ಉತ್ತರಪ್ರದೇಶದಲ್ಲಿ 38 ವರ್ಷದ ರೂಢಿ; ಸಿಎಂ ಸೇರಿ ಎಲ್ಲ ಸಚಿವರ ಐಟಿ ಸರಕಾರದಿಂದ ಪಾವತಿ
Recommended Video
ಲಖನೌ, ಸೆಪ್ಟೆಂಬರ್ 13: 1981ರಿಂದ ಈಚೆಗೆ ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಆದಾಯ ತೆರಿಗೆಯನ್ನು ಸರಕಾರದ ಹಣದಲ್ಲೇ ಕಟ್ಟಲಾಗುತ್ತಿದೆ ಎಂಬ ಸಂಗತಿ ಬಯಲಾಗಿದ್ದು, ಈಗ ವಿವಿಧ ವಲಯಗಳಿಂದ ಅಚ್ಚರಿ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.
ಶುಕ್ರವಾರದಂದು ನಿಯತಕಾಲಿಕೆಯೊಂದರಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ ಸಚಿವರು 'ಬಡವರು' ಅನ್ನಿಸುತ್ತದೆ ಮತ್ತು ತಮ್ಮದೇ ದುಡಿಮೆಯಲ್ಲಿ ಇವರಿಗೆ ತೆರಿಗೆ ಪಾವತಿಸಲು ಸಹ ಆಗುತ್ತಿಲ್ಲ ಎಂದು ವರದಿ ಮಾಡಲಾಗಿದೆ.
ಉತ್ತರಪ್ರದೇಶದಲ್ಲಿ ವೇತನ, ಭತ್ಯೆ ಮತ್ತು ಇತರೆ ಕಾಯ್ದೆ, 1981 ಇದನ್ನು ವಿಶ್ವನಾಥ್ ಪ್ರತಾಪ್ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದರು. ಆಗಿನಿಂದ ಹತ್ತೊಂಬತ್ತು ಮುಖ್ಯಮಂತ್ರಿಗಳು, ಯೋಗಿ ಆದಿತ್ಯನಾಥ್, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಾಯಾವತಿ, ಕಲ್ಯಾಣ್ ಸಿಂಗ್, ರಾಜ್ ನಾಥ್ ಸಿಂಗ್ ಮತ್ತಿತರರು ಕಾಯ್ದೆಯ ಲಾಭ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಪ್ರಶ್ನೆ ಕೇಳಲು ಮಾಧ್ಯಮಗಳು ವಿವಿಧ ಪಕ್ಷಗಳ ವಕ್ತಾರರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರೊಬ್ಬರು ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಕಾಯ್ದೆಯನ್ನು ವಿ. ಪಿ. ಸಿಂಗ್ ಸರಕಾರವೇ ಜಾರಿಗೆ ತಂದರೂ ಇದರ ಅನುಕೂಲ ಪಡೆದವರು ಕಾಂಗ್ರೆಸ್ಸೇತರ ಸರಕಾರದವರೇ ಎಂದಿದ್ದಾರೆ.
ಈ ಕಾಯ್ದೆ ಜಾರಿಗೆ ತರುವ ವೇಳೆ ಮಾತನಾಡಿದ್ದ ವಿ. ಪಿ. ಸಿಂಗ್, ಹಲವು ಸಚಿವರ ಆದಾಯ ತೆರಿಗೆ ಹೊರೆಯನ್ನು ಸರಕಾರವೇ ಭರಿಸಬೇಕು. ಏಕೆಂದರೆ ಹಲವರು ಬಡ ಕುಟುಂಬದ ಹಿನ್ನೆಲೆಯವರು ಹಾಗೂ ಕಡಿಮೆ ಆದಾಯ ಇರುವವರು ಎಂದಿದ್ದರು. ಉತ್ತರಪ್ರದೇಶದ ಖಜಾನೆಯಿಂದ ಈ ತನಕ ಮುಖ್ಯಮಂತ್ರಿಗಳು, ಅವರ ಸಂಪುಟದ ಸಚಿವರು ಸೇರಿ ಸಾವಿರ ಮಂದಿಯ ಆದಾಯ ತೆರಿಗೆ ಪಾವತಿಸಲಾಗಿದೆ.
ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಸಚಿವರ ಆದಾಯ ತೆರಿಗೆಯನ್ನೂ ಕಳೆದ ಎರಡು ವರ್ಷದಿಂದ ಸರಕಾರದ ಖಜಾನೆಯಿಂದಲೇ ಭರಿಸಲಾಗಿದೆ. ಈ ವರ್ಷ ಯೋಗಿ ಆದಿತ್ಯನಾಥ್ ಮತ್ತಿತರರ ತೆರಿಗೆ ಸೇರಿ 86 ಲಕ್ಷ ರುಪಾಯಿ ಸರಕಾರದ ಖಜಾನೆಯಿಂದ ತುಂಬಲಾಗಿದೆ.
ಆಸಕ್ತಿಕರ ಸಂಗತಿ ಏನೆಂದರೆ, ಸಚಿವರಾಗಿರುವವರ ಪೈಕಿ ಹಲವರು ಕೋಟಿ ಕುಳಗಳು. ಚುನಾವಣೆಯ ಅಫಿಡವಿಟ್ ನಲ್ಲೇ ಅದು ಖಾತ್ರಿ ಆಗುತ್ತದೆ. ಚರ- ಸ್ಥಿರಾಸ್ತಿಗಳು ಕೋಟ್ಯಂತರ ರುಪಾಯಿ ಬಾಳುತ್ತವೆ.
ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ (ಹಣಕಾಸು) ಸಂಜೀವ್ ಮಿತ್ತಲ್ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ. ಕಾಯ್ದೆ ಅನ್ವಯ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸಚಿವರ ಆದಾಯ ತೆರಿಗೆಯನ್ನು ರಾಜ್ಯ ಸರಕಾರ ಪಾವತಿಸಲೇ ಬೇಕು ಎಂದಿದ್ದಾರೆ.












Click it and Unblock the Notifications