ಉತ್ತರ ಪ್ರದೇಶ: ಸ್ಯಾನಿಟೈಸರ್ ಬಳಸಿ ಬೆಂಕಿ ಹಚ್ಚಿ ಪತ್ರಕರ್ತ ಮತ್ತು ಸ್ನೇಹಿತನ ಕೊಲೆ
ಲಕ್ನೋ, ಡಿಸೆಂಬರ್ 1: ಸ್ಯಾನಿಟೈಸರ್ ಬಳಸಿ ಬೆಂಕಿ ಹಚ್ಚಿ 37 ವರ್ಷದ ಪತ್ರಕರ್ತ ಮತ್ತು ಆತನ ಸ್ನೇಹಿತನನ್ನು ಸುಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಗ್ರಾಮದ ಮುಖ್ಯಸ್ಥನ ಮಗ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಲಕ್ನೋ ಮೂಲದ ಪತ್ರಿಕೆಗೆ ಕೆಲಸ ಮಾಡುತ್ತಿದ್ದ ರಾಕೇಶ್ ಸಿಂಗ್ ನಿರ್ಭಿಕ್ ಮತ್ತು ಅವರ ಸ್ನೇಹಿತ ಪಿಂಟು ಸಾಹು (34) ಲಕ್ನೋದಿಂದ ಸುಮಾರು 160 ಕಿಮೀ ದೂರದಲ್ಲಿರುವ ಬಲರಾಮಪುರ ಗ್ರಾಮದ ರಾಕೇಶ್ ಸಿಂಗ್ ಮನೆಯಲ್ಲಿ ಕಳೆದ ಶುಕ್ರವಾರ ತೀವ್ರ ಸುಟ್ಟಗಾಯಗಳ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾಹು ಆಗಲೇ ಮೃತಪಟ್ಟಿದ್ದರೆ, ರಾಕೇಶ್ ಸಿಂಗ್ ತೀವ್ರ ಗಂಭೀರ ಸ್ಥಿತಿಯಲ್ಲಿದ್ದರು. ಅವರನ್ನು ಲಕ್ನೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೆಲವು ಗಂಟೆಗಳ ಬಳಿಕ ಅವರು ಮೃತಪಟ್ಟಿದ್ದರು.
ಅಕ್ರಮ ಜಮೀನು ಮಾರಾಟದ ವರದಿ ಮಾಡಿದ್ದಕ್ಕೆ ಪತ್ರಕರ್ತನ ಬರ್ಬರ ಹತ್ಯೆ
ಸ್ಥಳೀಯ ಗ್ರಾಮದ ಮುಖ್ಯಸ್ಥ ಮತ್ತು ಅವರ ಮಗನ ಭ್ರಷ್ಟಾಚಾರಗಳ ಬಗ್ಗೆ ನಿರಂತರವಾಗಿ ಪತ್ರಿಕೆಗೆ ಬರೆಯುತ್ತಿದ್ದುದರ ಕುರಿತು ಆಸ್ಪತ್ರೆ ಅಧಿಕಾರಿಗಳಿಗೆ ಸಾಯುವ ಮೊದಲು ರಾಕೇಶ್ ಮಾಹಿತಿ ನೀಡಿದ್ದರು. 'ಸತ್ಯವನ್ನು ವರದಿ ಮಾಡಿದ್ದಕ್ಕೆ ಸಿಕ್ಕ ಬೆಲೆ ಇದು' ಎಂದು ರಾಕೇಶ್ ಹೇಳುವುದು 2.5 ನಿಮಿಷದ ವಿಡಿಯೋದಲ್ಲಿ ದಾಖಲಾಗಿದೆ. ಅದರಲ್ಲಿ ಅವರು ಅತೀವ ನೋವಿನಿಂದ ಅಳುವುದು ಕಾಣಿಸುತ್ತದೆ.
ಘಟನೆ ನಡೆದು ಮೂರು ದಿನಗಳ ಬಳಿಕ, ಸೋಮವಾರ ಬಲರಾಮಪುರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಗ್ರಾಮ ಪ್ರಧಾನನ ಮಗ ರಿಂಕು ಮಿಶ್ರಾ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಅಕ್ರಂ ಮತ್ತು ಆತನ ಸ್ನೇಹಿತ ಲಲಿತ್ ಮಿಶ್ರಾ ಎಂಬುವವರನ್ನು ಬಂಧಿಸಲಾಗಿದೆ.
ಭೂ ಮಾಫಿಯಾ ವರದಿಗಾರಿಕೆ: ಹಾಡಹಗಲೇ ಲೈಟ್ ಕಂಬಕ್ಕೆ ಕಟ್ಟಿ ಪತ್ರಕರ್ತನ ಮೇಲೆ ಹಲ್ಲೆ
Recommended Video
ರಾಕೇಶ್ ಮತ್ತು ಅವರ ಸ್ನೇಹಿತನ ಮೇಲೆ ಆಲ್ಕೋಹಾಲ್ ಆಧಾರಿಯ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಎರಚಿದ್ದ ಆರೋಪಿಗಳು ಬಳಿಕ ಬೆಂಕಿ ಹಚ್ಚಿದ್ದಾರೆ. ಬಳಿಕ ಇದು ಆಕಸ್ಮಿಕ ಘಟನೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ತನಿಖೆ ವೇಳೆ ಈ ಕೃತ್ಯದ ಹಿಂದೆ ಸಂಚು ಇರುವುದು ಪತ್ತೆಯಾಗಿತ್ತು.