ಉ.ಪ್ರ. ಬಿಜೆಪಿ ಮುಖಂಡ ಗೌತಮ್ ಕಠೇರಿಯಾ ಮೇಲೆ ಗುಂಡಿನ ದಾಳಿ
ಲಕ್ನೋ, ಜೂನ್ 19: ಮೂರು ತಿಂಗಳ ಅಂತರದಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿಯಾದ ಘಟನೆ ನಡೆದಿದೆ. ಬಿಜೆಪಿಯ ದಲಿತ ಮುಖಂಡ ಹಾಗೂ ಪಕ್ಷದ ಪರಿಶಿಷ್ಟ ಜಾತಿ ಯುವ ಮೋರ್ಚಾದ ಮೈನಪುರಿ ಜಿಲ್ಲಾ ಘಟಕದ ಅಧ್ಯಕ್ಷ ಗೌತಮ್ ಕಠೇರಿಯಾ (Gautam Kathariya) ಮೇಲೆ ಶನಿವಾರ ಸಂಜೆಯ ನಂತರ ಗುಂಡಿನ ದಾಳಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡಿನ ದಾಳಿ ಮಾಡಿದ್ಧಾರೆ. ಭುಜದ ಬಳಿ ಬುಲೆಟ್ ಪೆಟ್ಟು ಬಿದ್ದಿದೆ" ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೈನಪುರಿ ಪಟ್ಟಣದಲ್ಲಿ ನಡೆದ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಬಿಜೆಪಿ ನಾಯಕ ಗೌತಮ್ ಕಠೇರಿಯಾ ಅವರನ್ನು ಆಗ್ರಾದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿರುವುದು ತಿಳಿದುಬಂದಿದೆ.

ಭೋಗಾಂವ್ ನಿವಾಸಿಯಾಗಿರುವ ಗೌತಮ್ ಕಠೇರಿಯಾ ಶನಿವಾರದಂದು ಔಷಧ ಖರೀದಿಸಲು ಮೈನಪುರಿಗೆ ಬಂದಿದ್ದರು. ಔಷಧ ಪಡೆದು ತಮ್ಮ ಮನೆಗೆ ವಾಪಸ್ ಹೋಗುತ್ತಿದ್ದಾಗ ಆಗಂತುಕರು ಅಡ್ಡಗಟ್ಟಿ ಗುಂಡು ಹಾರಿಸಿದರೆನ್ನಲಾಗಿದೆ.
ಮಾರ್ಚ್ನಲ್ಲಿ ಬಿಜೆಪಿ ಯುವ ಮುಖಂಡ ಗೌರವ್ ಬಲಿ:
ಉತ್ತರ ಪ್ರದೇಶದಲ್ಲಿ ಇದೇ ಮಾರ್ಚ್ ತಿಂಗಳಲ್ಲಿ ಬಿಜೆಪಿ ಮುಖಂಡರೊಬ್ಬರ ಹತ್ಯೆಯಾಗಿತ್ತು. ಬಿಜೆಪಿಯ ಉ.ಪ್ರ. ಯುವ ಘಟಕದ ಮಾಜಿ ಕಾರ್ಯದರ್ಶಿಯಾಗಿದ್ದ ಗೌರವ್ ಜೈಸ್ವಾಲ್ ಮೇಲೆ ಅಪರಿಚಿತರ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು.
ಮಹಾರಾಜಗಂಜ್ ಜಿಲ್ಲೆಯಲ್ಲಿ ನಡೆದ ಆ ದಾರುಣ ದಾಳಿ ಘಟನೆಯಲ್ಲಿ ಜೈಸ್ವಾಲ್ ತಲೆಗೆ ದುರುಳರು ಗುಂಡುಹೊಡೆದು ಪರಾರಿಯಾಗಿದ್ದರು. ಎಫ್ಐಆರ್ ದಾಖಲಿಸಲಾಯಿತಾದರೂ ಆರೋಪಿಗಳು ಯಾರೆಂದು ಇನ್ನೂ ನಿಗೂಢವಾಗಿಯೆ ಇದೆ.
ಮಹಾರಾಜಗಂಜ್ ನಗರಪಾಲಿಕೆ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರ ಸಂಬಂಧಿ ಗೌರವ್ ಜೈಸ್ವಾಲ್ ಬಿಜೆಪಿಯಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಉತ್ತರ ಪ್ರದೇಶದದಲ್ಲಿ ಬಿಜೆಪಿಯ ಸ್ವಚ್ಛತಾ ಅಭಿಯಾನದ ಸಹ-ಸಂಚಾಲಕರಾಗಿಯೂ ಜವಾಬ್ದಾರಿ ನಿಭಾಯಿಸಿ ಗಮನ ಸೆಳೆದಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications