ಉ.ಪ್ರ.ದಲ್ಲಿ ಬೀಡಾಡಿ ದನಗಳ ಸಮಸ್ಯೆಗೆ ಇತಿಶ್ರೀ ಹಾಡಲು ಗೋ ಧಾಮ ಸ್ಥಾಪನೆ
ಲಕ್ನೋ, ಏ. 20: ಉತ್ತರ ಪ್ರದೇಶದಲ್ಲಿ ಬೀಡಾಡಿ ದನಗಳ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹಾಗೂ ಗೋ ಸಂರಕ್ಷಣೆಯ ಉದ್ದೇಶದಿಂದ ಅಲ್ಲಿನ ಸರಕಾರ 30 ಜಿಲ್ಲೆಗಳಲ್ಲಿ ಗೋ ಪಾಲನಾ ಅಥವಾ ಹಸು ಆಶ್ರಯ ತಾಣಗಳನ್ನು ಸ್ಥಾಪಿಸಲು ಯೋಜಿಸಿದೆ. ಈ ವಿಚಾರವನ್ನು ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾನೂನು ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಜನರು ಅನಗತ್ಯವೆನಿಸಿದ ದನಗಳನ್ನ ಬೀದಿಗೆ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಇದು ರಸ್ತೆ ಸಂಚಾರ ಸೇರಿದಂತೆ ಸಾರ್ವಜನಿಕರಿಗೆ ಬಹಳ ಕಿರಿಕಿರಿಯ ವಿಚಾರವಾಗಿತ್ತು. ಕಳೆದ ವಿಧಾನಸಭೆಯಲ್ಲಿ ಇದು ಚರ್ಚೆಯ ವಿಷಯವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಉ.ಪ್ರ. ಸರಕಾರ ಈ ಬೀಡಾಡಿ ದನಗಳ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗೋ ಧಾಮಗಳನ್ನ ಸ್ಥಾಪಿಸುತ್ತಿದೆ.
ಒಂದೇ ದಿನ ರಂಜಾನ್, ಅಕ್ಷಯ ತೃತೀಯ: ಯುಪಿಯಲ್ಲಿ ಹೊಸ ಗೈಡ್ಲೈನ್
ಉತ್ತರಪ್ರದೇಶದ ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಇಂದ್ರಮಣಿ ನೀಡಿರುವ ಮಾಹಿತಿ ಪ್ರಕಾರ, ಮೂರ್ನಾಲ್ಕು ತಿಂಗಳಲ್ಲಿ 50 ಸಾವಿರ ಬೀಡಾಡಿ ದನಗಳಿಗೆ ಆಶ್ರಯ ಕೊಡಲಾಗುವುದು. ಆರು ತಿಂಗಳಲ್ಲಿ ಈ ಸಂಖ್ಯೆಯನ್ನ ಒಂದು ಲಕ್ಷಕ್ಕೆ ಏರಿಸಲಾಗುವುದು ಎಂದೆನ್ನಲಾಗಿದೆ.
"ಉತ್ತರ ಪ್ರದೇಶದಲ್ಲಿ ಈಗಾಗಲೇ ಗೋ ಪಾಲನ ಕೇಂದ್ರಗಳು ಇವೆ. ಇವುಗಳ ಜೊತೆಗೆ ಗೋ ಧಾಮಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗುತ್ತದೆ. ಇರುವ ಗೋ ಪಾಲನ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ೩೦ ಜಿಲ್ಲೆಗಳಲ್ಲಿ ಗೋ ಧಾಮಗಳನ್ನು ಸ್ಥಾಪಿಸಿ ಆದಷ್ಟೂ ಹೆಚ್ಚು ಬೀಡಾಡಿ ದನಗಳನ್ನ ಕಾಪಾಡಿ ಪೋಷಿಸಲಾಗುತ್ತದೆ" ಎಂದು ಇಂದ್ರಮಣಿ ಹೇಳಿದ್ದಾರೆ.
ಈ ಗೋಧಾಮದ ಸುತ್ತ ಬೇಲಿ ನಿರ್ಮಿಸಲಾಗುವುದು. ನೀರು ಮತ್ತು ಮೇವಿನ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದ ಅವರು, ಸಾಧ್ಯವಾದಷ್ಟೂ ಎಲ್ಲಾ ಬೀಡಾಡಿ ದನಗಳನ್ನ ರಕ್ಷಿಸುವುದು ಈ ಮಹತ್ ಯೋಜನೆಯ ಉದ್ದೇಶ ಎಂದು ತಿಳಿಸಿದ್ದಾರೆ.
12ಲಕ್ಷ ಬೀಡಾಡಿ ದನಗಳು: 2019ರಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ಉತ್ತರಪ್ರದೇಶದಲ್ಲಿ ಸುಮಾರು 11.84 ಲಕ್ಷದಷ್ಟು ಸಂಖ್ಯೆಯಲ್ಲಿ ಬೀಡಾಡಿ ದನಗಳಿವೆ. ಹಿಂದಿನ ಅವಧಿಯಲ್ಲಿ ಯೋಗಿ ನೇತೃತ್ವದ ಸರಕಾರ 9.3 ಲಕ್ಷ ಬೀಡಾಡಿ ದನಗಳಿಗೆ ಆಶ್ರಯ ಒದಗಿಸಿರುವುದು ತಿಳಿದುಬಂದಿದೆ. ಈಗ ಉಳಿದ ದನಗಳಿಗೂ ಆಶ್ರಯ ಒದಗಿಸುವ ಕಾರ್ಯಯೋಜನೆಯಾಗಿ ಗೋ ಧಾಮಗಳನ್ನ ಸ್ಥಾಪಿಸಲಾಗುತ್ತಿದೆಯಂತೆ.
ಸಗಣಿ ಇತ್ಯಾದಿ ಬಳಕೆ: ಗೋಧಾಮ, ಗೋ ಸಂರಕ್ಷಣೆ ಕೇಂದ್ರಗಳಲ್ಲಿರುವ ದನಗಳಿಂದ ಬರುವ ಸಗಣಿ ಇತ್ಯಾದಿ ತ್ಯಾಜ್ಯವನ್ನು ಬಯೋಗ್ಯಾಸ್ ಘಟಕಗಳಿಗೆ ಸರಬರಾಜು ಮಾಡುವ ಯೋಜನೆ ಇದೆ. ಕಾನಪುರ್ ಮೊದಲಾದೆಡೆ ಬಯೋಗ್ಯಾಸ್ ಯೂನಿಟ್ಗಳಿಗೆ. ಹಾಗೆಯೇ ವಾರಾಣಸಿ ಸೇರಿದಂತೆ ಕೆಲವೆಡೆ ಗೋಬರ್ ಗ್ಯಾಸ್ ಘಟಕ ಸ್ಥಾಪಿಸಲಾಗುತ್ತಿದೆ. ಗೋ ಕೇಂದ್ರಗಳಿಂದಷ್ಟೇ ಅಲ್ಲದೆ ರೈತರಿಂದಲೂ ಸರಕಾರ ಸೆಗಣಿಯನ್ನು ಖರೀದಿಸುವ ಯೋಜನೆ ಹಾಕಿಕೊಂಡಿದೆ.
ಗೋ ಧಾಮ ಕೇಂದ್ರದ ಕಲ್ಪನೆ ಈಗ ಮಾಡಿದ್ದಲ್ಲ. ಹಿಂದಿನ ಅವಧಿಯಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಅವರು ಮಿರ್ಜಾಪುರ್ ಜಿಲ್ಲೆಯಲ್ಲಿ ಗೋ ಧಾಮ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದರು. ಹಾಗೆಯೇ, ಬಿಡಾಡಿ ದನಗಳಿಗೆ ಆಶ್ರಯ ಒದಗಿಸಲು 'ಗೋವಂಶ್ ಆಶ್ರಯ್ ಅಸ್ಥಳ್' ಕೇಂದ್ರಗಳನ್ನು ಸ್ಥಾಪಿಸಲು 2019ರಲ್ಲಿ ಉ.ಪ್ರ. ಸರಕಾರದ ಸಂಪುಟ ಅನುಮೋದನೆ ಕೊಟ್ಟಿತ್ತು.
ಸಹಾಯಧನ: ಹಾಗೆಯೇ, ಒಂದು ಬೀಡಾಡಿ ದನಕ್ಕೆ ಆಶ್ರಯ ಕೊಟ್ಟು ಪೋಷಿಸುವ ಯಾವುದೇ ವ್ಯಕ್ತಿಗೆ ದಿನಕ್ಕೆ 30 ರೂ ಸಹಾಯಧನವನ್ನು ನೀಡುವ ಯೋಜನೆಯೂ ಉ.ಪ್ರ.ದಲ್ಲಿ ರೂಪಿಸಲಾಗಿದೆ.
Recommended Video
ಸರಕಾರಿ ಜಮೀನಿನಲ್ಲಿ ಮೇವು ಬೆಳೆ: ಇನ್ನು, ಬೀಡಾಡಿ ದನಕ್ಕೆ ಮೇವಿನ ವ್ಯವಸ್ಥೆ ಮಾಡಲು ರಾಜ್ಯ ಸರಕಾರ ತನ್ನ ಪಾಳು ಜಮೀನನ್ನು ಬಳಸಿಕೊಳ್ಳಲು ನಿರ್ಧರಿಸಿದೆ. "ಜಿಲ್ಲೆಗಳಲ್ಲಿರುವ ಎಲ್ಲಾ ಸರಕಾರಿ ಜಮೀನನ್ನು ಗುರುತಿಸಬೇಕು. ಯಾವುದೇ ಅತಿಕ್ರಮಣ ಇದ್ದರೂ ತೆರವುಗೊಳಿಸಬೇಕು. ಈ ಸರಕಾರಿ ಜಮೀನನ್ನ ಗೋ ಪಾಲನೆ ಕೇಂದ್ರಗಳಿಗೆ ಮೇವು ಒದಗಿಸಲು ಬಳಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ" ಎಂದು ಪಶು ಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)