ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಪ್ರದಾಯಕ್ಕೆ ಜಾತ್ಯತೀತತೆ ಬಹುದೊಡ್ಡ ಬೆದರಿಕೆ: ಯೋಗಿ
ಲಕ್ನೋ, ಮಾರ್ಚ್ 8: ಜಾಗತಿಕ ಮಟ್ಟದಲ್ಲಿನ ಭಾರತದ ಘನತೆಗೆ ಜಾತ್ಯತೀತತೆಯು ಬಹುದೊಡ್ಡ ಬೆದರಿಕೆಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಲ್ಪ ಹಣಕ್ಕಾಗಿ ದೇಶದ ಕುರಿತು ಅಪಪ್ರಚಾರ ಮಾಡುವ ಜನರು ಅದರ ಬಿಸಿ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಮಾಯಣದ ಕುರಿತಾದ ಜಾಗತಿಕ ಎನ್ಸೈಕ್ಲೋಪೀಡಿಯಾದ ಮೊದಲ ಆವೃತ್ತಿಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಯೋಗಿ, 'ತಮ್ಮ ಲಾಭಕ್ಕಾಗಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುತ್ತಿರುವ ಜನರು ಮತ್ತು ದೇಶಕ್ಕೆ ದ್ರೋಹ ಎಸಗುತ್ತಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಹಣಕ್ಕಾಗಿ ದೇಶದ ಕುರಿತು ಸುಳ್ಳು ಪ್ರಚಾರ ಸೃಷ್ಟಿಸುತ್ತಿರುವ ಜನರು ಅದರ ಬಿಸಿಯನ್ನು ಎದುರಿಸಲಿದ್ದಾರೆ' ಎಂದು ಹೇಳಿದ್ದಾರೆ.
ರಾಮನನ್ನು ವಿರೋಧಿಸಿದ್ದ ಸರ್ಕಾರದ ಸ್ಥಿತಿ ಈಗೇನಾಗಿದೆ ನೋಡಿ; ಯೋಗಿ ಆದಿತ್ಯಾನಾಥ್
ಐತಿಹಾಸಿಕ ಸತ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಯೋಗಿ, ಅಯೋಧ್ಯಾದಲ್ಲಿ ಶ್ರೀರಾಮನ ಅಸ್ತಿತ್ವವಿದ್ದ ಬಗ್ಗೆ ಈಗಲೂ ಪ್ರಶ್ನೆ ಎತ್ತುವಂತಹ ಜನರು ಇದ್ದಾರೆ ಎಂದು ಟೀಕಿಸಿದ್ದಾರೆ. ಕ್ಷುಲ್ಲಕ ಕೋಮು ವಿವಾದಗಳಲ್ಲಿ ಸಿಲುಕಿಕೊಳ್ಳುವ ಮೂಲಕ ದೇಶದ ಸಾಮರಸ್ಯ ಉತ್ಸಾಹವನ್ನು ಹಾಳುಮಾಡದಂತೆ ಜನರಿಗೆ ಅವರು ಮನವಿ ಮಾಡಿದ್ದಾರೆ.
ಹಿಂದುತ್ವದಿಂದ ಬೌದ್ಧ ಧರ್ಮ
ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸುತ್ತಿರುವವರತ್ತ ಹರಿಹಾಯ್ದ ಅವರು, ಕಾಂಬೋಡಿಯಾದ ತಮ್ಮ ಭೇಟಿಯ ವೇಳೆ ಬೌದ್ಧ ಮಾರ್ಗದರ್ಶಿಯೊಬ್ಬರು ಅಂಗ್ಕೋರ್ ವಾಟ್ ದೇವಾಲಯದಲ್ಲಿ ಸಿಕ್ಕಿದ್ದ ಕಥೆಯನ್ನು ಹೇಳಿದರು. ದೇವಾಲಯದ ಮಾರ್ಗದರ್ಶಕರು, ಹಿಂದುತ್ವದಿಂದಲೇ ಬೌದ್ಧಧರ್ಮ ಉಗಮವಾಗಿರುವುದನ್ನು ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಜೀವನ ಪಾಠ ಮಾತ್ರವಲ್ಲ...
'ರಾಮಾಯಣ ಮತ್ತು ಮಹಾಭಾರತದ ಕಥೆಗಳು ನಮಗೆ ಜೀವನದ ಅತ್ಯುತ್ತಮ ಪಾಠಗಳನ್ನು ಮಾತ್ರ ಕಲಿಸಿಕೊಡುವುದಿಲ್ಲ, ಜತೆಗೆ ಭಾರತದ ಗಡಿಗಳ ವಿಸ್ತೀರ್ಣದ ಬಗ್ಗೆಯೂ ನಮಗೆ ಸಾಕಷ್ಟು ತಿಳಿಸುತ್ತವೆ. ನಮ್ಮ ಹಿಂದೂ ಮಹಾಪುರಾಣಗಳ ಈ ಕಥೆಗಳು ಉತ್ತಮ ಭಾರತದ ಸೃಷ್ಟಿಗಾಗಿ ನಮಗೆ ಸಹಾಯ ಮಾಡುತ್ತವೆ' ಎಂದು ಹೇಳಿದ್ದಾರೆ.
ಅಯೋಧ್ಯೆ; ಕರ್ನಾಟಕದ ಯಾತ್ರಿನಿವಾಸ ನಿರ್ಮಾಣಕ್ಕೆ ಭೂಮಿ ಭರವಸೆ
ಪಾಕ್ ಭಾರತದ ಭಾಗವಾಗಿತ್ತು
'1947ಕ್ಕಿಂತ ಮೊದಲು ಪಾಕಿಸ್ತಾನವು ಭಾರತದ ಭಾಗವಾಗಿತ್ತು. ಮರ್ಯಾದಾ ಪುರುಷೋತ್ತಮ ಶ್ರೀರಾಮ, ತನ್ನ ಸೋದರನನ್ನು ಪಾಕಿಸ್ತಾನದ ಆಡಳಿತಗಾರನನ್ನಾಗಿ ಮಾಡುವ ಮೂಲಕ, ಭಾರತದ ಎಲ್ಲೆಗಳನ್ನು ತನ್ನ ಸಮಯದಲ್ಲಿ ವಿಸ್ತರಿಸಿದ್ದ' ಎಂದಿದ್ದಾರೆ.
ಪವಿತ್ರ ಧಾರ್ಮಿಕ ಸ್ಥಳಗಳು
'ಸಪ್ತಪುರಿ ಎಂಬ ಏಳು ಪವಿತ್ರ ನಗರಗಳಿವೆ. ಇವುಗಳನ್ನು ಹಿಂದೂ ಯಾತ್ರಾರ್ಥಿಗಳ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳಗಳೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಅಯೋಧ್ಯಾ, ಮಥುರಾ ಮತ್ತು ಕಾಶಿ ಉತ್ತರ ಪ್ರದೇಶದಲ್ಲಿವೆ. ಸಂಸ್ಕೃತಿ ಇಲಾಖೆಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದಲ್ಲಿ ಇಲ್ಲಿ ಕಾರ್ಯಾಗಾರ ಆಯೋಜಿಸಿರುವುದು ನಮ್ಮ ಹೆಮ್ಮೆ' ಎಂದು ತಿಳಿಸಿದ್ದಾರೆ.