ಹಿಂದೂಗಳ ಭಾವನೆ ಪರಿಗಣಿಸದ ಕೋರ್ಟ್: ಆರೆಸ್ಸೆಸ್ ಆಕ್ರೋಶ
ಪ್ರಯಾಗ್ರಾಜ್, ಫೆಬ್ರುವರಿ 1: ಅಯ್ಯಪ್ಪನ ಭಕ್ತರು ಹಿಂದೂ ಸಮಾಜದ ಅವಿಭಾಜ್ಯ ಭಾಗ, ಮತ್ತು ಅವರ ಸಂಕಷ್ಟಗಳು ಇಡೀ ಹಿಂದೂ ಸಮಾಜದ ಸಂಕಷ್ಟವೂ ಹೌದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಪ್ರಯಾಗದಲ್ಲಿ ವಿಎಚ್ಪಿ ಧರ್ಮ ಸಂಸದ್ನಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ವಯಸ್ಸಿನ ಮಿತಿಯನ್ನು ತೆಗೆದುಹಾಕಿ ಆದೇಶ ಹೊರಡಿಸಿದ್ದರೂ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಬಯಸುತ್ತಿಲ್ಲ. ಹೀಗಾಗಿ ಶ್ರೀಲಂಕಾದಿಂದ ಮಹಿಳೆಯರನ್ನು ಕರೆದುಕೊಂಡು ಬಂದು ಹಿಂಬಾಗಿಲಿನ ಮೂಲಕ ಒಳಗೆ ಕಳುಹಿಸಲಾಯಿತು ಎಂದು ಆರೋಪಿಸಿದ್ದಾರೆ.
ಒಂದು ಧಾರ್ಮಿಕ ಸ್ಥಳಕ್ಕೆ ವಿವಿಧ ವರ್ಗಗಳ ಭಕ್ತರು ಭೇಟಿ ನೀಡಬಹುದು. ಅದು ಸಾರ್ವಜನಿಕ ಸ್ಥಳವಲ್ಲ. ಅದು ನಿರ್ದಿಷ್ಟ ಸಮುದಾಯದ ಸ್ಥಳ. ಅದಕ್ಕೆ ಅದರದ್ದೇ ಆದ ಸಂಪ್ರದಾಯ, ಆಚರಣೆಯಿದೆ. ಆದರೆ, ತನ್ನ ಆದೇಶ ದೇಶದ ಬಹುಸಂಖ್ಯೆಯ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ ಎಂಬುದನ್ನು ಕೋರ್ಟ್ ಯೋಚಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೋರ್ಟ್ ಆದೇಶ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ ಎಂದಿದ್ದಾರೆ.

ಇಡೀ ದೇಶ ಶಬರಿಮಲೆಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಬೇಕಿದೆ. ಹೀಗಾಗಿ ಫೆ. 1-15ರವರೆಗೂ ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಧರ್ಮ ಸಂಸದ್ನ ಗುರುವಾರದ ಕಾರ್ಯಕ್ರಮದಲ್ಲಿ 'ಅಯೋಧ್ಯಾ ಚಳವಳಿಯೊಂದಿಗೆ ಶಬರಿಮಲೆಯ ಸಂಪ್ರದಾಯ ಮತ್ತು ನಂಬಿಕೆಯ ರಕ್ಷಣೆಯ ಸಮೀಕರಣದ ಹೋರಾಟ' ಹಾಗೂ 'ಹಿಂದೂ ಸಮಾಜವನ್ನು ಒಡೆಯುವ ಸಂಚು' ಕುರಿತು ಚರ್ಚಿಸಲಾಯಿತು.
ಶುಕ್ರವಾರದ ಕಾರ್ಯಕ್ರಮದಲ್ಲಿ ರಾಮ ಮಂದಿರ ವಿವಾದ ಚರ್ಚೆಗೆ ಬರಲಿದೆ.












Click it and Unblock the Notifications