ಯುಪಿ ಅಪ್ರಾಪ್ತಳ ಮೇಲೆ ಗ್ಯಾಂಗ್ರೇಪ್: 6 ಮಂದಿ ಪೊಲೀಸರ ವಿರುದ್ಧ ಕೇಸ್
ಲಲಿತ್ಪುರ ಮೇ 4: ಉತ್ತರ ಪ್ರದೇಶದ ಲಲಿತ್ಪುರ ಜಿಲ್ಲೆಯಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ಟೇಷನ್ ಹೌಸ್ ಆಫೀಸ್ (SHO) ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆಯನ್ನು ನಾಲ್ವರು ಯುವಕರು ಆಮಿಷವೊಡ್ಡಿ ಏಪ್ರಿಲ್ 22 ರಂದು ಭೋಪಾಲ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಅಪ್ರಾಪ್ತ ಬಾಲಕಿ ಅವರಿಂದ ತಪ್ಪಿಸಿಕೊಂಡು ಮನೆಗೆ ತಲುಪಿದ್ದಾಳೆ. ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ದೂರು ದಾಖಲಿಸಲು ಹೋದಾಗ ಠಾಣೆಯ ಪೊಲೀಸರು ದೂರು ಸ್ವೀಕರಿಸಿಲ್ಲ. ಬಳಿಕ ಸಂತ್ರಸ್ತೆಯ ಕುಟುಂಬ ಮಕ್ಕಳ ಕಲ್ಯಾಣ ಸಮಿತಿ ಮಾಹಿತಿ ನೀಡಿದೆ.
ಚೈಲ್ಡ್ಲೈನ್ ಅಧಿಕಾರಿಗಳು ಹದಿಹರೆಯದವರನ್ನು ಪ್ರಶ್ನಿಸಿದಾಗ, ಸಂತ್ರಸ್ತ ಬಾಲಕಿ ಇಡೀ ಘಟನೆಯನ್ನು ವಿವರಿಸಿದ್ದಾಳೆ. ನಂತರ ಚೈಲ್ಡ್ಲೈನ್ ಕಲ್ಯಾಣ ಸಮಿತಿಯು ಅಪರಾಧದ ಬಗ್ಗೆ ಲಲಿತ್ಪುರ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ತಲುಪಿಸಿದೆ. ಇದರ ಬೆನ್ನಲ್ಲೇ ಎಸ್ಪಿ ಎಸ್ಎಚ್ಒ ತಿಲಕಧಾರಿ ಸರೋಜ ಸೇರಿದಂತೆ ಆರು ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಎಸ್ಎಚ್ಒ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಎಲ್ಲಾ ಆರೋಪಿಗಳ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ನಿಖಿಲ್ ಪಾಠಕ್ ತಿಳಿಸಿದ್ದಾರೆ. ''ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಇತರ ಆರೋಪಿಗಳು ಸೇರಿದಂತೆ ಎಸ್ಎಚ್ಒ ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು' ಎಂದು ಎಸ್ಪಿ ತಿಳಿಸಿದ್ದಾರೆ.
ಬಿಜೆಪಿ ಮೇಲೆ ಎಸ್ಪಿ ವಾಗ್ದಾಳಿ
ಲಲಿತ್ಪುರ ಜಿಲ್ಲೆಯ ಪಾಲಿ ಪೊಲೀಸ್ ಠಾಣೆಯ ಸರ್ಕಾರಿ ಕ್ವಾರ್ಟರ್ಸ್ನಲ್ಲಿ ಬಾಲಕಿಯ ಮೇಲೆ ಠಾಣಾಧಿಕಾರಿ ಅತ್ಯಾಚಾರವೆಸಗಿದ ನಂತರ ಈ ಘಟನೆಯಲ್ಲಿ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ. ಹೀಗಾಗಿ ಯೋಗಿ ಸರ್ಕಾರ ಈ ವಿಚಾರದಲ್ಲಿ ದೊಡ್ಡ ಕ್ರಮ ಕೈಗೊಂಡಿದೆ. ಪಾಲಿ ಪೊಲೀಸ್ ಠಾಣೆಯ 6 ಎಸ್ಐಗಳು, 6 ಹೆಡ್ ಕಾನ್ಸ್ಟೆಬಲ್ಗಳು, 10 ಕಾನ್ಸ್ಟೆಬಲ್ಗಳು, 5 ಮಹಿಳಾ ಕಾನ್ಸ್ಟೆಬಲ್ಗಳು, ಒಬ್ಬ ಚಾಲಕ ಮತ್ತು ಒಬ್ಬ ಅನುಯಾಯಿ ಸೇರಿದಂತೆ 29 ಪೊಲೀಸರನ್ನು ವಿಚಾರಣೆಗೆ ಒಳಪಡಿಸಿದೆ.
ವಿಚಾರಣೆ ತೀವ್ರಗೊಳಿಸಿದ ಸರ್ಕಾರ
ಈ ಕುರಿತು ಮಾಹಿತಿ ನೀಡಿದ ಕಾನ್ಪುರ ವಲಯ ಎಡಿಜಿ ಭಾನು ಭಾಸ್ಕರ್, ಪಾಲಿ ಪೊಲೀಸ್ ಠಾಣೆಯ ಎಲ್ಲ ಪೊಲೀಸರನ್ನು ಸರತಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಇದೇ ವೇಳೆ ತನಿಖೆಯನ್ನು ಡಿಐಜಿ ಝಾನ್ಸಿ ಜೋಗೇಂದ್ರ ಕುಮಾರ್ ಅವರಿಗೆ ವಹಿಸಲಾಗಿದ್ದು, ಅವರು 24 ಗಂಟೆಯೊಳಗೆ ತನಿಖಾ ವರದಿ ನೀಡಲಿದ್ದಾರೆ. ಪತ್ತೆಯಾದ ಪಾಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಲ್ಲಿ 6 ಎಸ್ಐಗಳು, 6 ಹೆಡ್ ಕಾನ್ಸ್ಟೆಬಲ್ಗಳು, 10 ಕಾನ್ಸ್ಟೆಬಲ್ಗಳು, 5 ಮಹಿಳಾ ಕಾನ್ಸ್ಟೆಬಲ್ಗಳು, 1 ಚಾಲಕ ಮತ್ತು 1 ಅನುಯಾಯಿ ಸೇರಿದ್ದಾರೆ. ಅಷ್ಟೇ ಅಲ್ಲ, ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ದಲಿತ ಬಾಲಕಿ ಮೇಲೆ ಅತ್ಯಾಚಾರ
ಏಪ್ರಿಲ್ 22 ರಂದು ಅಪ್ರಾಪ್ತ ಬಾಲಕಿ ನಾಲ್ವರೊಂದಿಗೆ ಬೇರೆಯದ್ದೇ ಕಾರಣಕ್ಕೆ ದೂರು ನೀಡಲು ಠಾಣೆಗೆ ಆಗಮಿಸಿದ್ದಳು. ಈ ವೇಳೆ ಪೊಲೀಸ್ ಠಾಣೆಯ ಎಸ್ಎಚ್ಒ ಸಂತ್ರಸ್ತೆಯನ್ನು ತನ್ನ ಅಧಿಕೃತ ಕ್ವಾರ್ಟರ್ಸ್ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿ ಪಾಲಿ ಪೊಲೀಸ್ ಠಾಣೆಗೆ ಬಾಲಕಿ ದೂರು ನೀಡಿದ್ದರು. ಸಂತ್ರಸ್ತೆ ತನ್ನ ಹಿಂದಿನ ಘಟನೆಯನ್ನು ಎಸ್ಪಿಗೆ ಹೇಳಿದ್ದು, ಆರೋಪಿ ಇನ್ಸ್ಪೆಕ್ಟರ್ ಲೈನ್ ಹಾಜರುಪಡಿಸಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಎಸ್ಎಚ್ಒ ಸೇರಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ಪೊಲೀಸ್ ತಂಡಗಳ ರಚನೆ
ಇಲ್ಲಿ ಪ್ರಕರಣ ದಾಖಲಾದ ಸುದ್ದಿ ತಿಳಿದ ತಕ್ಷಣ ಆರೋಪಿ ಎಸ್ಎಚ್ಒ ತಿಲಕಧಾರಿ ಸರೋಜ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಐಜಿ ಜೋಗೇಂದ್ರ ಕುಮಾರ್ ಮೂರು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ತಂಡವೂ ಆರೋಪಿಗಳ ಹುಡುಕಾಟದಲ್ಲಿ ತೊಡಗಿದೆ. ಆತನ ಪತ್ತೆಗಾಗಿ ಪ್ರಯಾಗ್ರಾಜ್ನ ಗಂಗಾಪರ್ ಪ್ರದೇಶದಲ್ಲಿ ತಡರಾತ್ರಿ ದಾಳಿ ನಡೆಸಲಾಗಿದೆ. ಕುಟುಂಬ ಸದಸ್ಯರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಡಿಐಜಿ ತಿಳಿಸಿದ್ದಾರೆ. ಮತ್ತೊಂದೆಡೆ, ವಿಷಯದ ಸೂಕ್ಷ್ಮತೆಯ ದೃಷ್ಟಿಯಿಂದ ಡಿಐಜಿ ಜೋಗೇಂದ್ರ ಕುಮಾರ್ ಲಲಿತ್ಪುರದಲ್ಲಿ ಮೊಕ್ಕಾಂ ಹೂಡಿದ್ದಾರೆ.