳ ಭೇಟಿ ಆರಂಭಿಸಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ನೇತೃತ್ವದ ನಿಯೋಗವು ಮೂರು ದಿನಗಳ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು, ಲಕ್ನೋದಲ್ಲಿ ರಾಜ್ಯದ ಎಲ್ಲ ರಾಷ್ಟ್ರೀಯ ಪಕ್ಷ ಹಾಗೂ ಸ್ಥಳೀಯ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗದ ನಿಯೋಗವು ಉತ್ತರ ಪ್ರದೇಶ ಪೊಲೀಸ್ ಹಾಗೂ ಕೇಂದ್ರೀಯ ಭದ್ರತಾ ಪಡೆಗಳ ಜೊತೆಗೆ ಚರ್ಚೆ ನಡೆಸಲಿದೆ.
ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಅನೂಪ್ ಚಂದ್ರ ಪಾಂಡೆ ಸೇರಿದಂತೆ ಇತರೆ ಹಿರಿಯ ಅಧಿಕಾರಿಳನ್ನೊಳಗೊಂಡ ಆಯೋಗ ಮಂಗಳವಾರದಿಂದ ಗುರುವಾರದವರೆಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮೊದಲ ದಿನ ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯದ ಪ್ರಾದೇಶಿಕ ಪಕ್ಷಗಳ ನಾಯಕರೊಂದಿಗೆ ಕೇಂದ್ರೀಯ ಚುನಾವಣಾ ಆಯೋಗದ ನಿಯೋಗವು ಚರ್ಚೆ ನಡೆಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಹುಲ್ ಶರ್ಮಾ ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯುಕ್ತರೊಂದಿಗೆ ಸಭೆ:
ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಶುಕ್ಲಾ, ರಾಜ್ಯ ಪೊಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆಗಳ ನೋಡಲ್ ಅಧಿಕಾರಿಗಳೊಂದಿಗೆ ಚುನಾವಣಾ ನಿಯೋಗದ ಸಭೆ ನಡೆಯಲಿದೆ. ಮಂಗಳವಾರ ವಿವಿಧ ಜಾರಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಚರ್ಚಿಸಲು ಎಲ್ಲಾ 75 ಜಿಲ್ಲೆಗಳ ವಿಭಾಗೀಯ ಆಯುಕ್ತರು, ಜಿಲ್ಲಾ ಚುನಾವಣಾ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು (ವಲಯ) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಬುಧವಾರ ಕೇಂದ್ರೀಯ ಚುನಾವಣಾ ನಿಯೋಗವು ಸಭೆ ನಡೆಸಲಿದೆ. ಗುರುವಾರ, ಚುನಾವಣಾ ಸಮಿತಿಯು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಲಿದ್ದು, ತದನಂತರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದೆ.
ಉತ್ತರ ಪ್ರದೇಶ ಚುನಾವಣೆ ಮುಂದೂಡಿಕೆ ಊಹಾಪೋಹ:
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಹಿನ್ನೆಲೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ನಿಗದಿತ ಸಮಯಕ್ಕಿಂತ ಮೊದಲೇ ನಡೆಸಬೇಕು. ಇಲ್ಲವೇ ಚುನಾವಣೆ ಅನ್ನು ಮುಂದೂಡಿಕೆ ಮಾಡಬೇಕು ಎಂಬುದರ ಕುರಿತು ಹರದಾಡುತ್ತಿರುವ ಊಹಾಪೋಹಗಳ ನಡುವೆ ಕೇಂದ್ರೀಯ ಚುನಾವಣಾ ಆಯೋಗವು ಲಕ್ನೋ ಪ್ರವಾಸವನ್ನು ಆರಂಭಿಸಿದೆ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಚುನಾವಣೆ ಮುಂದೂಡಿಕೆ ಆಗುವುದು ಬಹುತೇಕ ಅನುಮಾನವಾಗಿದೆ.